ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ತಾಳೆ ಯೋಜನೆ: ಆದರೆ...
ಭಾರತಕ್ಕೆ ಆಮದಾಗುತ್ತಿರುವ ಅಡುಗೆ ಎಣ್ಣೆ ಪ್ರಮಾಣ ಕಡಿಮೆ ಮಾಡಲು, ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ತಾಳೆ ಮರಗಳನ್ನು ಬೆಳೆಯಲು (ನ್ಯಾಷನಲ್ ಮಿಷನ್ ಆನ್ ಎಡಿಬಲ್ ಆಯಿಲ್ಸ್) 11,040 ಕೋಟಿ ರೂಪಾಯಿಯ ಯೋಜನೆಯೊಂದಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
2025- 26ರಷ್ಟರಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮತ್ತು 2029-30 ರಷ್ಟರಲ್ಲಿ 16.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಮರಗಳನ್ನು ಬೆಳೆಯಲು ಯೋಜಿಸಲಾಗಿದೆ. ಪ್ರಸ್ತುತ ಭಾರತ, ತನಗೆ ಅಗತ್ಯವಿರುವ ಶೇ.55 ರಿಂದ 60ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದರ ಅಂದಾಜು ಮೊತ್ತ 75,000 ಕೋಟಿ ರೂಪಾಯಿಗಳು.
ಎಣ್ಣೆಕಾಳುಗಳು ಉತ್ಪಾದನೆ ಹೆಚ್ಚಳ, ಅಡುಗೆ ಎಣ್ಣೆ ಬೆಲೆ ಇಳಿಕೆ ನಿರೀಕ್ಷೆ
ಹೀಗೆ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೊರಟಿರುವ ವಿಚಾರವನ್ನು ಸ್ವಾಗತಿಸುತ್ತಲೇ ಒಂದೆರಡು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಭಾರತ ಎಲ್ಲದರಲ್ಲೂ ವೈವಿಧ್ಯಮಯ ದೇಶ. ಆಹಾರದಲ್ಲೂ, ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಅಡುಗೆ ಎಣ್ಣೆಯೂ ಅಷ್ಟೇ, ಕೇರಳದಲ್ಲಿ ತೆಂಗಿನ ಎಣ್ಣೆ ಬಳಸುವವರು ಹೆಚ್ಚಾದರೆ, ಕರ್ನಾಟಕದ ಅನೇಕ ಭಾಗಗಳಲ್ಲಿ ಕಡಲೆ ಎಣ್ಣೆಯದ್ದೇ ಮೇಲುಗೈ.
ಇನ್ನು ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆ ಬಹಳ ಪ್ರಸಿದ್ಧಿ. ಹೀಗಿರುವಾಗ ತಾಳೆ ಅಥವಾ ಪಾಮ್ ಎಣ್ಣೆಯನ್ನು ಅಡುಗೆಗಾಗಿ ಬಳಸುವ ಮಂದಿ ಬಹಳ ಕಡಿಮೆ. ಹಾಗಾಗಿ ಎಲ್ಲಾ ರೀತಿಯ ಎಣ್ಣೆ ಕಾಳುಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು ಒಳ್ಳೆಯ ಯೋಜನೆ ಆಗಬಹುದಿತ್ತು. ಅಂದರೆ ಎಣ್ಣೆಕಾಳುಗಳಿಗೆ ಕನಿಷ್ಟ ಬೆಂಬಲ ಬೆಲೆ (ಲಾಭದಾಯಕ ಬೆಲೆ) ಕೊಟ್ಟು ಖರೀದಿಸುವ ಆಶ್ವಾಸನೆ ನೀಡಿದಲ್ಲಿ ರೈತರು ಅಗತ್ಯಕ್ಕೂ ಹೆಚ್ಚೇ ಬೆಳೆಯಲು ಉತ್ಸಾಹ ತೋರುತ್ತಾರೆ. ಆ ಬಗ್ಗೆ ಸರ್ಕಾರ ಗಮನ ಹರಿಸಬಹುದಿತ್ತು.
ಇನ್ನು ಎರಡನೆಯದು ತಾಳೆ ಬೆಳೆಯಲು ಆಯ್ಕೆ ಮಾಡಿಕೊಂಡಿರುವ ಜಾಗದ ಬಗ್ಗೆ ಒಂದಿಷ್ಟು ಕಾಳಜಿಗಳಿಗೆ. ಈಗ ಸರ್ಕಾರ ಆಯ್ಕೆ ಮಾಡಿಕೊಂಡಿರುವುದು ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ. ಈ ಎರಡೂ ಪ್ರದೇಶದಲ್ಲಿರುವ ಜೀವವೈವಿಧ್ಯತೆ, ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳು, ಮಳೆಕಾಡುಗಳು ಈಗ ಯೋಜಿಸಿರುವ ತಾಳೆ ತೋಟಗಳಿಂದ ನಾಶವಾಗಲಿವೆ.
ಇನ್ನು ಕಾಡು ಕಡಿದು ಏಕ ಬೆಳೆ ಬೆಳೆಯುವುದರಿಂದ ಕಾರ್ಬನ್ ಎಮಿಷನ್ ಹೆಚ್ಚಾಗುತ್ತದೆ ಎಂದು ಈಗಾಗಲೇ ನಡೆಸಿರುವ ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ತಾಳೆ ಬೆಳೆ ಯೋಜನೆಗೆ ಚಾಲನೆ ನೀಡಬಹುದಿತ್ತು. ಆದರೀಗ ಯೋಜನೆಗೆ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಅಪಾಯಗಳನ್ನು ಮೆಟ್ಟಿನಿಲ್ಲಲು ಸರ್ಕಾರದ ಮುಂದಿರುವ ಯೋಜನೆಯಾದರೂ ಏನು ಎಂಬುದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಸ್ವಾವಲಂಬನೆ ಸಾಧಿಸಲು ಸುಸ್ಥಿರ ಮಾರ್ಗವಿದ್ದರೆ ಜನ- ಜಾನುವಾರು, ಪರಿಸರ, ಕೃಷಿ ಭೂಮಿ ಎಲ್ಲದಕ್ಕೂ ಒಳ್ಳೆಯದು.