ಬಾಳೆ ಬೆಳೆದು ಬಂಪರ್ ಲಾಭ ಪಡೆದ ಕೊಪ್ಪಳದ ರೈತ
ಕೊಪ್ಪಳ, ಜುಲೈ 29 : ಕೃಷಿಯಲ್ಲಿ ಹಲವು ಬಾರಿ ಹೊಸ ಪ್ರಯೋಗಗಳು ಫಲ ಕೊಡುತ್ತವೆ. ಕೊಪ್ಪಳದ ರೈತರೊಬ್ಬರು ತೋಟಗಾರಿಕಾ ಬೆಳೆ ಬೆಳೆದು, ಲಾಭಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಬಾಳೆ ಬೆಳೆ ಬೆಳೆದು ಬಂಪರ್ ಲಾಭ ಪಡೆದ ರೈತರ ಸಾಧನೆಯ ಮಾಹಿತಿ ಇಲ್ಲಿದೆ.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಸಲಹೆಯಂತೆ ಹನಿ ನೀರಾವರಿ ಅಳವಡಿಸಿಕೊಂಡು ಬಾಳೆ ಬೆಳೆದ ಕೊಪ್ಪಳದ ರೈತ ರಾಮಪ್ಪ ತಳವಾರ ಉತ್ತಮ ಆದಾಯಗಳಿಸಿದ್ದಾರೆ. ಈ ಭಾಗದ ಬಾಳೆ ಬೆಳೆ ತುಂಬಾ ಖ್ಯಾತಿ ಪಡೆದಿದೆ.
ಕರ್ನಾಟಕದ ಕಥೆ: ಲಾಕ್ ಡೌನ್ ವೇಳೆ ಪ್ರತಿನಿತ್ಯ ಒಬ್ಬ ರೈತ ಆತ್ಮಹತ್ಯೆ!
2019-20ನೇ ಸಾಲಿನಲ್ಲಿ ರೈತ ರಾಮಪ್ಪ ತಳವಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿ-ನೇನ್ ಎನ್ನು ಅಂಗಾಂಶ ಕೃಷಿ ಬಾಳೆ ತಳಿಯನ್ನು ಬೆಂಗಳೂರಿನ ಖಾಸಗಿ ಕಂಪನಿಯಿಂದ ಖರೀದಿಸಿ ನಾಟಿ ಮಾಡಿದ್ದರು. ಯೋಜನೆಯಡಿ ಬಾಳೆ ನಾಟಿ ಮಾಡುವಂತೆ ಸಹಾಯಕ ತೋಟಗಾರಿಕೆ ಅಧಿಕಾರಿ ಕೃಷ್ಣಮೂರ್ತಿ ಅವರು ಮಾರ್ಗದರ್ಶನ ಮಾಡಿದ್ದರು.
ಎತ್ತುಗಳನ್ನು ಪೋಷಿಸಲಾಗದೆ ಅಧುನಿಕ ಯಂತ್ರದ ಕಡೆ ವಾಲಿದ ರೈತ
ಜುಲೈ 2019ರಲ್ಲಿ ರಾಮಪ್ಪ ತಳವಾರ ನಾಟಿ ಬಾಳೆ ನಾಡಿ ಮಾಡಿದರು. ನಾಟಿಯ ಸಮಯದಲ್ಲಿ ತಜ್ಞರ ಸಲಹೆಯಂತೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಜೈವಿಕ ಗೊಬ್ಬರಗಳನ್ನು ಬೆರೆಸಿ 6*6 ಅಡಿ ಅಂತರದಲ್ಲಿ ನಾಟಿ ಮಾಡಿದರು. ಉತ್ತಮ ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಮಾಡಿದ್ದಾರೆ.
ಹೆಸರು ಹಾಗೂ ಉದ್ದು ಬೆಳೆ ಸಂರಕ್ಷಣೆಗೆ ರೈತರಿಗೆ ಸಲಹೆಗಳು
30 ಕೆಜಿ ತೂಕದ ಗೊನೆ
ನಾಟಿ ಮಾಡಿದ 6 ತಿಂಗಳ ನಂತರ ತೋಟಗಾರಿಕೆ ವಿಷಯ ತಜ್ಞರ ಸಲಹೆಯಂತೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ ಆವಿಷ್ಕರಿಸಿದ ಬಾಳೆ ಸ್ಪೆಷಲ್ 4 ರಿಂದ 5 ಬಾರಿ ಸಿಂಪರಣೆ ಮಾಡಿದ್ದಾರೆ. ರೋಗ/ ಕೀಟಗಳನ್ನು ಯಶಸ್ವಿಯಾಗಿ ಹತೋಟಿ ಮಾಡಿದ್ದರಿಂದ ಕಟಾವಿಗೆ ಬಂದಿರುವ ಬಾಳೆ ಪ್ರತಿ ಗೊನೆ 30 ಕೆಜಿಗೂ ಹೆಚ್ಚಿನ ತೂಕ ಹೊಂದಿದೆ. ಸರಾಸರಿ 7 ರೂ.ನಂತೆ ಈಗಾಗಲೇ 6 ಟನ್ಗಳಷ್ಟು ಬಾಳೆ ಮಾರಾಟ ಮಾಡಿದ್ದಾರೆ. ಕೂಡಲಗಿಯಿಂದ ತೋಟಕ್ಕೆ ಖರೀದಿದಾರರು ಬಂದು ಬೆಳೆ ಖರೀದಿ ಮಾಡಿದ್ದಾರೆ.
ಆರ್ಥಿಕ ಸ್ಥಿತಿ ಸಯಧಾರಿಸುತ್ತಿದೆ
ಕೃಷಿಕ ರಾಮಪ್ಪ ಬಾಳೆ ಕೃಷಿ ಬಗ್ಗೆ ಮಾಹಿತಿ ನೀಡಿದ್ದಾರೆ. "ಪ್ರತಿ ಕೆಜಿಗೆ ರೂ. 7ರಂತೆ ಮಾರಾಟವಾಗಿದ್ದು, ಈ ದರ 10 ರೂ. ಮೇಲ್ಪಟ್ಟು ಸಿಕ್ಕರೆ ನಮಗೆ ಲಾಭ ಆದೀತು. ಶ್ರಾವಣ ಮಾಸದಲ್ಲಿ ಉತ್ತಮ ಬೆಲೆ ಸಿಗಬಹುದು. ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಂತೆ ಬೆಳೆದ ಬಾಳೆ ಉತ್ತಮ ಫಸಲು ನೀಡಿದೆ. ಉತ್ತಮ ಬೆಲೆ ದೊರೆತರೆ ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ" ಎಂದು ಹೇಳಿದ್ದಾರೆ.
ತೋಟಗಾರಿಕಾ ಇಲಾಖೆ ಶ್ಲಾಘನೆ
ನರೇಗಾ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಒಗ್ಗೂಡಿಸಿ ಹನಿ ನೀರಾವರಿ ಅಳವಡಿಸಿಕೊಂಡು ಉತ್ತಮ ಫಸಲು ಬೆಳೆದ ರೈತ ರಾಮಪ್ಪ ಅವರ ಶ್ರಮಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಗಳು ಮೆಚ್ಚುವೆ ವ್ಯಕ್ತಪಡಿಸಿದ್ದಾರೆ. ನರೇಗಾ ಯೋಜನೆಯಡಿ ಈ ಭಾಗದ ರೈತರು ನುಗ್ಗೆ, ಸೀಬೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈತರಿಂದ ಮಾಹಿತಿ ಪಡೆಯಿರಿ
ಬಾಳೆ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ರೈತ ರಾಮಪ್ಪ ತಳವಾರ 8971633654 ಅವರನ್ನು ಸಂಪರ್ಕಿಸಬಹುದಾಗಿದೆ. ಸಹಾಯಕ ತೋಟಗಾರಿಕೆ ಅಧಿಕಾರಿ ಕೃಷ್ಣಮೂರ್ತಿ 9008995397, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್ ಅಹ್ಮದ್ ಸೋಂಪೂರು 8861294104 ಅವರಿಂದಲೂ ಸಲಹೆ ಪಡೆಯಬಹುದು.