ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯರನ್ನು ಬಿಜೆಪಿಗೆ ಸೆಳೆಯಲು ಯತ್ನ
ಮೇಲುಕೋಟೆ, ನವೆಂಬರ್ 16: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ಹುಟ್ಟಿಸಿದ್ದ ಯುವನಾಯಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬಿಜೆಪಿಯು ತನ್ನತ್ತ ಸೆಳೆಯುವ ಯತ್ನ ಮಾಡುತ್ತಿದೆ.
ರೈತ ನಾಯಕ ದಿವಂಗತ ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಅವರು ತಂದೆಯ ಕಾಲಾನಂತರ ಅಮೆರಿಕೆಯಿಂದ ಮೇಲುಕೋಟೆಗೆ ಬಂದು ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಜೆಡಿಎಸ್ನ ಸಿ.ಎಸ್.ಪುಟ್ಟರಾಜು ವಿರುದ್ಧ ಸೋಲನುಭವಿಸಿದ್ದರು.
ಸ್ವರಾಜ್ ಇಂಡಿಯಾ ಪಕ್ಷದಿಂದ ರೈತ ಸಂಘ ಹಾಗೂ ಕಾಂಗ್ರೆಸ್ನ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಅವರು ಮೊದಲ ಬಾರಿಗೆ ಉತ್ತಮ ಮತಗಳಿಸುವ ಮೂಲಕ ಗಮನಸೆಳೆದಿದ್ದಾರೆ. ಅಲ್ಪ ಸಮಯದಲ್ಲಿಯೇ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನೂ ಸಂಪಾದಿಸಿದ್ದಾರೆ.
ಯಡಿಯೂರಪ್ಪ ಬದಲಾವಣೆಗೆ ಭಾರಿ ವಿರೋಧ, ಅಮಿತ್ ರಿಂದ ತಾಳ್ಮೆ ಪಾಠ
ಉದಯೋನ್ಮುಖ ನಾಯಕ ಎನ್ನಲಾಗುತ್ತಿರುವ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬಿಜೆಪಿಯು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದು, ಕ್ಷೇತ್ರದಲ್ಲಿ ಕ್ಷೀಣವಾಗಿರುವ ಬಿಜೆಪಿಗೆ ದರ್ಶನ್ ಪುಟ್ಟಣ್ಣಯ್ಯ ಮೂಲಕ ಬಲ ತುಂಬಲು ನೋಡುತ್ತಿದೆ.
ಆರ್.ಅಶೋಕ್ ನೇತೃತ್ವ
ಕೆಲವು ದಿನಗಳ ಹಿಂದಷ್ಟೆ ನಡೆದ ಮಂಡ್ಯ ಲೋಕಸಭೆ ಉಪಚುನಾವಣೆ ಸಮಯದಲ್ಲಿ ಬಿಜೆಪಿಯ ಮುಖಂಡ ಆರ್.ಅಶೋಕ್ ಅವರು ದರ್ಶನ್ ಪುಟ್ಟಣ್ಣಯ್ಯ ಅವರ ತಾಯಿಯವರನ್ನು ಭೇಟಿ ಆಗಿದ್ದರು. ಈ ಸಂದರ್ಭದಲ್ಲಿ ನಡೆದ ಮಾತು-ಕತೆ ತರುವಾಯ ಬಿಜೆಪಿಯು ಹೀಗೊಂದು ಪ್ರಯತ್ನ ಮಾಡುತ್ತಿದೆ.
ಸೋಲನ್ನು ಒಪ್ಪಿಕೊಳ್ಳುತ್ತೇವೆ, ಇನ್ನುಮುಂದೆ ತಪ್ಪು ಮಾಡಲ್ಲ: ಅಶೋಕ್
ಮಂಡ್ಯದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ
ಮಂಡ್ಯದಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯು ಉತ್ತಮ ಪ್ರದರ್ಶನ ತೋರಿದ್ದು, ಮೊದಲ ಬಾರಿಗೆ ಲಕ್ಷಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಪಕ್ಷದ ಪರವಾಗಿ ಉತ್ತಮ ಅಲೆಯಿರುವ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಬಿಜೆಪಿ ಈ ಅಡಿ ಇಟ್ಟಿದೆ.
ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು
ಲೋಕಸಭೆ ಚುನಾವಣೆ ಟಿಕೆಟ್ ಭರವಸೆ
ರಾಜ್ಯ ರಾಜಕೀಯದಲ್ಲಿ ನೆಲೆ ಕಾಣಬೇಕೆಂದು ಅಮೆರಿಕೆಯಿಂದ ವಾಪಸ್ಸಾಗಿ, ಚುನಾವಣೆಯಲ್ಲಿ ಸೋತು ನಿರಾಶೆ ಅನುಭವಿಸಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಈ ಬಾರಿ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ ಎನ್ನಲಾಗಿದೆ.
ತಂದೆ ಬಿಜೆಪಿ ವಿರೋಧಿಸಿ ರಾಜಕೀಯ ಮಾಡಿದ್ದರು
ಬಿಜೆಪಿಯನ್ನು ವಿರೋಧಿ ರಾಜಕೀಯವನ್ನು ಮಾಡುತ್ತಿರುವ ಸ್ವರಾಜ್ ಇಂಡಿಯಾದ ಪಕ್ಷ ಹಾಗೂ ರೈತ ಸಂಘದ ಸದಸ್ಯರಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರು ಬಿಜೆಪಿಯನ್ನು ಸೇರಲು ಬಯಸುತ್ತಾರೆಯೆ ಎಂಬುದು ಪ್ರಶ್ನೆ. ಅವರ ತಂದೆಯವರೂ ಸಹ ಬಿಜೆಪಿಯನ್ನು ವಿರೋಧಿಸುತ್ತಲೇ ರಾಜಕಾರಣ ಮಾಡಿದ್ದರು.
ಕಾಂಗ್ರೆಸ್ನಿಂದಲೂ ಸೆಳೆಯುವ ಯತ್ನ ಆರಂಭ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ ದರ್ಶನ್ ಪುಟ್ಟಣ್ಣಯ್ಯ ಬಿಜೆಪಿಗೆ ಸೆಳೆಯಲು ಯತ್ನ ಆರಂಭಿಸುತ್ತಿದ್ದಂತೆ ಇತ್ತ ಕಾಂಗ್ರೆಸ್ ಕೂಡ ದರ್ಶನ್ ಅವರನ್ನು ಕಾಂಗ್ರೆಸ್ ಸೆಳೆಯುವ ಯತ್ನ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ.