ರೈತರಿಗೆ 'ಆತ್ಮ ನಿರ್ಭರ್ ಭಾರತ' ಯೋಜನೆಯಡಿ ತರಬೇತಿ
ಬೆಂಗಳೂರು, ಜ.18: ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ನೀಡುತ್ತಿರುವ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ತರಬೇತಿ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಲಿದ್ದಾರೆ. ನಾಳೆ (ಜ.19) ಬೆಳಿಗ್ಗೆ 10ಕ್ಕೆ ಮೈಸೂರಿನ ಸಿಎಫ್ ಟಿಆರ್ಐ ಸಭಾಂಗಣದಲ್ಲಿ ತರಬೇತಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಆತ್ಮ ನಿರ್ಭರ್ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವುದು ಯೋಜನೆಯ ಮುಖ್ಯ ಉದ್ದೇಶ.
ಒಂದು ಜಿಲ್ಲೆ, ಒಂದು ಉತ್ಪನ್ನ ಅಥವಾ ಬೆಳೆಯನ್ನು ಪ್ರೋತ್ಸಾಹಿಸುವುದು ಆಗಿರುತ್ತದೆ. ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ಯೋಜನೆಯಡಿ ಉತ್ಪನ್ನಗಳನ್ನು ಗುರುತಿಸಿ, ಈ ಉತ್ಪನ್ನದ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆಗೆ ಪ್ರೋತ್ಸಾಹಿಸಲು ರೈತರಿಗೆ ತರಬೇತಿ ನೀಡಲಾಗುತ್ತಿದೆ.
ಹಣ್ಣು ತರಕಾರಿ ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ಒಳಗೊಂಡ ಮೊದಲ ತರಬೇತಿ ಮುಗಿದಿದೆ. ಒಟ್ಟು 10 ತರಬೇತಿಗಳು ಮಾರ್ಚ್ ವರೆಗೆ ನಡೆಯಲಿವೆ. ಜ.11 ರಿಂದ 16 ರವರೆಗೆ ಒಂದು ತರಬೇತಿ ಮುಗಿದಿದ್ದು, ಜ.18 ರಿಂದ ಎರಡನೇ ತರಬೇತಿ ಆರಂಭಗೊಂಡಿದೆ. ಈ ಎರಡನೇ ತರಬೇತಿಯಲ್ಲಿ ಸಾಂಬಾರು ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ತರಬೇತಿ ನೀಡಲಾಗುತ್ತಿದೆ. ಪ್ರತಿ ತಾಲೂಕಿನಿಂದ 2 ರೈತರನ್ನು ಆಯ್ಕೆಮಾಡಿ ಒಂದು ಗುಂಪು ರಚಿಸಿ ಒಟ್ಟು 500 ಜನರಿಗೆ ತರಬೇತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, 6 ದಿನ ನಡೆಯುವ ಈ ತರಬೇತಿಯಲ್ಲಿ ಕೊನೆಯ 2 ದಿನಗಳನ್ನು ಮಾರ್ಕೆಟಿಂಗ್, ಬ್ರ್ಯಾಂಡ್ಗಾಗಿ ತರಬೇತಿ ನೀಡಲಾಗುತ್ತಿದೆ.
ಒಂದು ಬ್ಯಾಚ್ ನಲ್ಲಿ 50 ರೈತರನ್ನೊಳಗೊಂಡಂತೆ ಒಟ್ಟು 500 ಆಯ್ದ ರೈತರಿಗೆ 10 ಬ್ಯಾಚ್ ಗಳ ತರಬೇತಿ ಇದಾಗಿದೆ. ಚಾಮರಾಜನಗರ ಜಿಲ್ಲೆಗೆ ಅರಿಶಿನ, ಮೈಸೂರಿಗೆ ಬಾಳೆ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೆ ಸಾಂಬಾರು ಬೆಳೆ, ಗದಗಕ್ಕೆ ಬ್ಯಾಡಗಿ ಮೆಣಸಿನಕಾಯಿ, ತುಮಕೂರು, ರಾಮನಗರ,ಹಾಸನ ಜಿಲ್ಲೆಗಳಿಗೆ ತೆಂಗು, ಕೊಡಗಿಗೆ ಕಾಫಿ, ರಾಯಚೂರಿಗೆ ಗುಂಟೂರು ಮೆಣಸಿನಕಾಯಿ, ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ, ಬೀದರ್ ಜಿಲ್ಲೆಗೆ ಶುಂಠಿ ಬೆಳೆಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.
ರೈತರು ತರಬೇತಿಯ ಸದುಪಯೋಗಪಡಿಸಿಕೊಂಡು ಲಾಭದಾಯಕ ಹಾಗೂ ರೈತೋದ್ಯಮಿ ಪ್ರಗತಿ ಪರ ರೈತರಾಗುವಂತೆ ಬಿ.ಸಿ. ಪಾಟೀಲ್ ಮನವಿ ಮಾಡಿದ್ದಾರೆ.