ಡಿಎಪಿ ರಸಗೊಬ್ಬರ ಸಬ್ಸಿಡಿ 700 ರೂ. ಹೆಚ್ಚಳ
ನವದೆಹಲಿ, ಜೂನ್ 17: ಡಿಎಪಿ ರಸಗೊಬ್ಬರದ ಮೇಲೆ ರೈತರಿಗೆ ನೀಡುವ ಸಬ್ಸಿಡಿಯನ್ನು 700 ರೂ,ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಈ ಮೊದಲು ಡಿಎಪಿ ರಸಗೊಬ್ಬರ ಖರೀದಿ ಮೇಲೆ ರೈತರಿಗೆ 500 ರೂ. ಸಬ್ಸಿಡಿ ನೀಡಲಾಗುತ್ತಿದ್ದು, ಅದನ್ನು ಈಗ 700 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವ ಮನಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಜಾಗತಿಕ ಬೆಲೆ ಏರಿಕೆ ಹೊರತಾಗಿಯೂ ರೈತರಿಗೆ ಹಳೆಯ ದರದಲ್ಲೇ ಡಿಎಪಿ ರಸಗೊಬ್ಬರ ಪೂರೈಸುವ ಉದ್ದೇಶದೊಂದಿಗೆ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 141775 ಕೋಟಿ ರೂ. ಹೊರೆ ಬೀಳಲಿದೆ. ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಶೇ.140 ಏರಿಸುವ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಡಿಎಪಿಗೆ (ಡೈ ಅಮೋನಿಯಂ ಫಾಸ್ಫೇಟ್) ಒಟ್ಟು 1200 ರೂಪಾಯಿ ಸಬ್ಸಿಡಿ ನೀಡಲು ನಿರ್ಧಾರವಾಗಿದೆ. ರೈತರಿಗೆ ಒಂದು ಮೂಟೆ ಡಿಎಪಿ 1,200 ರೂಪಾಯಿಗೆ ಸಿಗಲಿದೆ. ಮಾರ್ಕೆಟ್ನಲ್ಲಿ 1 ಮೂಟೆ ಡಿಎಪಿ ಬೆಲೆ 2,400 ರೂ. ಇದೆ. ಯೂರಿಯಾಗೆ 900 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಒಳನಾಡು ಜಲಸಾರಿಗೆ ಮಾರ್ಗದ ಅಭಿವೃದ್ಧಿಗೆ ನಿರ್ಣಯ ತೆಗೆದುಕೊಂಡರು. ಸಮುದ್ರದ ಆಳದ ಮಿಷನ್ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸಿಕ್ಕಿದೆ. ಇದರ ಮೂಲಕ ಸಾಕಷ್ಟು ಅಭಿವೃದ್ಧಿ ಕಾಣಬಹುದಾಗಿದೆ ಎಂದರು.
ಸಮುದ್ರದ 6 ಸಾವಿರ ಮೀಟರ್ ಒಳಭಾಗದಲ್ಲಿ ಖನಿಜಗಳಿವೆ. ಸಮುದ್ರದ ಆಳದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಯಲಿದೆ. ಅಡ್ವಾನ್ಸ್ ಮರೀನ್ ಸ್ಟೇಷನ್ ಸ್ಥಾಪಿಸಲಾಗುತ್ತದೆ ಎಂದು ಸಚಿವ ಜಾವಡೇಕರ್ ಮಾಹಿತಿ ನೀಡಿದರು.
ಸಾಗರದಾಳದ ಜೀವ ವೈವಿಧ್ಯ ಮತ್ತು ಹವಾಮಾನ ವೈಪರೀತ್ಯದ ಕುರಿತೂ ಇಲ್ಲಿ ಗಮನಿಸಲಾಗುತ್ತದೆ ಎಂದು ಸಚಿವರು ಹೇಳಿದರು.