ಕಬ್ಬು ಅರೆಯಲು ಆರಂಭಿಸಿದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ; ರೈತರಲ್ಲಿ ಹರ್ಷ
ಚಾಮರಾಜನಗರ, ಮೇ 21: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚಿದ್ದರಿಂದ ಬೆಳೆದ ಕಬ್ಬನ್ನು ಕಟಾವು ಮಾಡಲಾಗದೆ ಗದ್ದೆಯಲ್ಲೇ ಬಿಟ್ಟು ತಲೆಮೇಲೆ ಕೈಹೊತ್ತು ಕುಳಿತಿದ್ದ ರೈತರಿಗೆ ಈಗ ಸ್ವಲ್ಪ ಮಟ್ಟಿಗೆ ಜೀವ ಬಂದಂತಾಗಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕ ಚಾಮರಾಜನಗರ ಜಿಲ್ಲೆಯ ಕುಂತೂರು ಗ್ರಾಮದ ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆ ಕಬ್ಬು ಅರೆಯಲು ಮುಂದಾಗಿರುವುದು ಕಬ್ಬು ಬೆಳೆಗಾರರನ್ನು ಖುಷಿಯಾಗಿಸಿದೆ. ಜಿಲ್ಲೆಯ ಕಬ್ಬು ಬೆಳೆಗಾರರು ಕುಂತೂರು ಗ್ರಾಮದ ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಯನ್ನು ನಂಬಿ ಬೆಳೆ ಬೆಳೆಯುತ್ತಿದ್ದು, ಈಗ ಕಬ್ಬು ಕಟಾವಿಗೆ ಬಂದಿದ್ದರೂ ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದ್ದರಿಂದ ಕಟಾವಿಗೆ ಬಂದಿದ್ದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲಾಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು.
ಬಣ್ಣಾರಿ ಅಮ್ಮನ್ ಶುಗರ್ಸ್ ಕಂಪನಿಯ 350 ಗುತ್ತಿಗೆ ನೌಕರರು ಅತಂತ್ರ
ಕಾರ್ಖಾನೆ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್
ಇದೀಗ ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮವನ್ನು ಸಡಿಲಗೊಳಿಸಿದ್ದು, ಜತೆಗೆ ಗ್ರೀನ್ ಝೋನ್ ನಲ್ಲಿರುವ ಚಾಮರಾಜನಗರ ಜಿಲ್ಲಾಡಳಿತವು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ರೈತರ ಹಿತ ಕಾಪಾಡುವ ಸದುದ್ದೇಶದಿಂದ ಕಾರ್ಖಾನೆಯನ್ನು ಪುನರ್ ಆರಂಭಿಸುವಂತೆ ಅನುಮತಿ ನೀಡಿರುವುದರಿಂದ ಕಾರ್ಖಾನೆ ಕಬ್ಬು ಅರೆಯುವ ಪ್ರಕ್ರಿಯೆಗೆ ಮುಂದಾಗಿದ್ದು, ರೈತರು ಸ್ವಲ್ಪ ಮಟ್ಟಿಗೆ ನೆಮ್ಮದಿಯುಸಿರು ಬಿಡುವಂತಾಗಿದೆ.
11 ಸಾವಿರ ರೈತರು ಬೆಳೆಯುವ ವಿವಿಧ ತಳಿಯ ಕಬ್ಬುಗಳ ಅರೆಯುವಿಕೆ
ಕಾರ್ಖಾನೆಯು ಪ್ರತಿದಿನ 3600 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೊಂದಿದೆ. ಇಪ್ಪತ್ತು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಅದರಲ್ಲಿ ಕಾರ್ಖಾನೆಗೆ ಬೇಕಾದ 6.5 ಮೆಗಾವ್ಯಾಟ್ ವಿದ್ಯುತ್ ಅನ್ನು ಬಳಕೆ ಮಾಡಿಕೊಂಡು, ಸರ್ಕಾರದ ನಿಯಂತ್ರಣದಲ್ಲಿರುವ ಕೆಪಿಟಿಸಿಎಲ್ ಗೆ 12.5 ಮೆಗಾವ್ಯಾಟ್ ವಿದ್ಯುತ್ ಅನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ನೀಡುತ್ತಿದೆ. ಸುಮಾರು 14,190 ಎಕರೆ ಮೈಸೂರು ಹಾಗೂ ಚಾಮರಾಜನಗರದ ಜಿಲ್ಲೆಯ ಪ್ರದೇಶದಲ್ಲಿ 11 ಸಾವಿರ ರೈತರು ಬೆಳೆಯುವ ವಿವಿಧ ತಳಿಯ ಕಬ್ಬುಗಳನ್ನು ಇಲ್ಲಿ ಖರೀದಿಸಿ ಅರೆಯಲಾಗುತ್ತಿದೆ. ಕಾರ್ಖಾನೆಯಲ್ಲಿ ಸುಮಾರು 3200 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಖಾನೆಯು ಕಬ್ಬು ಅರೆದು ಸಕ್ಕರೆ, ವಿದ್ಯುತ್ ಉತ್ಪಾದನೆ ಮಾಡುವುದರ ಜೊತೆಗೆ ಮೊಲಾಸಿಸ್, ಮಡ್ಡಿಯನ್ನು ಉತ್ಪಾದನೆ ಮಾಡುತ್ತದೆ. ಈ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಸಕ್ಕರೆಯು ದೇಶವಿದೇಶಗಳಿಗೆ ರಫ್ತಾಗುತ್ತದೆ.
ಚಾಮರಾಜನಗರ ಸಕ್ಕರೆ ಕಾರ್ಖಾನೆಗೆ ತಮಿಳುನಾಡು ಕಾರ್ಮಿಕರು
ಕಾರ್ಮಿಕರಿಗೆ ಆರೋಗ್ಯ ತಪಾಸಣೆ
ಇದೀಗ ಕಾರ್ಖಾನೆಯು ಸರ್ಕಾರದ ನಿರ್ದೇಶನದಂತೆ ಕಾರ್ಖಾನೆಗೆ ಕೆಲಸಕ್ಕೆ ಆಗಮಿಸುವ ಪ್ರತಿಯೊಬ್ಬ ಕಾರ್ಮಿಕರನ್ನು ಆರೋಗ್ಯ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದ್ದು, ಜತೆಗೆ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೆಲಸ ಮಾಡುವಂತೆ ನೋಡಿಕೊಳ್ಳಲಾಗುತ್ತಿದೆ. ಇದಲ್ಲದೆ ಸ್ಯಾನಿಟೈಸರ್ ನಿಂದ ಹಾಗೂ ಸೋಪಿನಿಂದ ಕೈತೊಳೆದುಕೊಳ್ಳುವುದನ್ನು ಕಾರ್ಮಿಕರಿಗೆ ಕಡ್ಡಾಯ ಮಾಡಲಾಗಿದೆ.
ಕಾರ್ಖಾನೆ ವಾಹನಕ್ಕೂ ದ್ರಾವಣ ಸಿಂಪಡಣೆ
ಇಷ್ಟೆ ಅಲ್ಲದೆ, ಕಾರ್ಖಾನೆಗೆ ಒಳನುಗ್ಗುವ ಪ್ರತಿ ವಾಹನವನ್ನು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಸಿಂಪಡಿಸುವುದರ ಜೊತೆಗೆ ವಾಹನದ ಚಾಲಕರನ್ನು ಕೂಡ ಕಡ್ಡಾಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಂದ ಕೈತೊಳೆದು ಜ್ವರ ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ. ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಂಡು ಕಾರ್ಖಾನೆ ಕಬ್ಬು ಅರೆಯಲು ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಬ್ಬು ಬೆಳೆದ ರೈತರಿಗೆ ಅನುಕೂಲವಾಗಲಿದೆ.