ಹಿರಿಯೂರಿನಲ್ಲಿ ಈರುಳ್ಳಿ ಖರೀದಿ ಕೇಂದ್ರ ಆರಂಭಕ್ಕೆ ಡಿಸಿಎಂಗೆ ಮನವಿ
ಚಿತ್ರದುರ್ಗ, ಮೇ 04: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಈರುಳ್ಳಿ ಬೆಳೆಗಾರರ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಿರಿಯೂರಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಈರುಳ್ಳಿ ಖರೀದಿ ಆರಂಭಿಸುವಂತೆ ಇಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್ ಮನವಿ ಮಾಡಿದರು.
ಡಿಸಿಎಂ ಇಂದು ಹಿರಿಯೂರಿನ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಹಿರಿಯೂರು ನಗರದ ಪ್ರಮುಖ ಸಮಸ್ಯೆಯಾದ ಹುಳಿಯಾರು ರಸ್ತೆ ಅಗಲೀಕರಣಕ್ಕೆ 20 ಕೋಟಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಗೋವಿಂದ ಕಾರಜೋಳ ಅವರು ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
"ನನಗೆ ಸಹಾಯ ಬೇಡ, ಈರುಳ್ಳಿ ಖರೀದಿಸಿ"; ವಿಡಿಯೋ ಮಾಡಿ ಮನವಿ ಮಾಡಿದ ಹಿರಿಯೂರು ರೈತ
ಬೆಲೆ ಕುಸಿತ ಹಾಗೂ ಲಾಕ್ ಡೌನ್ ನಿಂದಾಗಿ ಈರುಳ್ಳಿಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಹಿರಿಯೂರು ರೈತರು ಒಂದು ಲಕ್ಷಕ್ಕೂ ಅಧಿಕ ಈರುಳ್ಳಿ ಮೂಟೆಗಳನ್ನು ಶೇಖರಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಖರೀದಿ ಕೇಂದ್ರ ತೆರೆದರೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಲಾಗಿದೆ. ಈಚೆಗೆ ಹಿರಿಯೂರಿನ ಮಹಿಳೆಯೊಬ್ಬರು ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೇ ತಾಲ್ಲೂಕಿನ ರೈತನೊಬ್ಬ ತನ್ನ ಈರುಳ್ಳಿ ಖರೀದಿಸುವಂತೆ ಮನವಿ ಮಾಡಿದ್ದು ಕೂಡ ವೈರಲ್ ಆಗಿತ್ತು.
ಈಗಾಗಲೇ ಜಿಲ್ಲೆಯಲ್ಲಿ ಕೃಷಿ ತೋಟಗಾರಿಕೆ ಉಪನಿರ್ದೇಶಕಿ ಡಾ. ಸವಿತಾ ಮತ್ತು ಇತರೆ ತೋಟಗಾರಿಕೆ ಅಧಿಕಾರಿಗಳು ಸೇರಿ ಬೆಂಗಳೂರು ಮತ್ತು ಕೋಲಾರದಿಂದ ಬೂದುಗುಂಬಳ, ಕಲ್ಲಂಗಡಿ, ಟೊಮೆಟೊ ಇತರೆ ಖರೀದಿದಾರರನ್ನು ಜಿಲ್ಲೆಗೆ ಕರೆಸಿಕೊಂಡು ಸಮಸ್ಯೆ ಬಗೆಹರಿಸುತ್ತಿದ್ದಾರೆ. ಈರುಳ್ಳಿಗೂ ಖರೀದಿದಾರರನ್ನು ಕರೆಸಿಕೊಂಡು ರೈತರೊಂದಿಗೆ ಚರ್ಚಿಸಿ ರೈತರಿಂದ ನೇರವಾಗಿ ಈರುಳ್ಳಿ ಖರೀದಿಸುವಂತೆ ಮನವಿ ಮಾಡಲಾಗಿದೆ.