ಕೊಡಗಿಗೂ ಬಂತು ಕ್ಯಾಂಪ್ಕೊ ಖರೀದಿ ಕೇಂದ್ರ: ಗೋಣಿಕೊಪ್ಪಲುವಿನಲ್ಲಿ ಏ.13ರಂದು ಉದ್ಘಾಟನೆ
ಮಡಿಕೇರಿ, ಏಪ್ರಿಲ್ 8: ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಬೆಳೆಗಾರರಿಗೆ ಅನುಕೂಲವಾಗುವಂತೆ ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೊ (ಸೆಂಟ್ರಲ್ ಅರ್ಕನೆಟ್ ಆ್ಯಂಡ್ ಕೋಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಯುನಿಟ್) ಸಹಕಾರಿ ಸಂಸ್ಥೆಯು ಇದೀಗ ತನ್ನ ವಿಭಾಗವೊಂದನ್ನು ಕೊಡಗು ಜಿಲ್ಲೆಯಲ್ಲಿ ಪ್ರಾರಂಭಿಸಲು ಮುಂದಾಗಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಕರಿಮೆಣಸು ಬೆಳೆಗೆ ಸಂಬಂಧಿಸಿದಂತೆ ಗೋಣಿಕೊಪ್ಪಲುವಿನಲ್ಲಿ ಕ್ಯಾಂಪ್ಕೊ ಕರಿಮೆಣಸು ಖರೀದಿ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಇದು ಏ.13ರಂದು ಉದ್ಘಾಟನೆಗೊಳ್ಳಲಿದೆ.
ಏ.7ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ
ಈ ಸಂಸ್ಥೆಯು ದೇಶದ ದೊಡ್ಡ ಕೃಷಿ ಉತ್ಪನ್ನಗಳ ವಹಿವಾಟಿನ ಸಹಕಾರಿ ಸಂಸ್ಥೆಯಾಗಿದ್ದು, ದೇಶದ ಹಲವೆಡೆ ಸುಮಾರು 40ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. 1973ರಲ್ಲಿ ವಾರಣಾಸಿ ಸುಬ್ರಾಯ ಭಟ್ಟರು ಈ ಸಂಸ್ಥೆ ಪ್ರಾರಂಭಿಸಿದರು. ಕರ್ನಾಟಕ ಹಾಗೂ ಕೇರಳ ರಾಜ್ಯದ ಸುಮಾರು 1.25 ಲಕ್ಷ ಸದಸ್ಯರು ಕ್ಯಾಂಪ್ಕೊ ಸದಸ್ಯತ್ವ ಹೊಂದಿದ್ದಾರೆ.
ಬೆಳೆಗಾರರಿಗೆ ಬೆಂಬಲವಾಗಿ ನಿಲ್ಲಲು ಈ ಸಂಸ್ಥೆ
ಈ ಹಿಂದೆ ಅಡಿಕೆ ಬೆಲೆ ತೀವ್ರ ಕುಸಿತಗೊಂಡ ಸಂದರ್ಭ ಹಾಗೂ ಕೋಕೋ ಬೆಳೆ ನಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಈ ಬೆಳೆಗಾರರಿಗೆ ಬೆಂಬಲವಾಗಿ ನಿಲ್ಲಲು ಈ ಸಂಸ್ಥೆ ಮುಂದಾಗಿ ಹಂತ ಹಂತವಾಗಿ ಪ್ರಗತಿ ಸಾಧಿಸಿದೆ. ಚಾಕೊಲೇಟ್ ಕಾರ್ಖಾನೆಯನ್ನೂ ಈ ಸಂಸ್ಥೆ ಹೊಂದಿದ್ದು, 800 ರಿಂದ 1 ಸಾವಿರ ಉದ್ಯೋಗಸ್ಥರು ಇದ್ದಾರೆ. ಅಡಿಕೆ-ಕೋಕೋ ಬೆಳೆಗೆ ಧಕ್ಕೆಯಾದಾಗ ಬೆಳೆಗಾರರಿಗೆ ಸ್ಪಂದಿಸಿದಂತೆ ರಬ್ಬರ್ ಹಾಗೂ ಕರಿಮೆಣಸು ಬೆಳೆಗಾರರಿಗೂ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕೆಲ ವರ್ಷದಿಂದ ಈ ಬೆಳೆಗೂ, ರೈತರಿಗೆ ಪ್ರೋತ್ಸಾಹ ನೀಡಲು ಸಂಸ್ಥೆ ಮುಂದಾಗಿದೆ.
ಅಡಿಕೆ - ಕಾಳುಮೆಣಸು ಸಂಸ್ಕರಣಾ ಘಟಕ
ಇದರಂತೆ ಪ್ರಮುಖ ಕೇಂದ್ರವಾದ ಗೋಣಿಕೊಪ್ಪದಲ್ಲಿ ವಿಭಾಗ ಪ್ರಾರಂಭಿಸಲಾಗುತ್ತಿದೆ. ಪುತ್ತೂರಿನ ಕಾವು ಎಂಬಲ್ಲಿ ಅಡಿಕೆ - ಕಾಳುಮೆಣಸು, ಕೋಕೋ ಹಾಗೂ ರಬ್ಬರ್ ಸಂಸ್ಕರಣಾ ಘಟಕವೊಂದು 30 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗುತ್ತಿದ್ದು, ಇದು ಮೇ ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಕಿಶೋರ್ಕುಮಾರ್ ಕೂಡಗಿ "ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.
ರೈತರನ್ನು ಸಂಕಷ್ಟದಿಂದ ಪಾರು ಸಂಸ್ಥೆಯ ಚಿಂತನೆ
ಇದು ಸಹಕಾರಿ ಸಂಸ್ಥೆಯಾಗಿದ್ದು, ಸಂಸ್ಥೆಯ ಕಾರ್ಯಚಟುವಟಿಕೆಯಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ. ಮಾರುಕಟ್ಟೆಯನ್ನು ಸ್ಥಿರತೆಯಲ್ಲಿಡಲು ಸಂಸ್ಥೆ ಪ್ರಯತ್ನಿಸುತ್ತದೆ. ಎಲ್ಲಾ ವ್ಯವಹಾರಗಳು ಬ್ಯಾಂಕ್ ಮೂಲಕ ಅಧಿಕೃತ ಬಿಲ್ನ ಸಹಿತ ನಡೆಯುತ್ತದೆ. ಬೆಲೆ ಕುಸಿತದ ಸಂದರ್ಭ ರೈತರನ್ನು ಸಂಕಷ್ಟದಿಂದ ಪಾರು ಮಾಡುವದು ಸಂಸ್ಥೆಯ ಚಿಂತನೆಯಾಗಿದ್ದು, ಇದರಲ್ಲಿ ಯಶಸ್ಸು ಕಂಡಿದೆ. ಉತ್ಪನ್ನದ ನೇರ ಖರೀದಿಯನ್ನು ಮಾಡಲಾಗುವದು ಎಂದು ಅವರು ವಿವರಿಸಿದರು.
20 ಸಾವಿರ ಕೋಟಿಯಷ್ಟು ವಹಿವಾಟು ನಡೆಸಿದೆ
ಆರ್ಟಿಸಿ ಸಹಿತವಾಗಿ ನಿಗದಿತ ವಂತಿಗೆಯಂತೆ ರೈತ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗುವುದು ಮುಂದಿನ ದಿನದಲ್ಲಿ ಕೇರಳದ ವಯನಾಡು, ಕೊಟ್ಟಾಯಂ ಹಾಗೂ ಸಕಲೇಶಪುರದಲ್ಲಿಯೂ ಕೇಂದ್ರ ಪ್ರಾರಂಭಿಸುವ ಚಿಂತನೆ ನಡೆದಿದೆ. ಈ ಹಿಂದೆ ಈ ಸಂಸ್ಥೆಗೆ ಕರ್ನಾಟಕ ಹಾಗೂ ಕೇರಳ ಸರಕಾರದ ಷೇರು ಹಣ ಇತ್ತು. ಆದರೆ ಇದೀಗ ಇದನ್ನು ಹಿಂತಿರುಗಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯೇ ಪ್ರತ್ಯೇಕ ಸಹಕಾರಿ ಸಂಸ್ಥೆಯಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದು, ಈ ಬಾರಿ 20 ಸಾವಿರ ಕೋಟಿಯಷ್ಟು ವಹಿವಾಟು ನಡೆಸಿದೆ ಎಂದು ಕಿಶೋರ್ ಕೂಡಗಿ ತಿಳಿಸಿದರು. ಏ.13 ರಂದು ಕ್ಯಾಂಪ್ಕೊ ಕೇಂದ್ರವನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಲಿದ್ದು, ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಅವರು ಪಾಲ್ಗೊಳ್ಳಲಿದ್ದಾರೆ.