Union Budget 2021; ರೈತರು ತಿಂದ ಪೆಟ್ಟಿಗೆ ಮದ್ದಾಗಬಹುದೇ ಈ ಬಾರಿಯ ಬಜೆಟ್?
ಕೊರೊನಾ ಸೋಂಕಿನಿಂದ ನಲುಗಿದ ಈ ಒಂದು ವರ್ಷದಲ್ಲಿ ದೇಶ ಸಾಕಷ್ಟು ಏರುಪೇರುಗಳನ್ನು ಕಂಡಿದೆ. ದೇಶದ ಆರ್ಥಿಕತೆಯೇ ಬುಡಮೇಲಾಗಿದ್ದು, ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದೇ ಕರೆಸಿಕೊಂಡಿರುವ "ಕೃಷಿ" ಮೇಲೂ ಹೊಡೆತ ಬಿದ್ದಿದೆ.
ಲಾಕ್ ಡೌನ್ ಕೃಷಿ ಕ್ಷೇತ್ರಕ್ಕೆ ಕೊಟ್ಟ ಸಂಕಷ್ಟವನ್ನು ಯಾವ ರೈತನೂ ಮರೆಯಲಾರನು. ಜೊತೆಗೆ ಈ ಬಾರಿ ದೀರ್ಘಾವಧಿ ಕಾಡಿದ ಮಳೆ ರೈತರಿಂದ ಇದ್ದುದನ್ನೂ ಕಸಿದುಕೊಂಡಿತ್ತು. ಮಣ್ಣಾಗಿ ಹೋದ ಬೆಳೆಗಳಿಗೆ ಪರಿಹಾರ ನೀಡುವ ರಾಜ್ಯ ಸರ್ಕಾರಗಳ ಸರ್ಕಸ್ ಗಳಿಗೂ ರೈತನ ನಷ್ಟವನ್ನು ತುಂಬಲು ಸಾಧ್ಯವಾಗಲಿಲ್ಲ. ಎಲ್ಲ ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತಿರುವಾಗಲೇ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಪರಿಚಯಿಸಿದ ಮೂರು ಕೃಷಿ ಕಾಯ್ದೆಗಳು ರೈತರ ಸಿಟ್ಟಿಗೆ ಕಾರಣವಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರೈತರು ರಾಜಧಾನಿಯವರೆಗೂ ಬಂದು ತಿಂಗಳುಗಟ್ಟಲೆ ಧರಣಿ ಕೂರುವಂತೆ ಮಾಡಿದವು.
ಬಜೆಟ್ 2021: ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ
ಕೇಂದ್ರ ರೈತರ ನಡುವೆ ನಡೆದ ಹನ್ನೊಂದು ಮಾತುಕತೆಗಳಲ್ಲೂ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಗಣರಾಜ್ಯೋತ್ಸವದಂದು ರೈತರ ಪರೇಡ್ ಸಂದರ್ಭ ನಡೆದ ಹಿಂಸಾಚಾರ, ಗಲಭೆ ಪ್ರತಿಭಟನೆಯ ದಿಕ್ಕನ್ನೂ ಬದಲಿಸಿತು. ಪ್ರತಿಭಟನೆಯಲ್ಲಿ ರಾಜಕೀಯ ಸೇರಿಕೊಂಡು ಕಲಸುಮೇಲೊಗರವಾಯಿತು. ಮುಂದೆ ಓದಿ...
ಕೃಷಿ ಕ್ಷೇತ್ರದ ಮುಂದಿನ ಬೆಳವಣಿಗೆಯೇನು?
ಈ ಎಲ್ಲಾ ಬೆಳವಣಿಗೆಗಳ ನಡುವೆ ದೇಶದ ಕೃಷಿ ಕ್ಷೇತ್ರದ ಮುಂದಿನ ದಿಕ್ಕೇನು ಎಂಬ ಪ್ರಶ್ನೆಯೂ ಕಾಡುತ್ತಿದೆ. ತಮ್ಮ ಸರ್ಕಾರದ ಕಾಯ್ದೆ ವಿರುದ್ಧ ಎರಡು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪ್ರಧಾನಿ ಮೋದಿ ಏನು ಕೊಡುಗೆ ನೀಡಬಹುದು ಎಂಬ ಬಗ್ಗೆ ಕುತೂಹಲ, ನಿರೀಕ್ಷೆಗಳೂ ಹುಟ್ಟಿಕೊಂಡಿವೆ. ಗಲಭೆಗೆ ಪರೋಕ್ಷವಾಗಿ ಹೊಣೆಯಾಗಿರುವ ರೈತರಿಗೆ ಕೇಂದ್ರ ಸರ್ಕಾರ ಬೆಂಬಲಕ್ಕೆ ನಿಲ್ಲುವುದೇ, ರೈತರಿಗೆ ಅನುಕೂಲಕರ ಯೋಜನೆಗಳನ್ನು ಜಾರಿಗೊಳಿಸುವುದೇ ಕಾದು ನೋಡಬೇಕಿದೆ.
"ಬಜೆಟ್ ಚಿನ್ನದಂಥ ಅವಕಾಶವಾಗಬಹುದು"
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಬಜೆಟ್ ಅನ್ನೇ ರೈತರ ಮನವೊಲಿಸುವ ಅವಕಾಶವನ್ನಾಗಿ ಮಾಡಿಕೊಳ್ಳಬಹುದು. ಸರ್ಕಾರದೆಡೆಗೆ ರೈತ ಸಮುದಾಯದ ಭಯ ಹೋಗಲಾಡಿಸಲು, ವಿಶ್ವಾಸ ಗಳಿಸಲು ಬಜೆಟ್ ಚಿನ್ನದಂಥ ಅವಕಾಶವೂ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿಯಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು
ರೈತರಿಗೆ ಸಮಾಧಾನಪಡಿಸುವ ಸಾಧ್ಯತೆಯಿದೆಯೇ?
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಡೆದಿರುವ ಸರ್ಕಾರ- ರೈತರ ನಡುವಿನ ಜಟಾಪಟಿಯಲ್ಲಿ ರೈತರಿಗೆ ವಿಶ್ವಾಸ ಮೂಡಿಸುವಂಥ ಪ್ರಯತ್ನವನ್ನು ಬಜೆಟ್ ಮೂಲಕ ಸರ್ಕಾರ ಮಾಡಬಹುದೇ? ಕೃಷಿ ಕೇಂದ್ರಿತವಾದ ವಿನೂತನ ಯೋಜನೆಗಳನ್ನು ಈ ಬಾರಿ ಮೋದಿ ಸರ್ಕಾರ ಪರಿಚಯಿಸಬಹುದೇ ಎಂಬ ಕುತೂಹಲವಿದೆ. ಆದರೆ ಈಗಾಗಲೇ ಪಿಎಂ ಕಿಸಾನ್, ನರೇಗಾ ಯೋಜನೆ, ಒಂದು ಲಕ್ಷ ಕೋಟಿ ರೂಪಾಯಿ ಕೃಷಿ ಮೂಲ ಸೌಕರ್ಯ ನಿಧಿಯಂಥ ಯೋಜನೆಗಳು ಇವೆ. ಮುಂಬರುವ ಬಜೆಟ್ ನಲ್ಲಿ ಕ್ರೆಡಿಟ್ ಗ್ಯಾರಂಟಿ ಸ್ಕೀಮ್, ಕೆಲವು ಇನ್ಸುರೆನ್ಸ್ ಸ್ಕೀಮ್ ಗಳನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ದಾರಿ?
ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ಎರಡು ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಪರಿಚಯಿಸಿರುವ ಹೊಸ ಕಾಯ್ದೆಗಳು ಈ ಸೌಲಭ್ಯದ ಹೊರತಾಗಿದೆ ಎಂದು ವಿರೋಧಿಸಿದ್ದಾರೆ. ಈ ಸೌಲಭ್ಯವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರೂ, ರೈತರು ಪಟ್ಟುಬಿಟ್ಟಿಲ್ಲ. ಆದ್ದರಿಂದ ಈಗಿರುವ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಹೆಚ್ಚುವರಿ ಹಣವನ್ನು ಸರ್ಕಾರ ಬಜೆಟ್ ನಲ್ಲಿ ನಿಯೋಜಿಸಬಹುದು ಎನ್ನಲಾಗಿದೆ. ಮುಖ್ಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ 2021 ಬಜೆಟ್ ದಾರಿ ಮಾಡಿಕೊಡಬಹುದು ಎನ್ನಲಾಗಿದೆ.
ದೇಶದ ಕೈಹಿಡಿದಿದ್ದ ಕೃಷಿ ಕ್ಷೇತ್ರ
ಇನ್ನಿತರೆ ಪ್ರಮುಖ ಕ್ಷೇತ್ರಗಳೆಲ್ಲವೂ ಲಾಕ್ ಡೌನ್ ಸಮಯ ತಲೆ ಕೆಳಗಾದಾಗ ಕೃಷಿ ಕ್ಷೇತ್ರ ದೇಶದ ಆರ್ಥಿಕತೆಗೆ ಬಲ ನೀಡಿತ್ತು. ಇದೀಗ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರವು ಶೇ. 3.4ರಷ್ಟು ಬೆಳವಣಿಗೆ ಸಾಧಿಸುವ ಅವಕಾಶವಿರುವುದಾಗಿ ಅಂದಾಜಿಸಲಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರವು 2021-22ರ ಬಜೆಟ್ನಲ್ಲಿ ಕೃಷಿ ಸಾಲದ ಗುರಿಯನ್ನು ಸುಮಾರು 19 ಲಕ್ಷ ಕೋಟಿ ರೂಪಾಯಿ ಹೆಚ್ಚಿಸಬಹುದು ಎನ್ನಲಾಗಿದೆ. ಜೊತೆಗೆ ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಮರುಹಣಕಾಸು ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು. 2020-21ರ ಆರ್ಥಿಕ ವರ್ಷದ ಕೃಷಿ ಸಾಲದ ಗುರಿಯನ್ನು 15 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಬಹುದು ಎಂದು ತಿಳಿದುಬಂದಿದೆ. ಕಿಸಾನ್ ಯೋಜನೆಯಡಿ ರೈತರಿಗೆ ಕಿಸಾನ್ ಸಮ್ಮನ್ ನಿಧಿಯ ಪ್ರಮಾಣವನ್ನು ಹೆಚ್ಚಿಸಬಹುದು. ಹೊಸ ಬಜೆಟ್ನಲ್ಲಿ ಈ ಮೊತ್ತವನ್ನು ವಾರ್ಷಿಕವಾಗಿ 6,000 ದಿಂದ 10,000 ರೂಪಾಯಿಗೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.