ಜೀವವೈವಿಧ್ಯ ವನ ಭಾಗ 7: ಜ್ಞಾನಭಾರತಿಯ ಜೈವಿಕ ವನ ಏಕೆ ಉಳಿಯಬೇಕು?: ಹೆಬ್ಳೀಕರ್ insights…
ಬೆಂಗಳೂರಿನಂತಹ ನಗರಗಳಲ್ಲಿ ಉದ್ಯಾನವನಗಳು, ಜೀವವೈವಿಧ್ಯವನಗಳು ಅನಿವಾರ್ಯವಾಗಿ ಬೇಕು. ನಗರದ ಬೆಳವಣಿಗೆಯಿಂದ ಜೀವ ಸಂಪತ್ತು ನಾಶವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಿರುವ ಜೀವವೈವಿಧ್ಯ ವನದಿಂದ ಉತ್ತಮ ಗಾಳಿ ಸಿಗುವುದಲ್ಲದೆ ಅಂತರ್ಜಲ ಶೇಖರಣೆ ಆಗುತ್ತಿದೆ.
ಇದು ಸ್ಥಳೀಯ ನಾಗರೀಕರಿಗಷ್ಟೇ ಅಲ್ಲದೆ ಇಡೀ ಬೆಂಗಳೂರಿಗೆ ಅನುಕೂಲವಾಗುವಂಥದ್ದು. ವಿಶ್ವದಾಧ್ಯಂತ ಕಾರ್ಬನ್ ಬಂಧಿಸಲು ಇಂಥ ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದೆ. ವಾತಾವರಣದ ಉಷ್ಣಾಂಶವನ್ನು ಕಡಿಮೆ ಮಾಡಲು ಇಂಥ ವನಗಳು ತಲೀತ್ತುತ್ತಿವೆ. ಹೀಗಿರುವಾಗ ಕರ್ನಾಟದ ರಾಜ್ಯ ಸರ್ಕಾರ ಜ್ಞಾನಭಾರತಿ ಆವರಣದ ಜೀವವೈವಿಧ್ಯವನನ್ನು ಉಳಿಸಲು ಮುಂದಾಗಬೇಕು. ಎಂದು ಖ್ಯಾತ ಪರಿಸರ ತಜ್ಞರಾದ ಸುರೇಶ್ ಹೆಬ್ಳೀಕರ್ ಸ್ಪಷ್ಟವಾಗಿ ಹೇಳಿದ್ದಾರೆ.
ಜೀವವೈವಿಧ್ಯವನ ಭಾಗ 4: ಪರಿಸರ ಪ್ರಿಯರಿಗೊಂದು ಗುಡ್ ನ್ಯೂಸ್
ಒನ್ ಇಂಡಿಯಾದೊಂದಿಗೆ ದೂರವಾಣಿ ಮುಖೇನ ಮಾತನಾಡಿದ ಅವರು, ಪರಿಸರದ ಕುರಿತು ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡರು.
ಪರಿಸರದ ಸಂಪತ್ತು ಬಳಸಿ ನಾಗರೀಕತೆ ಕಟ್ಟಿದ್ದೇವೆ
""ಕಾಡು ತಂತಾನೆ ಆಗುತ್ತೆ. ನಾವು ಕಾಡು ಬೆಳೆಸೋಕೆ ಆಗೋಲ್ಲ. ಇಂಥಹ ಉದ್ಯಾನಗಳನ್ನು ಬೆಳೆಸಬಹುದು. ಅದು ಬಹಳ ಮುಖ್ಯವಾದ ಕೆಲಸ. ಬೆಂಗಳೂರಿನಲ್ಲಿ ಆದ ಬಹಳ ದೊಡ್ಡ ತಪ್ಪು ಅಂದರೆ ಈ ನಗರವನ್ನು ಬೆಳೆಸಿದ್ದು. ಅದು ಸರ್ಕಾರಗಳಿಗೆ ಅರ್ಥ ಆಗಲ್ಲ. ಅವರಿಗೆ ಪರಿಸರದ ಬಗ್ಗೆ ಅಷ್ಟು ಕಾಳಜಿ ಇರೋಲ್ಲ. ಅದರ ಜರೂರು ಅವರಿಗಿಲ್ಲ. ಈಗ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಸರ್ಕಾರಗಳು ಹೆಚ್ಚು ಇಂಡಸ್ಟ್ರಿಗಳನ್ನು ತಂದು ಜನರಿಗೆ ಕೆಲಸ ಕೊಡ್ಬೇಕು. ಆದರೆ ಈ ಎಲ್ಲಾ ಇಂಡಸ್ಟ್ರಿಗಳಿಗೆ ಬರುವ ಕಚ್ಚಾವಸ್ತುಗಳು ಬರೋದಾದ್ರೂ ಎಲ್ಲಿಂದ ? ಪ್ರಕೃತಿ ಮೂಲದಿಂದ ತಾನೇ? ಪರಿಸರದ ಸಂಪತ್ತನ್ನು ಬಳಸಿ ನಾಗರೀಕತೆಯನ್ನು ಕಟ್ಟಿದ್ದೇವೆ'' ಎಂದ ಸುರೇಶ್ ಹೆಬ್ಳೀಕರ್ ಬಂದು ಹೋಗುವ ಸರ್ಕಾರಗಳ ಕಾರ್ಯವೈಖರಿಯನ್ನು ತಮ್ಮ ಸಹಜ ನಿರೂಪಣೆಯಲ್ಲೇ ಟೀಕಿಸಿದರು.
ಬೆಂಗಳೂರಿನಲ್ಲಿ ಮಣ್ಣು ನೋಡೋದೇ ಕಷ್ಟ
ಈಗ ಜ್ಞಾನಭಾರತಿ ಆವರಣದಲ್ಲಿರುವ ಜೀವವೈವಿಧ್ಯವನ ಉಳೀಬೇಕು. ಇಲ್ಲಿ ಅನೇಕ ಜಾತಿಯ ಮರ, ಗಿಡ, ಬಳ್ಳಿ, ಹೊಂಡ, ಹೂ, ಹಕ್ಕಿ, ಚಿಟ್ಟೆಗಳಿವೆ ಎಲ್ಲಕ್ಕಿಂತ ಹೆಚ್ಚಾಗಿ ಮಣ್ಣಿದೆ. ಬೆಂಗಳೂರಿನಲ್ಲಿ ಮಣ್ಣು ನೋಡೋದೇ ಕಷ್ಟ. ಪರಿಸರದಲ್ಲಿ ಬಹಳ ಮುಖ್ಯವಾದದ್ದು ಮಣ್ಣು. ಅಷ್ಟೇ ಅಲ್ಲದೆ ಇಲ್ಲಿರುವ ಹೊಂಡಗಳಿಂದ ಭೂಮಿಗೆ ನೀರು ಹಿಂಗುತ್ತೆ. ಅಂತರ್ಜಲ ಹೆಚ್ಚಾಗಲು ಸಹಾಯವಾಗುತ್ತೆ.
ಬ್ರಿಟೀಷ್ ಜಿಯಾಲಜಿಸ್ಟ್
ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ನಾವು ಚಿತ್ರೀಕರಣದಲ್ಲಿ ತೊಡಗಿದ್ದ ಹಳ್ಳಿಗೆ ಒಬ್ಬ ಬ್ರಿಟೀಷ್ ಜಿಯಾಲಜಿಸ್ಟ್ ನೀರಿನ ಅಧ್ಯಯನ ಮಾಡಲು ಬಂದಿದ್ದ. ಆತ ಹಲವು ದೇಶಗಳನ್ನು ಸುತ್ತಿ ಬಂದಿದ್ದ. ನಮ್ಮ ಹಳ್ಳಿಗಳಲ್ಲಿ ಬೋರ್ವೆಲ್ ಗಳನ್ನು ನೋಡಿ ಹಣೆ ಚಚ್ಚಿಕೊಳ್ಳುತ್ತಿದ್ದ. ಅವನೊಂದಿಗೆ ಮಾತಿಗಿಳಿದ ನನ್ನೊಂದಿಗೆ "ನೋಡಿ ನಿಮ್ಮದು ಉಷ್ಣವಲಯದ ದೇಶ, ಇಲ್ಲಿ ಅನೇಕ ನದಿಗಳು, ಕೆರೆ, ಕಟ್ಟೆ, ಹಳ್ಳ ಕೊಳ್ಳ ತೋಪು ಮತ್ತು ಕಾಡುಗಳಿವೆ. ಇವುಗಳ ಮೇಲೆ ಅವಲಂಬಿತವಾಗಿ ಜೀವನ ಮಾಡೋದು ಜಾಣತನ. ಅದು ಬಿಟ್ಟು ಅಂತರ್ಜಲ ತೆಗೆಯೋದೇಕೆ. ಅಂತರ್ಜಲವನ್ನು ನಾವು fixed deposit ತರ ಬಳಸಬೇಕು ಎಂದು ತನ್ನ ಯೋಚನೆ ಹಾಗೂ ನಿಲುವನ್ನು ಬಹಳ ನೋವಿನಿಂದಲೇ ಹೇಳಿದ್ದ". ಎಂದು ಹೆಬ್ಳೀಕರ್ ಆ ಜಿಯಾಲಜಿಸ್ಟ್ ಮಾತುಗಳನ್ನು ಸ್ಮರಿಸಿಕೊಂಡರು.
ಬೆಂಗಳೂರು MNC’s ಮತ್ತು YOUTHS
ಬೆಂಗಳೂರಿನಲ್ಲಿ ಸುಮಾರು 400ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿವೆ. ಅವರ ಬಳಿ ಹಣವಿದೆ. ನಮ್ಮ ಯುವಕರು ಅವರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪನಿಗಳು ತಮ್ಮ ಕಚೇರಿಗಳ ಮಾರ್ಗದಲ್ಲಿ ಎಲಿವೇಟರ್ಸ್ ಬೇಕು, ನನ್ನ ಉದ್ಯೋಗಿಗಳು ಬೇಗನೆ ತಲುಪುವಂತಾಗಬೇಕು, ಅದಕ್ಕೆ ಬೇಕಾದ ಫಂಡ್ಸ್ ಕೊಡ್ತೇವೆ ಎಂದು ಸರ್ಕಾರಗಳಿಗೆ ತಾಕೀತು ಮಾಡುತ್ತವೆ. ಆ ಕಂಪನಿಗಳಿಗೆ ಗಿಡ ಮರ ಬಳ್ಳಿ ಮಣ್ಣು ಅರ್ಥವಾಗೋಲ್ಲ. ನಮ್ಮ ಹುಡುಗರೂ ಹಣ ಕೂಟ್ಟರೆ ಏನು ಬೇಕಾದ್ರೂ ಸಿಗುತ್ತೆ ಅಂದುಕೊಂಡಿದ್ದಾರೆ. ಗಿಡ ಮರಗಳ ಬಗ್ಗೆ ಕಾಳಜಿ ಇದ್ದಂತಿಲ್ಲ.
ಟೈರ್ ಬೇಕು, ಅದಕ್ಕೆ ರಬ್ಬರ್ ತೋಟಗಳ ಆಶ್ರಯ
ತೆರಿಗೆ ವಿಚಾರವಾಗಿ ಕರ್ನಾಟದ ದೇಶದಲ್ಲೇ ಮೂರನೆಯ ಸ್ಥಾನದಲ್ಲಿದೆ. ಸರ್ಕಾರಗಳಿಗೂ ಅಭಿವೃದ್ಧಿ ಎಂದರೆ ಅದೇ ಮಾನದಂಡವಾದಂತಿದೆ. ಈ ಎಲ್ಲಾ ಕೈಗಾರಿಕೆಗಳಿಗೆ ಬೇಕಾದ ವಸ್ತುಗಳು ಬರೋದಾದ್ರೂ ಎಲ್ಲಿಂದ ಯೋಚಿಸಿ. ನಿಮ್ಮ ವಾಹನಗಳಿಗೆ ಕಬ್ಬಿಣ ಬೇಕು. ಅದಕ್ಕಾಗಿ ಅದಿರನ್ನು ಆಶ್ರಯಿಸಿದ್ದೀರಿ. ನಿಮ್ಮ ಕಾರುಗಳಿಗೆ ಟೈಯರ್ ಬೇಕು, ಅದಕ್ಕೆ ರಬ್ಬರ್ ತೋಟಗಳನ್ನು ಆಶ್ರಯಿಸಿದ್ದೀರಿ. ನಿಮ್ಮ ಎಲ್ಲಾ ಸವಲತ್ತುಗಳು ಬರುವುದು ಪ್ರಕೃತಿ ಮೂಲದಿಂದಲೇ ಆದರೂ ಪರಿಸರದ ಕಾಳಜಿ ಯಾರಿಗೂ ಇಲ್ಲವಾಗಿದೆ.
ನೀರು-ಮಳೆ
ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ಎಷ್ಟು ನೀರಿತ್ತೋ ಅಷ್ಟೇ ನೀರು ಈಗಲೂ ಇದೆ. ಮುಂದೆಯೂ ಇರುತ್ತದೆ. ನಾವು energy (ಶಕ್ತಿ) ಯನ್ನು ಮಾತ್ರ ಉತ್ಪಾದಿಸಬಹುದು, ಹೆಚ್ಚಿಸಬಹುದು, ಆದರೆ ನೀರನ್ನಲ್ಲ. ಆ ಸರಳ ಸತ್ಯ ನಮಗೆ ಅರಿವಿರಬೇಕು. ಈಗ ಬೆಂಗಳೂರು ನಗರದಲ್ಲಿ ಪ್ರತಿ ದಿನ ಸುಮಾರು 50 ದಶಲಕ್ಷ ಲೀಟರ್ ನೀರು ಭೂಮಿಯಿಂದ ಮೇಲೆತ್ತುತ್ತಿದ್ದೇವೆ. ಕಾವೇರಿಯಿಂದ ಬರುವುದು ಸುಮಾರು 800-900 ದಶಲಕ್ಷ ಲೀಟರ್. ಬೆಂಗಳೂರಿಗೆ ಅಗತ್ಯವಿರುವುದು ಸುಮಾರು 1400 ದಶಲಕ್ಷ ಲೀಟರ್ ಗೂ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ಭೂಮಿಗೆ ನೀರು ಹಿಂಗಿಸುವ ಮಹತ್ವದ ಕೆಲಸ ಮಾಡುತ್ತಿರುವ ಜೀವವೈವಿಧ್ಯವನಗಳು ಉಳಿಯಬೇಕು.
ಹಿಂದೆ ನಮ್ಮೂರಿನಲ್ಲಿ ಯಾವುದೋ ಒಂದು ತಾರೀಖಿಗೆ ಮಳೆ ಬರುತ್ತಂದರೆ ಬರ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಚಳಿಗಾಲವೇ ಮಾಯವಾಗಿದೆ. ಅಂತರ್ಜಲ ಕುಸಿದಿದೆ. ಸಾವಿರ ಅಡಿಗಳಿಗೂ ಮೀರಿ ಬೋರು ಕೊರೆಯಲಾಗುತ್ತಿದೆ. Dynamic sphere ಮುಗಿದು ಮುಂದೆ ಹೋದಾಗ ಅಲ್ಲಿನ ನೀರು ಕಂಟಾಮಿನೇಟ್ ಆಗಿರುತ್ತೆ. ಒಳ್ಳೆ ನೀರು ಸಿಗೋಲ್ಲ. ಹಾಗಾಗಿ ಅಂತರ್ಜಲವನ್ನು ನಾವು ಯಾವಾಗಲೂ safe deposit ಅಥವಾ fixed deposit ತರ ಬಳಸಬೇಕು ಎಂದರು.
ವೈವಿಧ್ಯತೆಯ ಕಾಡುಗಳಲ್ಲೂ ಏಕ ಬೆಳೆ ಬಂದಾಯ್ತು
ಹಿಂದೆ ಮಲೇಷಿಯಾ ಹೆಚ್ಚಿನ ಪ್ರಮಾಣದ ರಬ್ಬರ್ ಉತ್ಪಾದಿಸಿ ಟಯರ್ ಗಳ ಉತ್ಪಾದನೆಗೆ ಒದಗಿಸುತ್ತಿತ್ತು. ಈಗ ಅದು ಸಾಲುತ್ತಿಲ್ಲ. ನಮ್ಮ ಕೇರಳದಲ್ಲಿ ರಬ್ಬರ್ ಹೆಚ್ಚಾಯಿತು. ಇನ್ನೂ ಹೆಚ್ಚಿನ ಅಗತ್ಯತೆ ತಲೆದೋರಿ ಇದೀಗ ನಮ್ಮ ಪಶ್ಚಿಮ ಘಟ್ಟದಲ್ಲಿ ರಬ್ಬರ್ ತೋಟಗಳು ಬಂದಿವೆ. ಕಾಡಿನಲ್ಲೂ monoculture ಆರಂಭವಾಗಿದೆ. ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸರ್ಕಾರಗಳಿಗೆ ಇಡೀ ಕೈಗಾರಿಕೆಗಳು ಪ್ರಕೃತಿ ಸಂಪತ್ತಿನ ಮೇಲೆ ಅವಲಂಭಿತವಾಗಿದ್ದರೂ ಪರಿಸರದ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲ.
ಕಸವಿಲೇವಾರಿ ಮಾಡಲು ಸಾಧ್ಯವಾಗಿಲ್ಲ
ಕಳೆದ ನೂರು ವರ್ಷಗಳಲ್ಲಿ ಶೇಕಡಾ 50 ರಷ್ಟು ಕಾಡು ನಾಶವಾಗಿದೆ. ನಗರಗಳನ್ನು ಕಟ್ಟುತ್ತಾ ಹೋದರೆ ದೇಶ ಉಳಿಯುವುದಿಲ್ಲ. ದೇಶದ ಯಾವುದೇ ದೊಡ್ಡ ನಗರಗಳನ್ನು ನೋಡಿ ದೆಹಲಿ, ಕಲ್ಕತ್ತಾ, ಮುಂಬೈ, ಹೈದರಾಬಾದ್, ಚೆನ್ನೈ ಎಲ್ಲಾ ನಗರಗಳು ನಾಶವಾಗಿವೆ. ಬೆಂಗಳೂರಿನಲ್ಲಿ ಸರಿಯಾಗಿ ಕಸವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಬೆಳ್ಳಂದೂರು ಕೆರೆ ಸರಿಮಾಡಲಿಕ್ಕೆ ಆಗಿಲ್ಲ. ಹಳ್ಳಿಗಳಿಂದ ಜನ ನಗರಗಳಿಗೆ ಬರುತ್ತಾರೆ. ನಗರ ಬೆಳೆಯುತ್ತಾ ಹೋಗುತ್ತದೆ. ಯಾವ ವಿವೇಕವೂ ಇಲ್ಲದೆ ಬೆಳೆವ ನಗರಗಳು ಕೊನೆಗೆ ಸಾಯುತ್ತವೆ.
ನಮ್ಮ ದೇಶದಲ್ಲಿ ನಗರಗಳ ಕಟ್ಟುವ ಸೂಕ್ಷ್ಮತೆ ಇಲ್ಲ. ಜಗತ್ತಿನ ಅನೇಕ ನಗರಗಳು ಉದಾಹರಣೆಗೆ ಮೆಕ್ಸಿಕೋ, ಪ್ಯಾರಿಸ್ ನಗರಗಳನ್ನು ಕಟ್ಟೋಕೆ 100 ವರ್ಷಗಳೇ ತೆಗೆದುಕೊಂಡಿದ್ದಾರೆ. ಯಾವ ಪ್ರಕೃತಿ ಸಂಪತ್ತು ನಾಶಮಾಡಬಾರದು, ಯಾವ ಮಣ್ಣನ್ನು ಮುಟ್ಟಬಾರದು ಎಂಬ ತಿಳುವಳಿಕೆ ಅವರಿಗಿದೆ. ಸುಮಾರು 170 ವರ್ಷಗಳ ಔದ್ಯೋಗಿಕ ಕ್ರಾಂತಿ ಕಂಡ ದೇಶಗಳವು.
ಕಾರುಬಾರು
ನಮ್ಮಲ್ಲಿ ಒಬ್ಬ MLA ಗೆ ನಾಲ್ಕು ಕಾರುಗಳು. ಬೆಳಿಗ್ಗೆ ಎದ್ದು ತರಕಾರಿ ತರಲು ಮೋಟಾರ್ ಬೈಕ್. ಅಲ್ಲಿ ಜನ ಸೈಕಲ್ ಮೇಲೆ ತಿರುಗುತ್ತಾರೆ. ನಡೆದು ಹೋಗುತ್ತಾರೆ. ಸ್ವೀಡನ್ ಮತ್ತು ಡೆನ್ಮಾರ್ಕ್ ನಗರಗಳಲ್ಲಿ ಒಬ್ಬ MP ಸಾರ್ವಜನಿಕ ಸಾರಿಗೆ ಬಳಸುತ್ತಾನೆ. ಅವನು ಕೆಲಸ ಮಾಡಲು ಚಿಕ್ಕದೊಂದು ಕೋಣೆ. ನಮ್ಮಲ್ಲಿದ್ದ ಹಾಗೆ ವಿಧಾನ ಸೌಧದ ಮಾದರಿಯಲ್ಲಿ ಕಟ್ಟಡವಿಲ್ಲ. ಎಂದು ಹೇಳುವ ಹೆಬ್ಳೀಕರ್ ಅವರ ಮಾತುಗಳಲ್ಲಿ ಆತಂಕವಿತ್ತು ವಿಷಾಧವಿತ್ತು.
Recommended Video
ಸರ್ಕಾರಗಳಿಗೆ ಹೆಬ್ಳೀಕರ್ ಸಂದೇಶ
"ಸರ್ಕಾರಗಳು ಪ್ರತಿ ದಿನ ಪರಿಸರದ ಕುರಿತು ಒಂದೆರಡು ಗಂಟೆ ಮಾತನಾಡಬೇಕು, ಚರ್ಚೆ ಮಾಡಬೇಕು. ಪರಿಸರ ತಜ್ಞರ ಜೊತೆ ಸಮಾಲೋಚನೆ ನಡೆಸಬೇಕು. ದೇಶದ ಆರ್ಥಿಕತೆ ಅವಲಂಬಿಸಿರುವುದು ಕಾಡು, ನೀರು, ಮಣ್ಣು, ಅದಿರು ಹೀಗೆ ಪ್ರಕೃತಿ ಮೂಲದ ಸಂಪತ್ತಿನ ಮೇಲೆ. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಪರಿಸರದ ಕುರಿತು ಮಾತನಾಡಬೇಕು."
ಒನ್ ಇಂಡಿಯಾದೊಂದಿಗೆ ಸುಮಾರು ಅರ್ಧ ಗಂಟೆ ಮಾತನಾಡಿದ ಸುರೇಶ್ ಹೆಬ್ಳೀಕರ್, ಹಲವು ಮಹತ್ವದ ಸಂಗತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ಜ್ಞಾನಭಾರತಿ ಆವರಣದ ಜೈವಿಕ-ವನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಮನಮುಟ್ಟುವಂತೆ ಹೇಳಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.