ಜೀವವೈವಿಧ್ಯ ವನ ಭಾಗ 5: ಯೋಗ ವಿ.ವಿ ಸ್ಥಾಪನೆ; ಉಸಿರುಗಟ್ಟಿಸಿ ಉಸಿರಾಡುವುದನ್ನು ಹೇಳಿಕೊಟ್ಟಂತೆ
ಚಿಕ್ಕ ವಯಸ್ಸಿನಲ್ಲಿ ನಾವೆಲ್ಲರೂ "ಪೆದ್ದ ಗುಂಡ" ನ ಕಥೆ ಕೇಳಿಯೇ ಇರ್ತೀವಿ. ಹಾಗಾಗಿದೆ ಸರ್ಕಾರದ ಕಥೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ವಿವಿಧ ಸಂಸ್ಥೆಗಳಿಗೆ ನೀಡಿರುವ 32 ಎಕರೆ ಜೀವವೈವಿಧ್ಯವನದ ಜಾಗದಲ್ಲಿ ಮರಗಿಡಗಳನ್ನು ಕಡಿಯಬಾರದೆಂಬ ಷರತ್ತು ಕೆಲವು ಸಂಸ್ಥೆಗಳಿಗೆ ವಿಧಿಸಿದ್ದರೆ ಯೋಗ ವಿ.ವಿ ನಿರ್ಮಾಣಕ್ಕೆ ನೀಡಲಾಗಿರುವ ಒಪ್ಪಂದದಲ್ಲಿ ಈ ಷರತ್ತು ವಿಧಿಸಿಲ್ಲ. ಅದರ ಮರ್ಮವೇನು ತಿಳಿಯುತ್ತಿಲ್ಲ.
ಬೆಂಗಳೂರು ವಿ.ವಿ ಜ್ಞಾನಭಾರತಿ ಆವರಣದಲ್ಲಿ ಕಳೆದ 20 ವರ್ಷಗಳು ಶ್ರಮವಹಿಸಿ ನಿರ್ಮಿಸಲಾಗಿರುವ ಅತಿದೊಡ್ಡ ಮಾನವ ನಿರ್ಮಿತ ಜೀವವೈವಿಧ್ಯ ವನದ ನಡುವೆ ಯೋಗ ವಿ.ವಿ ಸ್ಥಾಪಿಸಲು ಜಾಗ ನಿಗದಿ ಮಾಡಿರುವುದು ನಿಮಗೆ ತಿಳಿದೇ ಇದೆ. ಇದೊಂಥರಾ "ಮೂಗು ಮುಚ್ಚಿ ಉಸಿರಾಡೋದು" (ಮರಕಡಿದು ಆಮ್ಲಜನಕ ಕೊಂಡಹಾಗೆ) ಹೇಳಿಕೊಟ್ಟ ಹಾಗೆ.
ಜೀವವೈವಿಧ್ಯವನ ಭಾಗ 4: ಪರಿಸರ ಪ್ರಿಯರಿಗೊಂದು ಗುಡ್ ನ್ಯೂಸ್
ಈಗ ಯೋಗ ವಿ.ವಿಗೆ ನಿಗದಿ ಮಾಡಿರುವ ಜಾಗದಲ್ಲಿ ಸಾವಿರಾರು ಮರಗಳಿವೆ. ಹಕ್ಕಿ, ಪಕ್ಷಿಗಳಿವೆ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಇದೊಂದು Deemed Forest. . ಈಗ ಯೋಗ ವಿ.ವಿ ನಿರ್ಮಿಸಬೇಕೆಂದರೆ ಈ ಕಾಡನ್ನು ಕಡಿಯಬೇಕು. ನಮ್ಮಜ್ಜಿ ಬದುಕಿದ್ದರೆ ಸರ್ಕಾರಕ್ಕೆ 'ಹುಚ್ಚಲ್ಲ ಬೆಪ್ಪಲ್ಲ ದೈವ ಲೀಲೆ' ಅನ್ನುತ್ತಿದ್ದಳು.!
ಯೋಗ ವಿವಿ ಸ್ಥಾಪನೆಗೆ ಅವೈಜ್ಞಾನಿಕವಾಗಿ ಜಾಗ ನಿಗದಿ
ಇರಲಿ. ಎಲ್ಲ ವಿಷಯಗಳಲ್ಲೂ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಪರಿಣಿತಿ ಇರಬೇಕೆಂದೆನೂ ಇಲ್ಲ. ಆಯಾ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಜನರು ಸಮಾಜದಲ್ಲಿ ಸಾಕಷ್ಟಿದ್ದಾರೆ. ಅಂಥವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನ್ಯಾಯವಾದ ತೀರ್ಮಾನ ಕೈಗೊಳ್ಳಬೇಕು.
ಮೊನ್ನೆ ತಾನೆ ಖ್ಯಾತ ಪರಿಸರ ತಜ್ಞರಾದ ಯಲ್ಲಪ್ಪರೆಡ್ಡಿ ಅವರು ಯೋಗ ವಿವಿ ಸ್ಥಾಪನೆ ಮಾಡಲು ತೀರಾ ಅವೈಜ್ಞಾನಿಕವಾಗಿ ಜಾಗ ನಿಗದಿ ಮಾಡಲಾಗಿದೆ ಎಂದು ಹೇಳಿದ್ದರು. ಅದಕ್ಕೆ ಹಲವು ಮಹತ್ವದ ಕಾರಣಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ.
ರೈಲ್ವೇ ಹಳಿಯ ಪಕ್ಕ ಮೆಟ್ರೋ ರೈಲು ಸಂಚಾರವೂ ಇದೆ
ಸೂಚಿತ ಯೋಗ ವಿ.ವಿ ಸೈಟಿಗೆ 30 ಮೀಟರ್ ಅಂತರದಲ್ಲಿ ರೈಲ್ವೇ ಹಳಿ ಇದೆ. ರೈಲುಗಳ ಸಂಚಾರದಿಂದ ಹೊರಡುವ ಶಬ್ಧ 100 ಡೆಸಿಬಲ್ ಗಿಂತ ಹೆಚ್ಚಿರುತ್ತದೆ. ಅದು ಯೋಗ ಕೇಂದ್ರದಲ್ಲಿ ಇರಬೇಕಾದ ಪ್ರಶಾಂತತೆಗೆ ಧಕ್ಕೆ ತರುತ್ತದೆ.
ರೈಲುಗಳು ಸೈರನ್ ಅಥವಾ ಹಾರ್ನ್ ಮಾಡಿದಾಗ ಅದರ ಶಬ್ಧ 200 ಡೆಸಿಬಲ್ ಗಿಂತಾ ಹೆಚ್ಚಿದ್ದು, ಕಿವಿಗಳ ಮೇಲೆ ದುಷ್ಪರಿಣಾಮ ಉಂಟಾಗಬಲ್ಲದು. ಭಾರತೀಯ ರೈಲ್ವೇ ಹಳಿಯ ಪಕ್ಕ ಮೆಟ್ರೋ ರೈಲು ಸಂಚಾರವೂ ಇದೆ. ಈ ರೈಲುಗಳ ಸಂಚಾರದ ವೇಗ ಮತ್ತು ಅದರಿಂದ ಹೊರಡುವ ಶಬ್ಧ ಕೂಡಾ 100 ಡೆಸಿಬಲ್ ಗಿಂತಾ ಹೆಚ್ಚಿರುತ್ತದೆ.
ಧೂಳಿನ ಕಣಗಳು ಹೊಮ್ಮುತ್ತವೆ
ಇಷ್ಟಾದ ಮೇಲೆ ಬೆಂಗಳೂರು-ಮೈಸೂರು ಹೆದ್ದಾರಿ ಟ್ರಾಫಿಕ್ ನಿಂದ ಹೊರಡುವ ಶಬ್ಧದ ಜೊತೆಗೆ 2.5 ಮಿಲಿಮೈಕ್ರಾನ್ ನಿಂದ 10 ಮಿಲಿಮೈಕ್ರಾನ್ ವರೆಗೆ ಧೂಳಿನ ಕಣಗಳು ಹೊಮ್ಮುತ್ತವೆ. ಇದೂ ಕೂಡಾ ಶ್ವಾಸಕೋಸದ ಸಮಸ್ಯೆಗಳಿಗೆ ಕಾರಣವಾಗಬಲ್ಲದು.
ಇಷ್ಟು ಸಾಲದು ಎಂಬಂತೆ ಈಗ ಯೋಗ ವಿವಿ ಸ್ಥಾಪಿಸಲು ಹೊರಟಿರುವ ಸೈಟಿನ ಪಕ್ಕದಲ್ಲಿಯೇ ವೃಶಭಾವತಿ ನದಿ ಇದೆ. ಇದರ ಮಾಲಿನ್ಯದ ಕುರಿತು ಹಲವು ನೂರು ಲೇಖನಗಳನ್ನು ಎಲ್ಲರೂ ಓದಿಯೇ ಇರುತ್ತೀರಿ. ಒಮ್ಮೆ ಊಹಿಸಿಕೊಳ್ಳಿ ಇಂಥ ಕಡೆಯಿಂದ ಎಷ್ಟು ದೊಡ್ಡ ಪ್ರಮಾಣದ ರೋಗಕಾರಕಗಳು ಹರಡಬಹುದೆಂದು.!?
Recommended Video
ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು
ಇಂಥ ಎಲ್ಲಾ ಪರಿಸರ ಮಾಲಿನ್ಯಗಳನ್ನು ತಕ್ಕಮಟ್ಟಿಗೆ ತಡೆಯಬಲ್ಲ, ಸ್ವಚ್ಛ ಸುಂದರ ಗಾಳಿಯನ್ನು ಸೂಸಬಲ್ಲ ಜೈವಿಕ ವನವನ್ನು ಕಡಿದು ಯೋಗಾ ಕೇಂದ್ರ ಮಾಡುವ ಸರ್ಕಾರದ ನಡವಳಿಕೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕೋ ತಿಳಿಯುತ್ತಿಲ್ಲ.
Better late than never ಅನ್ನೋ ಹಾಗೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಜೀವವೈವಿಧ್ಯ ವನ ಉಳಿಸಿಕೊಳ್ಳುವ ತೀರ್ಮಾನಕ್ಕೆ ಬರಬೇಕು. ಅಂಥದೊಂದು ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವಂತಾಗಲಿ ಎಂಬುದು ಎಲ್ಲ ಜೀವಪರರ ಅಭಿಲಾಷೆಯಾಗಿದೆ.