Breaking: ಕಬ್ಬಿನ FRP ದರ ಹೆಚ್ಚಿಸಿದ ಕೇಂದ್ರ, ರೈತರ ಆಕ್ರೋಶ
ಬೆಂಗಳೂರು, ಆ.04: ಕೇಂದ್ರ ಸರಕಾರ ಕಬ್ಬಿನ ಎಫ್ಆರ್ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ) ದರ ನಿಗದಿ ಮಾಡಿದ್ದು, ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಇದನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.
ಅಕ್ಟೋಬರ್ನಿಂದ ಪ್ರಾರಂಭವಾಗುವ 2022-23 ಮಾರುಕಟ್ಟೆ ವರ್ಷಕ್ಕೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆಯನ್ನು ಬುಧವಾರ ಕ್ವಿಂಟಾಲ್ಗೆ 15 ರಿಂದ 305 ರೂ.ಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಹೆಚ್ಚಿಸಿದೆ. ಇದು ಕಬ್ಬು ಬೆಳೆಗಾರಿಗೆ ಅನ್ಯಾಯ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಕಬ್ಬಿನ ಬಾಕಿಗೆ ಪ್ರತಿಭಟನೆ: ರೈತರ ಬೇಡಿಕೆ ಈಡೇರಿಸಿದ ಪಂಜಾಬ್ ಸರ್ಕಾರ
ಈ ನಿರ್ಧಾರವು ಸುಮಾರು 5 ಕೋಟಿ ಕಬ್ಬು ಬೆಳೆಯುವ ರೈತರು, ಸಕ್ಕರೆ ಕಾರ್ಖಾನೆಗಳಲ್ಲಿ ಮತ್ತು ಸಂಬಂಧಿತ ಪೂರಕ ಚಟುವಟಿಕೆಗಳಲ್ಲಿ ಉದ್ಯೋಗದಲ್ಲಿರುವ ಸುಮಾರು 5 ಲಕ್ಷ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸರಕಾರ ಹೇಳಿದೆ.
"ಕಬ್ಬಿಗೆ ಬಳಸುವ ರಸಗೊಬ್ಬರದ ಪೊಟ್ಯಾಶ್ 850 ರಿಂದ 1700ಕ್ಕೆ ಏರಿಕೆಯಾಗಿದೆ. ಡಿಎಪಿ 1000 ರಿಂದ 1,350 ರೂ.ಗೆ ಏರಿಕೆಯಾಗಿದೆ. ಕಬ್ಬು ಕಟಾವು ಕೂಲಿ 350 ರಿಂದ 600 ರೂಪಾಯಿಗೆ, ಕಬ್ಬಿನ ಬೀಜದ ಬೆಲೆ 2500 ರಿಂದ 3200 ರೂಗೆ ಎಲ್ಲಾ ದರಗಳು ಏರಿಕೆಯಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಆರ್ಎಫ್ಪಿ ಕೇವಲ 15ರೂ. ಏರಿಕೆ ಮಾಡಿದೆ. ಟನ್ಗೆ 3,050 ರೂಪಾಯಿ ನಿಗದಿ ಮಾಡಿದೆ. ಇದು ನ್ಯಾಯವೇ" ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರಶ್ನಿಸಿದೆ.
'ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಆಧರಿತ ಪ್ರಮಾಣ 10 ರಿಂದ 10.25 ಕೆ ಏರಿಕೆ ಮಾಡಿ, ರೈತರಿಗೆ 50ರೂ ಹೆಚ್ಚುವರಿ ಹೊರೆ ಬರುವಂತೆ ಮಾಡಲಾಗಿದೆ. ಕೇಂದ್ರ ಸರಕಾರ ಕಬ್ಬು ಬೆಳೆ ರೈತರಿಗೆ ಮತ್ತೊಂದು ರೀತಿ ದ್ರೋಹ ಬಗೆದಿದೆ. ಕಬ್ಬು ಬೆಳೆಯುವ ರೈತರು ಸರಕಾರದ ಈ ನಿರ್ಧಾರವನ್ನು ಪುನರ್ ಪರಿಶೀಲನೆಗೆ ಒತ್ತಾಯಿಸುತ್ತೇವೆ" ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,200 ರೂ. ಎಫ್ಆರ್ಪಿ ದರ ನಿಗದಿ ಮಾಡಬೇಕು ಎಂದು ಕಬ್ಬು ಬೆಳೆಯುವ ರೈತರು ಆಗ್ರಹ ಮಾಡುತ್ತಿದ್ದಾರೆ. ರೈತರಿಗೆ ನೀಡಬೇಕಿರುವ ಕಬ್ಬಿನ ಬಾಕಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೈತರು ಮನವಿ ಸಲ್ಲಿಸಿದ್ದಾರೆ.
1966ರ ಕಬ್ಬು (ನಿಯಂತ್ರಣ) ಆದೇಶದ ಪ್ರಕಾರ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ರೈತರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆ ಎಫ್ಆರ್ಪಿಯಾಗಿದೆ. ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ರಾಜ್ಯಗಳು ತಮ್ಮದೇ ಆದ ಕಬ್ಬಿನ ಬೆಲೆಯನ್ನು ರಾಜ್ಯ ಸಲಹಾ ಬೆಲೆ (ಎಸ್ಎಪಿ) ಎಂದು ನಿಗದಿಪಡಿಸುತ್ತವೆ.