ರೈತರ ಆಕ್ರೋಶವನ್ನು ಶಮನಗೊಳಿಸುತ್ತಾರಾ ಕುಮಾರಸ್ವಾಮಿ?
Recommended Video
ಮೈಸೂರು, ಜು.10: ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗುತ್ತಾರೆ. ಚುನಾವಣೆ ಸಂದರ್ಭದಲ್ಲಿನೀಡಿದ ಭರವಸೆಯಂತೆ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನಮಗೆ ಶುಕ್ರದೆಸೆ ಆರಂಭವಾಗುತ್ತದೆ ಎಂಬಂತಹ ಕನಸು ಕಂಡಿದ್ದ ರೈತರು ಇದೀಗ ಬೀದಿಗಿಳಿದಿದ್ದಾರೆ.
ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಗೆಲುವು ಸಾಧಿಸದಿದ್ದರೂ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಸಹಕಾರದೊಂದಿಗೆ ಅಧಿಕಾರ ಹಿಡಿಯುವಂತಾಯಿತು. ಎಲ್ಲರ ಆಶಯದಂತೆ ಎಚ್ಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಗದ್ದುಗೆಯನ್ನು ಹಿಡಿದಿದ್ದಾರೆ.
ಕರ್ನಾಟಕ ಬಜೆಟ್: ಪ್ರತಿ ರೈತರ ಕುಟುಂಬದ 2 ಲಕ್ಷದವರೆಗಿನ ಸಾಲ ಮನ್ನಾ
ನಾನು ಮಣ್ಣಿನ ಮಗ, ರೈತರ ಕಷ್ಟಗಳು ನನಗೆ ಗೊತ್ತಿದೆ ಎನ್ನುತ್ತಾ ಮಂಡ್ಯದಲ್ಲಿ ಸಾಲದ ಬೇಗುದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಮುಂದೆ ಕಣ್ಣೀರಿಟ್ಟು ವೈಯಕ್ತಿಕ ಪರಿಹಾರ ನೀಡಿ ಅವತ್ತು ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗ ಜಾಡಿಸಿದ್ದರು.
ಜನ ಕುಮಾರಸ್ವಾಮಿ ಅವರನ್ನು ನಂಬಿದರು. ರೈತರ ಉದ್ದಾರವಾಗಬೇಕಾದರೆ ಕುಮಾರಸ್ವಾಮಿ ಸಿಎಂ ಆಗಲೇ ಬೇಕು ಅದಕ್ಕಾಗಿ ಜಿಲ್ಲೆಯಲ್ಲಿ ಜೆಡಿಎಸ್ನ್ನು ಗೆಲ್ಲಿಸಲೇ ಬೇಕೆಂಬ ತೀರ್ಮಾನಕ್ಕೆ ಬಂದರು. ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟು ಮಂಡ್ಯ ಜೆಡಿಎಸ್ನ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದರು.
ಹಾಗೆನೋಡಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ತವರು ಜಿಲ್ಲೆ ಮೈಸೂರು ಸೇರಿದಂತೆ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರಿಗೆ ಶಾಪವಾಗಿ ಪರಿಣಮಿಸಿತು.
ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೇ ಭುಗಿಲೆದ್ದಿತು ಸಿಎಂ ವಿರುದ್ಧ ಆಕ್ರೋಶ
ಏಕೆಂದರೆ ಮೇಲಿಂದ ಮೇಲೆ ಆತ್ಮಹತ್ಯೆಗಳಾಗುತ್ತಿದ್ದರೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಹೇಳಿಕೆ ನೀಡಲಿಲ್ಲ. ರೈತರ ಬಳಿಗೆ ತೆರಳಿ ಅವರ ಕಷ್ಟಗಳೇನು ಎಂದು ವಿಚಾರಿಸುವ ಗೋಜಿಗೂ ಹೋಗಲಿಲ್ಲ. ಆದರೆ ಆ ಸಮಯದಲ್ಲಿ ರೈತರ ಸಂಪೂರ್ಣ ಸಿಂಪಥಿ ಗಿಟ್ಟಿಸಿಕೊಂಡಿದ್ದು ಕುಮಾರಸ್ವಾಮಿ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಜೆಟ್ ಮಂಡನೆ ಬಳಿಕ ನಿಜವಾದ ತಲೆನೋವು ಆರಂಭವಾಗಿದೆ. ಷರತ್ತು ಸಹಿತ ಸಾಲಮನ್ನಾ ಮಾಡಲಾಗಿದೆ. ಜತೆಗೆ ರೈತರು ಮಾಡಿದ್ದ ನಿರೀಕ್ಷೆ ಮತ್ತು ಚುನಾವಣಾ ವೇಳೆ ನೀಡಿದ ಭರವಸೆಗಳು ಈಡೇರಿದಂತೆ ಕಾಣುತ್ತಿಲ್ಲ.
ಇಷ್ಟಕ್ಕೂ ರಾಜ್ಯದ ಖಜಾನೆ ಬರಿದಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಹಾಗಾಗಿ ಒಂದಷ್ಟು ಸರ್ಕಸ್ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಸಾಲಮನ್ನಾದ ತುಪ್ಪವನ್ನು ರೈತರ ತುಟಿಗೆ ಸವರಲಾಗಿದೆ. ಆದರೆ ಈ ತುಪ್ಪವನ್ನು ಕೂಡ ಜನ ಸಾಮಾನ್ಯರ ಕಿಸೆಯಿಂದ ಕಿತ್ತು ತರುವ ಯತ್ನ ಮಾಡಿದ್ದಾರೆ. ಇದರಿಂದ ಇತ್ತ ರೈತರ ಮತ್ತು ಅತ್ತ ಜನ ಸಾಮಾನ್ಯರ ಆಕ್ರೋಶಕ್ಕೂ ಒಳಗಾಗುವ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ.
ಇನ್ನೊಂದೆಡೆ ಕುಮಾರಸ್ವಾಮಿ ಅವರು ಅಧಿಕಾರ ಪಡೆದ ಬಳಿಕವೂ ಮಂಡ್ಯ ಮತ್ತು ಚಾಮರಾಜನಗರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ರೈತರ ಎಲ್ಲ ರೀತಿಯ ಸಾಲಮನ್ನಾ ಮಾಡುತ್ತೇನೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಹೀಗಾಗಿ ತಮ್ಮ ಎಲ್ಲ ಸಾಲಗಳು ಮನ್ನಾವಾಗಿ ನಾವು ಋಣ ಮುಕ್ತರಾಗುತ್ತೇವೆ ಎಂದು ಸಂತೋಷದಲ್ಲಿದ್ದ ರೈತರಿಗೆ ಮಾರ್ಮಾಘಾತವಾಗಿದೆ.
ಆದ್ದರಿಂದ ಮಂಡ್ಯ ಸೇರಿದಂತೆ ಚಾಮರಾಜನಗರ, ಮೈಸೂರು ಹೀಗೆ ಎಲ್ಲೆಡೆ ರೈತರು ಬೀದಿಗಿಳಿದು, ಸಿಎಂ ಕುಮಾರಸ್ವಾಮಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತರನ್ನು ಉದ್ದಾರ ಮಾಡುತ್ತೇನೆಂದು ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ರೈತರು ತಿರುಗಿ ಬಿದ್ದಿರುವುದು ಇರಿಸುಮುರಿಸನ್ನುಂಟು ಮಾಡಿದೆ.
ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮುಂದೆ ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ರೈತರ ಆಕ್ರೋಶವನ್ನು ಹೇಗೆ ಶಮನಗೊಳಿಸುತ್ತಾರೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ರೈತರು ಸಿಡಿದೆದ್ದರೆ ಏನಾಗುತ್ತದೆ ಎಂಬುದು ಕರ್ನಾಟಕದ ಇತಿಹಾಸವೇ ಹೇಳುತ್ತಿದೆ. ಹೀಗಿರುವಾಗ ಮುಂದೇನಾಗಬಹುದು? ಕಾದು ನೋಡುವುದು ಅನಿವಾರ್ಯವಾಗಿದೆ.