ಕೃಷಿ ಕಾಯ್ದೆ: ಯಾರ ಕೈಯಲ್ಲಿದೆ ಕೇಂದ್ರ ಸರ್ಕಾರಕ್ಕೆ ಚುಕ್ಕಾಣಿ?
ನವದೆಹಲಿ, ಜುಲೈ 04: "ಕೇಂದ್ರ ಸರ್ಕಾರವನ್ನು ರಾಜಕೀಯ ಪಕ್ಷವೊಂದು ನಡೆಸುತ್ತಿಲ್ಲ, ಬದಲಿಗೆ ಕಂಪನಿಯೊಂದು ಆಡಳಿತ ನಡೆಸುತ್ತಿದೆ, ಹೀಗಾಗಿಯೇ ಯಾವುದೇ ರೀತಿಯ ಚರ್ಚೆಗಳು ನಡೆಯುತ್ತಿಲ್ಲ" ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
ಹರಿಯಾಣದ ರೋಹ್ಟಕ್ ನಲ್ಲಿ ಮಾತನಾಡಿದ ಅವರು, "ವಿವಾದಿತ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರುತ್ತಿಲ್ಲ, ಬದಲಿಗೆ ಷರತ್ತು ವಿಧಿಸುವ ಕೆಲಸ ಮಾಡುತ್ತಿದೆ," ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ರೈತ ಮುಖಂಡ ರಾಕೇಶ್ ಟಿಕಾಯತ್ಗೆ ಕೊಲೆ ಬೆದರಿಕೆ, ಇಂಜಿನಿಯರ್ ಬಂಧನ!
"ಕೃಷಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸುವುದಿಲ್ಲ, ಆದರೆ ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ನಾವು ಸಿದ್ಧ ಎನ್ನುವ ಮೂಲಕ ರೈತರಿಗೆ ಷರತ್ತು ವಿಧಿಸುವುದಕ್ಕೆ ಮುಂದಾಗಿದೆ. ಇದರಿಂದ ಕೇಂದ್ರ ಸರ್ಕಾರವನ್ನು ರಾಜಕೀಯ ಪಕ್ಷವೊಂದು ನಡೆಸುತ್ತಿದೆಯೋ ಅಥವಾ ಕಂಪನಿಯೊಂದು ಸರ್ಕಾರವನ್ನು ನಡೆಸುತ್ತಿದೆಯೋ" ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಪ್ರಶ್ನೆ ಮಾಡಿದ್ದಾರೆ.
ವಿವಾದಿತ ಕಾಯ್ದೆ ಬಗ್ಗೆ ಕೇಂದ್ರ ಕೃಷಿ ಸಚಿವರು ಹೇಳಿದ್ದೇನು?
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಸಂಧಾನ ಮಾತುಕತೆಯನ್ನು ಪುನಾರಂಭಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ," ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಘೋಷಿಸಿದ್ದರು. "ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಸನ್ನದ್ಧವಾಗಿದೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಬೇಡಿಕೆಯೊಂದನ್ನು ಹೊರತುಪಡಿಸಿ, ಮಧ್ಯರಾತ್ರಿ ರೈತ ಸಂಘಟನೆಗಳು ಕಾಯ್ದೆಯ ನಿಬಂಧನೆಗಳ ಬಗ್ಗೆ ಚರ್ಚಿಸಲು ಮುಂದಾದರೆ ಸರ್ಕಾರ ಅದಕ್ಕೆ ಆಹ್ವಾನ ನೀಡಲಿದೆ," ಎಂದು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು.
ಕೇಂದ್ರ ಸಚಿವರು ನಡೆಸಿದ 11 ಸುತ್ತಿನ ಚರ್ಚೆ ವಿಫಲ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆಹಾರ ಸಚಿವ ಪಿಯೂಶ್ ಗೋಯೆಲ್ ಸೇರಿದಂತೆ ಮೂವರು ಕೇಂದ್ರ ಸಚಿವರು ಪ್ರತಿಭಟನಾನಿರತ ಸಂಘಟನೆಗಳ ಜೊತೆಗೆ ಸಂಧಾನ ಸಭೆ ನಡೆಸಿದ್ದರು. ಈವರೆಗೂ ನಡೆಸಿದ 11 ಸುತ್ತಿನ ಸಂಧಾನ ಮಾತುಕತೆ ವಿಫಲಗೊಂಡಿತ್ತು. ಕಳೆದ ಜನವರಿ 22ರಂದು ಕೊನೆಯದಾಗಿ 41 ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವಿನ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು. ಇದಾಗಿ ನಾಲ್ಕು ದಿನಗಳಲ್ಲೇ ನಡೆದ ಜನವರಿ 26ರ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗಿದ್ದು, ಅಂದು ನವದೆಹಲಿಯಲ್ಲಿ ರೈತರು ನಡೆಸಿದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ನಿರಂತರ ಪ್ರತಿಭಟನೆ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮೈಕೊರೆಯುವ ಚಳಿ, ಕೊರೊನಾವೈರಸ್ ಭೀತಿಯ ನಡುವೆಯೂ ಜಗ್ಗದೇ ಕುಗ್ಗದೇ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.