ಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳು
ನವದೆಹಲಿ, ಮಾರ್ಚ್ 26: ಕೇಂದ್ರ ಸರ್ಕಾರದ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರ ನಿರಂತರ ಹೋರಾಟಕ್ಕೆ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆ ಮೇ 26ರ ಬುಧವಾರದಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಕಳೆದ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಮೂರು ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗಿದರ ಪ್ರತಿಭಟನಾಕಾರರು ಪ್ರತಿಮೆಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾಯ್ದೆ ವಿರುದ್ಧದ ಹೋರಾಟಕ್ಕೆ 6 ತಿಂಗಳು: ಕರಾಳ ದಿನಾಚರಣೆ
ನವದೆಹಲಿಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಲಾಕ್ ಡೌನ್ ನಿಯಮ ನಡುವೆ ರೈತರನ್ನು ಒಟ್ಟುಗೂಡಿಸುವುದು ಹಾಗೂ ಪ್ರತಿಭಟನೆ ನಡೆಸುವುದು ಸುರಕ್ಷಿತವಲ್ಲ ಎಂದು ಪೊಲೀಸರು ಅರಿವು ಮೂಡಿಸುವ ಕೆಲಸ ಮಾಡಿದರು.
ಕೇಂದ್ರದ ವಿರುದ್ಧ ಮನೆಗಳ ಮೇಲೂ ಹಾರಾಡಿದ ಕಪ್ಪು ಬಾವುಟ
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳೇ ಕಳೆದಿದೆ. ಈ ಹಿನ್ನೆಲೆ ನವದೆಹಲಿಯ ಮೂರು ಗಡಿಗಳಲ್ಲಿ ಮಾತ್ರ ಕಪ್ಪು ಬಾವುಟ ಹಿಡಿದು ಕರಾಳ ದಿನವನ್ನು ಆಚರಿಸಲಾಗುತ್ತಿಲ್ಲ. ಬದಲಿಗೆ ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರತಿಯೊಂದು ಹಳ್ಳಿಹಳ್ಳಿಗಳ ರೈತನ ಮನೆಗಳ ಮೇಲೂ ಕಪ್ಪು ಬಾವುಟವನ್ನು ಹಾರಿಸಲಾಗುತ್ತಿದೆ ಎಂದು ಹಿರಿಯ ರೈತ ಮುಖಂಡ ಅವತಾರ್ ಸಿಂಗ್ ಮೆಹ್ಮಾ ಹೇಳಿದ್ದಾರೆ.
"ಆರು ತಿಂಗಳ ರೈತರ ಹೋರಾಟಕ್ಕಿಲ್ಲ ಸ್ಪಂದನೆ"
ಕೇಂದ್ರ ಸರ್ಕಾರ ಮತ್ತು ನಾಯಕರ ಪ್ರತಿಮೆಗಳಿಗೆ ಆಕ್ರೋಶಭರಿತರಾದ ರೈತರು ಸುಟ್ಟು ಹಾಕುತ್ತಿದ್ದಾರೆ. ಏಕೆಂದರೆ ಕಳೆದ ಆರು ತಿಂಗಳಿನಿಂದ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ, ಸರ್ಕಾರ ಅಥವಾ ಯಾವುದೇ ನಾಯಕರು ತಲೆ ಕೆಡಿಸಿಕೊಂಡಿಲ್ಲ. ಏಳು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ರೈತರ ಕೂಗನ್ನು ಕೇಳಿಸಿಕೊಳ್ಳುತ್ತಿಲ್ಲ" ಎಂದು ಅವತಾರ್ ಸಿಂಗ್ ಮೆಹ್ಮಾ ತಿಳಿಸಿದ್ದಾರೆ.
ಕೇಂದ್ರದ ವಿರುದ್ಧ ಧಿಕ್ಕಾರ, ಪ್ರಧಾನಿ ಪ್ರತಿಮೆಗೆ ಬೆಂಕಿ
"ದೆಹಲಿಯ ಸಿಂಘು ಗಡಿಯಲ್ಲಿ ಸೇರಿದ ಪ್ರತಿಭಟನಾನಿರತ ರೈತರು ಹಣೆಪಟ್ಟಿಗೆ ಕಪ್ಪುಬಟ್ಟೆ ಧರಿಸಿ, ಕೈಯಲ್ಲಿ ಕಪ್ಪು ಬಾವುಟ ಹಿಡಿದು ನಡೆದರು. ಪ್ರತಿಭಟನಾ ರ್ಯಾಲಿ ನಡೆಸಿದ ರೈತರು ಕೇಂದ್ರ ಸರ್ಕಾರ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಮೆಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ರೈತ ಮುಖಂಡ ಕುಲ್ವಂತ್ ಸಿಂಗ್ ಹೇಳಿದರು.
"ಕೃಷಿ ಕಾಯ್ದೆ ರದ್ದುಗೊಳಿಸಿದರೆ ಮಾತ್ರ ವಾಪಸ್ ಹೋಗುತ್ತೇವೆ"
ದೆಹಲಿಯ ಗಡಿ ಪ್ರದೇಶದಲ್ಲಿ ನೆತ್ತಿಸುಡುವ ಬಿಸಿಲು ಹಾಗೂ ಮೈಕೊರಿವ ಚಳಿಯ ಮಧ್ಯೆ ಕುಳಿತುಕೊಳ್ಳುವುದು ನಮಗೆ ಹವ್ಯಾಸವಲ್ಲ ಆದರೆ ಮಳೆ, ಗಾಳಿ, ಬಿಸಿಲು ಮತ್ತು ಚಳಿಗೆ ರೈತರು ಯಾವುದೇ ರೀತಿ ಭಯ ಪಡುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಇಲ್ಲಿಂದ ವಾಪಸ್ ಹೋಗುವ ಮಾತೇ ಇಲ್ಲ. ಒಂದು ವೇಳೆ ನಮ್ಮನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವ ಉದ್ದೇಶವೇನಾದರೂ ಇದ್ದರೆ ಕೇಂದ್ರ ಸರ್ಕಾರವು ಮೊದಲು ನಮ್ಮ ಬೇಡಿಕೆಗಳನ್ನು ಆಲಿಸಬೇಕು. ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಕುಲ್ವಂತ್ ಸಿಂಗ್ ಆಗ್ರಹಿಸಿದ್ದಾರೆ.
ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಬಿಕೆಯು ಹೋರಾಟ
ದೆಹಲಿ ಮತ್ತು ಉತ್ತರ ಪ್ರದೇಶದ ಘಾಜಿಪುರ್ ಗಡಿಯಲ್ಲಿ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ದೆಹಲಿ-ಮೀರತ್ ಹೆದ್ದಾರಿ ಕೆಳಗಿನ ಉತ್ತರ ಪ್ರದೇಶ ಗೇಟ್ ಬಳಿ ಪ್ರತಿಮೆಗಳನ್ನು ಸುಡುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಗಲಾಟೆ ನಡೆಯಿತು. ಭಾರತೀಯ ಕಿಸಾನ್ ಒಕ್ಕೂಟದ ಸದಸ್ಯರು ಕಪ್ಪು ಬಾವುಟ ಹಿಡಿದು ಕೇಂದ್ರ ಸರ್ಕಾರ ಮತ್ತು ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗಿದರು.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿದ್ದಾರೆ.