ದೆಹಲಿಯಲ್ಲಿ ರೈತರ ಹೋರಾಟ; ಸಲ್ಮಾನ್ ಖಾನ್ ಯಾರ ಪರ?
ನವದೆಹಲಿ, ಫೆಬ್ರುವರಿ 05: ದೆಹಲಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ವಿದೇಶಿ ಸೆಲೆಬ್ರಿಟಿಗಳು ಮಾತನಾಡಲು ಆರಂಭಿಸುತ್ತಿದ್ದಂತೆ ಬಾಲಿವುಡ್ ನಟ ನಟಿಯರು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.
ಅಂತರರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡುತ್ತಿದ್ದಂತೆ ಸರ್ಕಾರದ ಪರವಾಗಿ ಹಲವು ಬಾಲಿವುಡ್ ನಟ ನಟಿಯರು, ಕ್ರಿಕೆಟಿಗರು ನಿಂತಿದ್ದಾರೆ. ಭಾರತ ಹಾಗೂ ಭಾರತದ ನೀತಿಯಲ್ಲಿ ವಿದೇಶಿಗರ ಹಸ್ತಕ್ಷೇಪವನ್ನು ಖಂಡಿಸಿದ್ದಾರೆ. ಇದೀಗ ಸಲ್ಮಾನ್ ಖಾನ್ ಕೂಡ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಬಿಕ್ಕಟ್ಟನ್ನು ಕೊನೆಗೊಳಿಸಲು ಉತ್ತಮ ಮಾರ್ಗ ಕಂಡುಕೊಳ್ಳಬೇಕಿದೆ ಎಂದಿದ್ದಾರೆ.
ನೀವೂ 'ಸಂಘಿ'ಯಾದ್ರಾ?: ಅನಿಲ್ ಕುಂಬ್ಳೆ ವಿರುದ್ಧ ಟ್ವಿಟ್ಟರಿಗರ ಕಿಡಿ
ಮಾಧ್ಯಮ ಗೋಷ್ಠಿಯಲ್ಲಿ ರೈತರ ಪ್ರತಿಭಟನೆ ಕುರಿತು ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಖಾನ್, "ಸರ್ಕಾರ ಸರಿಯಾದ ಕೆಲಸವನ್ನೇ ಮಾಡಬೇಕು. ಅತಿ ಸೂಕ್ತವೆನಿಸುವುದನ್ನು ಮಾಡಬೇಕು ಹಾಗೂ ಘನ ಕಾರ್ಯವನ್ನೇ ಕೈಗೊಳ್ಳಬೇಕು" ಎಂದು ಉತ್ತರಿಸಿದ್ದಾರೆ.
ಈ ಮುನ್ನ ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರಣ್ ಜೋಹರ್, ಕಂಗನಾ ರಣಾವತ್, ಸುನೀಲ್ ಶೆಟ್ಟಿ ರೈತರ ಪ್ರತಿಭಟನೆ ವಿಷಯದಲ್ಲಿ ವಿದೇಶಿ ಸೆಲೆಬ್ರಿಟಿಗಳ ಹಸ್ತಕ್ಷೇಪದ ವಿರುದ್ಧ ಕಿಡಿಕಾರಿದ್ದರು. ಭಾರತ ರೈತರ ವಿಚಾರದಲ್ಲಿ ಒಗ್ಗಟ್ಟಿನಿಂದಿದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಮಹತ್ವದ್ದು. ಅವರ ಹಿತಾಸಕ್ತಿಗಳನ್ನು ಸರ್ಕಾರ ರಕ್ಷಿಸುವ ಭರವಸೆ ಇದೆ. ಇದು ಭಾರತದ ಒಳಗಿನ ವಿಚಾರ. ಇದರಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಇಂಡಿಯಾ ಟುಗೆದರ್, ಇಂಡಿಯಾ ಅಗೇನ್ಸ್ಟ್ ಪ್ರೊಪಗಾಂಡಾ" ಹ್ಯಾಷ್ ಟ್ಯಾಗ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಕೂಡ ಸರ್ಕಾರದ ಪರ ನಿಂತಿದ್ದರು.