ಈರುಳ್ಳಿ ರಫ್ತು ನಿಷೇಧ ಹಿಂದಕ್ಕೆ, ಬೆಂಗಳೂರು ರೋಸ್ ಅರಳಲಿದೆ
ನವದೆಹಲಿ, ಡಿ. 29: ಜನವರಿ 01, 2021ರಿಂದ ಈರುಳ್ಳಿ ಮೇಲೆ ಹೇರಿದ್ದ ರಫ್ತು ನಿಷೇಧವನ್ನು ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಬೆಳೆಗಾರರಿಗೆ ಶುಭ ಸುದ್ದಿ ಸಿಕ್ಕಿದೆ.
ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದಿಂದ ನಿಷೇಧ ಹಿಂತೆಗೆದುಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿದ್ದು, ಬೆಂಗಳೂರು ರೋಸ್ ಸೇರಿದಂತೆ ಎಲ್ಲಾ ಬಗೆಯ ಈರುಳ್ಳಿ ಬೆಳೆ ರಫ್ತು ಮಾಡಲು ಅನುಮತಿ ಸಿಗಲಿದೆ.
ಈರುಳ್ಳಿ ಬೆಲೆ ಏರಿಕೆಯಾಗ್ತಿದ್ದಂತೆ ಸೃಷ್ಟಿಯಾಯ್ತು ಬಗೆಬಗೆಯ ಮಿಮ್ಸ್, ಜೋಕ್ಸ್
ಬೆಂಗಳೂರು ರೋಸ್, ಕೃಷ್ಣಾಪುರಂ ಈರುಳ್ಳಿ ಬೆಳೆಯನ್ನು ಎಲ್ಲಾ ರೀತಿಯಲ್ಲಿ ಅಂದರೆ ಹಸಿ, ಕತ್ತರಿಸಿ, ಪುಡಿ ರೂಪದಲ್ಲಿ ಬೇಕಾದರೂ ರಫ್ತು ಮಾಡಲು ಅನುಮತಿ ನೀಡಿ ವಿದೇಶ ವ್ಯಾಪಾರ ನಿರ್ದೇಶನಾಲಯವು ಅಧಿಸೂಚನೆ ಹೊರಡಿಸಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಹಾಗೂ ಬಳಕೆ ಅಗತ್ಯ ಮನಗಂಡು ರಫ್ತು ನಿಷೇಧ ಹೇರಲಾಗಿತ್ತು. ಈರುಳ್ಳಿ ಬೆಲೆ ಗಗನಕ್ಕೇರಿತ್ತು. ದೇಶದ ವಿವಿಧ ಮಾರುಕಟ್ಟೆಗಳಲ್ಲಿಈರುಳ್ಳಿ ರೀಟೇಲ್ ದರ ಕೆಜಿಗೆ 75ರಿಂದ 120 ರೂ. ದಾಟಿತ್ತು.
ಅಗತ್ಯವಸ್ತುಗಳ ಕಾಯ್ದೆಗೆ ಕೆಲವು ದಿನಗಳ ಹಿಂದಷ್ಟೇ ತಿದ್ದುಪಡಿ ತಂದಿದ್ದ ಸರ್ಕಾರ, ಅಗತ್ಯ ವಸ್ತುಗಳ ಪಟ್ಟಿಯಿಂದ ಈರುಳ್ಳಿಯನ್ನು ಕೈಬಿಟ್ಟಿತ್ತು. ಆದರೆ ಈಗ ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ಸಂಗ್ರಹದ ಮೇಲೆ ಮಿತಿ ವಿಧಿಸಿತ್ತು.ಚಿಲ್ಲರೆ ಮಾರಾಟಗಾರರು 20 ಕ್ವಿಂಟಾಲ್ ಹಾಗೂ ಸಗಟು ಮಾರಾಟಗಾರರು 250 ಕ್ವಿಂಟಾಲ್ ಈರುಳ್ಳಿ ಸಂಗ್ರಹ ಮಿತಿ ನಿಗದಿಯಾಗಿತ್ತು.
ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಬಾರಿ 43 ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಳೆ, ಪ್ರವಾಹದಿಂದ ಬೆಳೆ ನಾಶವಾಗಿದ್ದು, ಉತ್ಪಾದನೆಯ ಅಂದಾಜನ್ನು 36 ಲಕ್ಷ ಟನ್ಗೆ ಪರಿಷ್ಕರಿಸಲಾಗಿತ್ತು.