'ಕುರುಡು ಅಂಗಕ್ಕೆ ಹೊರತು ಆತ್ಮವಿಶ್ವಾಸಕ್ಕಲ್ಲ' ಅಂಧನ ಸಾಧನೆ
ಬೆಂಗಳೂರು, ಫೆಬ್ರವರಿ 06: ಇಂದಿನ ದಿನಗಳಲ್ಲಿ ಮನುಷ್ಯನಿಗೆ ಎಲ್ಲಾ ಅಂಗಾಂಗಗಳು ಚೆನ್ನಾಗಿದ್ದರೂ ಸಹ ಉದ್ಯೋಗ ಮಾಡದೆ ಸೋಮಾರಿತನ ತೋರಿಸುತ್ತಿರುತ್ತಾರೆ. ವಿದ್ಯಾವಂತರೂ ಸಹ ಉದ್ಯೋಗ ಸಿಗುತ್ತಿಲ್ಲ ಎಂದು ಕೈಕಟ್ಟಿ ಕುಳಿತಿದ್ದಾರೆ.
ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾರೆ ಹುಟ್ಟು ಕುರುಡುತನ ಇವರನ್ನು ಕತ್ತಲೆಗೆ ತಳ್ಳಿದೆ. ಆದರೂ ದೃತಿಗೆಡದ ಇವರು ಸಮಗ್ರ ಬೇಸಾಯದಿಂದ ಸಾಧನೆಯತ್ತ ಹೆಜ್ಜೆಯಿಡುತ್ತಿದ್ದಾರೆ. ತಮ್ಮ ಬಾಳು ಕತ್ತಲಿಯಲ್ಲಿ ಮುಳುಗಿದರೂ ಎದೆಗುಂದದೆ ಇನ್ನು ಹಲವರ ಬಾಳಲ್ಲಿ ಬೆಳಕಾಗಿದ್ದಾರೆ. ತಮ್ಮ ಗ್ರಾಮದ ಹಲವು ಮಂದಿಗೆ ತಮ್ಮದೇ ಫಾರ್ಮ್ ನಲ್ಲಿ ಉದ್ಯೋಗ ನೀಡಿ ಅವರ ಬಾಳಿನಲ್ಲಿ ಭರವಸೆಯ ಬೆಳಕಾಗಿದ್ದಾರೆ.
ಮಂಗಳೂರಿನ ಡಿ.ಸಿ ಕಛೇರಿಯಲ್ಲೊಬ್ಬ ಕಣ್ಣು ಕಾಣದ ಅಸಾಮಾನ್ಯ ವ್ಯಕ್ತಿ
ಈಗ ತೋಟದಲ್ಲಿ ಕೆಲಸಗಾರರೊಂದಿಗೆ ಸೇರಿ ಕೆಲಸ ಮಾಡುತ್ತಿರುವ ಈತನ ಹೆಸರು ಯಲ್ಲಪ್ಪ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ನಿವಾಸಿ. ಈತನು ತಾನು ಹುಟ್ಟಿದಾಗಲೇ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಯಲ್ಲಪ್ಪ ತಮ್ಮ ಗ್ರಾಮದವರನ್ನು ಆಶ್ಚರ್ಯಪಡಿಸುವಂತೆ ಬೇಸಾಯ ಮಾಡುತ್ತಿದ್ದಾನೆ. ಪಾಲಿ ಹೌಸ್ ನಿರ್ಮಿಸಿ ಗ್ರಾಮದ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದ್ದಾನೆ. ಕಣ್ಣು ಕಾಣದಿದ್ದರೂ ಈತನು ಬೇಸಾಯ ಮಾಡಿ ಬೆಳೆ ಪಡೆಯುವ ಪರಿ ನೋಡಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಅಂದಹಾಗೆ ಹುಟ್ಟು ಕುರುಡನಾಗಿ ಯಲ್ಲಪ್ಪ ಕಡು ಬಡತನದ ಕುಟುಂಬದಲ್ಲಿ ಜನಿಸಿದ್ದು, ಆರಂಭದಲ್ಲಿ ನಿತ್ಯದ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಂದೆ, ತಾಯಿ ಸೇರಿ ಎಲ್ಲರೂ ಕೂಲಿ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದರು. ಇದರಿಂದ ಯಲ್ಲಪ್ಪ ವಿದ್ಯಾಭ್ಯಾಸ ಸಹ ಮಾಡಲು ಸಾಧ್ಯವಾಗಲಿಲ್ಲ . ಆದರೂ ಹಿಂದೇಟು ಹಾಕದ ಯಲ್ಲಪ್ಪ ತಮಗಿದ್ದ2 ಎಕರೆ ಬಂಜರು ಭೂಮಿಯಲ್ಲಿ ಬೇಸಾಯ ಮಾಡಲು ಆರಂಭಿಸಿದ. ಇದೇ ಸಂದರ್ಭದಲ್ಲಿ ಈತನಿಗೆ ಮದುವೆ ಸಹ ಮಾಡಲಾಯಿತು.
ಆದರೆ ಯಲ್ಲಪ್ಪನನ್ನು ಅರ್ಥ ಮಾಡಿಕೊಳ್ಳದ ಹೆಂಡತಿ ಮದುವೆಯಾದ ಕೆಲ ತಿಂಗಳ ನಂತರ ಈತನನ್ನು ತೊರೆದುಬಿಟ್ಟಳು. ಇದರಿಂದ ಯಲ್ಲಪ್ಪ ಸಾಕಷ್ಟು ಮನನೊಂದು ದುಖಃತಪ್ತನಾದ. ಒಂದೆಡೆ ಕಣ್ಣುಗಳೆರಡು ಕಾಣುವುದಿಲ್ಲ ಇನ್ನು ಕಣ್ಣಾಗಬೇಕಿದ್ದ ಹೆಂಡತಿ ಸಹ ಕೈ ಕೊಟ್ಟಿ ಹೋದಳು ಎಂದು ಯಲ್ಲಪ್ಪ ಸುಮ್ಮನಾಗಲಿಲ್ಲ.
ತನ್ನ ಜಮೀನಿನಲ್ಲಿ ಭರಪೂರ ಬೇಸಾಯ ಮಾಡಲು ಆರಂಭಿಸಿದ. ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿಸಿದ. ಕಣ್ಣು ಕಾಣುವವರನ್ನು ನಾಚಿಸುವಂತೆ ಬೆಳೆ ಬೆಳೆದ. ಮಾತ್ರವಲ್ಲ ಕೃಷಿ ಇಲಾಖೆ ನೀಡಿದ ಅನುದಾನ ಉಪಯೋಗಿಸಿಕೊಂಡು ಫಾಲಿ ಹೌಸ್ ನಿರ್ಮಾಣ ಮಾಡಿ ತನ್ನ ಫಾಲಿ ಹೌಸ್ನಲ್ಲಿ ಹತ್ತಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾನೆ.
ಒಟ್ಟಾರೆ ಇಂದಿನ ಸಮಾಜದಲ್ಲಿ ಹಲವು ಮಂದಿ ಕಣ್ಣಿದ್ರು ಕುರುಡರಮನತೆ ವರ್ತಿಸುತ್ತಿದ್ದಾರೆ. ಯಾವ ಅಂಗ ವೈಕಲ್ಯವಿಲ್ಲದಿದ್ದರೂ ಬಿಕ್ಷುಕರಂತೆ ಬದುಕು ನಡೆಸುತ್ತಿದ್ದಾರೆ. ಇಂತಹವರ ಮುಂದೆ ಎಲ್ಲಪ್ಪ ಸಾರ್ಥಕ ಜೀವನ ನಡೆಸುತ್ತಿದ್ದಾನೆ. ಇಡೀ ಸಮಾಜ ಗೌರವಿಸುವಂತೆ ಬೇಸಾಯ ಮಾಡುತ್ತ, ಇತರರಿಗೂ ಕೆಲಸ ನೀಡಿ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ.