ಹಳೆಯ ದರದಲ್ಲಿಯೇ ರಸಗೊಬ್ಬರ ಮಾರಾಟಕ್ಕೆ ಸೂಚಿಸಿದ ಸರ್ಕಾರ
ನವದೆಹಲಿ, ಏಪ್ರಿಲ್ 9: ಯೂರಿಯಾಯೇತರ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ದರವನ್ನು (ಎಂಆರ್ಪಿ) ಹೆಚ್ಚಳ ಮಾಡದಂತೆ ಮತ್ತು ಅವುಗಳನ್ನು ಹಿಂದಿನ ದರದಲ್ಲಿಯೇ ಮಾರಾಟ ಮಾಡುವಂತೆ ರಸಗೊಬ್ಬರ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ಸೂಚಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾಯೇತರ ರಸಗೊಬ್ಬರಗಳ ಆಂತರಿಕ ಚಿಲ್ಲರೆ ದರದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಸಗೊಬ್ಬರ ಕಂಪೆನಿಗಳಿಗೆ ಈ ಸಂಬಂಧ ನಿರ್ದೇಶನ ನೀಡಲಾಗಿದೆ.
ಕೊಡಗಿಗೂ ಬಂತು ಕ್ಯಾಂಪ್ಕೊ ಖರೀದಿ ಕೇಂದ್ರ: ಗೋಣಿಕೊಪ್ಪಲುವಿನಲ್ಲಿ ಏ.13ರಂದು ಉದ್ಘಾಟನೆ
ಡಿ ಅಮೋನಿಯಂ ಫಾಸ್ಫೇಟ್ (ಡಿಎಪಿ), ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಒಪಿ) ಮತ್ತು ಎನ್ಪಿಕೆಯಂತಹ ಯೂರಿಯಾಯೇತರ ರಸಗೊಬ್ಬರಗಳ ಚಿಲ್ಲರೆ ದರದ ಮೇಲೆ ನಿಯಂತ್ರಣವಿರುವುದಿಲ್ಲ ಮತ್ತು ಅವುಗಳನ್ನು ಉತ್ಪಾದಕರು ನಿರ್ಧರಿಸುತ್ತಾರೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಅವುಗಳಿಗೆ ಸಬ್ಸಿಡಿ ನಿಗದಿಮಾಡುತ್ತದೆ.
'ಭಾರತ ಸರ್ಕಾರವು ಉನ್ನತ ಮಟ್ಟದ ಸಭೆ ಕರೆದಿತ್ತು ಮತ್ತು ಡಿಎಪಿ, ಎಂಒಪಿ ಮತ್ತು ಎನ್ಪಿಕೆಗಳ ದರವನ್ನು ಏರಿಕೆ ಮಾಡದಂತೆ ರಸಗೊಬ್ಬರ ಕಂಪೆನಿಗಳಿಗೆ ಸೂಚನೆ ನೀಡಿತ್ತು. ಇದಕ್ಕೆ ರಸಗೊಬ್ಬರ ಕಂಪೆನಿಗಳು ಸಮ್ಮತಿ ಸೂಚಿಸಿವೆ' ಎಂದು ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಹಳೆಯ ದರದಲ್ಲಿಯೇ ಸಂಕೀರ್ಣ ರಸಗೊಬ್ಬರಗಳನ್ನು ಮಾರಾಟ ಮಾಡುವಂತೆ ಸೂಚನೆ ನೀಡಲಾಗಿದೆ. ರೈತರು ಡಿಎಪಿ, ಎಂಒಪಿ ಮತ್ತು ಎನ್ಪಿಕೆ ಪೌಷ್ಟಿಕಾಂಶಗಳನ್ನು ಹಿಂದಿನ ದರದಲ್ಲಿಯೇ ಪಡೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸತತ ಬೆಲೆ ಹೆಚ್ಚಳದಿಂದ ತತ್ತರಿಸಿದ್ದ ರೈತರಿಗೆ ರಸಗೊಬ್ಬರ ದರದಲ್ಲಿ ಏಕಾಏಕಿ ಭಾರಿ ಹೆಚ್ಚಳ ಮಾಡಿದ್ದು, ಆತಂಕ ಮೂಡಿಸಿತ್ತು. ಕ್ರಿಭ್ಕೊ, ಎಂಸಿಎಫ್ಎಲ್, ಜುವಾರಿ ಆಗ್ರೋ ಕೆಮಿಕಲ್ಸ್, ಪ್ಯಾರಾಡೀಪ್ ಪ್ರಾಸ್ಫೇಟ್ಸ್ ಮುಂತಾದ ಕಂಪೆನಿಗಳು ಡಿಎಪಿ ದರವನ್ನು ಪ್ರತಿ ಚೀಲಕ್ಕೆ 1200ರಿಂದ 1,900ರವರೆಗೂ ಹೆಚ್ಚಿಸಿವೆ. ಎನ್ಪಿಕೆ 10.26.26 ರಸಗೊಬ್ಬರ 1175 ರೂ. ಇದ್ದಿದ್ದು ಹೊಸ ಬೆಲೆ 1775 ರೂ. ಆಗಿದೆ 12.32.16 ರಸಗೊಬ್ಬರ ಬೆಲೆ 1185 ರೂ ಇತ್ತು. ಪರಿಷ್ಕೃತ ದರ 1800 ರೂ ಆಗಿದೆ.