ಅಂಗವೈಕಲ್ಯದ ನಡುವೆಯೂ ಬಾಲಣ್ಣನ ಕೃಷಿ ಕಾಯಕ
ಚಿತ್ರದುರ್ಗ, ಜನವರಿ 17: ಇಂದಿನ ದಿನಗಳಲ್ಲಿ ಕೃಷಿಯಿಂದ ಯುವ ಸಮೂಹ ವಿಮುಖವಾಗುತ್ತಿದೆ. ಆದರೆ, ಅಂಗವಿಕರೊಬ್ಬರು ತನ್ನ ಅಂಗವೈಕಲ್ಯವನ್ನೂ ಮೀರಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಈ ಮೂಲಕ ಇತರ ಜನರಿಗೆ ಮಾದರಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿ ಗ್ರಾಮದ ಬಾಲಣ್ಣ (40) ಇಂತಹ ಅಪರೂಪದ ರೈತ. ವರ್ಷಕ್ಕೆ ಕೃಷಿಯ ಮೂಲಕ 1 ರಿಂದ 1.50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ತೈವಾನ್ ಚೇಪೆಕಾಯಿ ಬೇಸಾಯ; ಕಡಿಮೆ ಖರ್ಚು, ಹೆಚ್ಚು ಆದಾಯ
ಬಾಲಣ್ಣ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಹತ್ತು ವರ್ಷದ ಹಿಂದೆ ಭತ್ತದ ಮೂಟೆ ಬಿದ್ದು ಸೊಂಟ ಹಾಗೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಆಗ ಮನೆಗೆ ಆಸರೆಯಾಗಿದ್ದ ವ್ಯಕ್ತಿ ಮೂಲೆ ಹಿಡಿಯುವಂತಾಗಿದ್ದು ಕುಟುಂಬವನ್ನು ಕಂಗೆಡಿಸಿತ್ತು.
ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ
ಅಕ್ಕಿ ಗಿರಣಿಯವರು ಬಾಲಣ್ಣನಿಗೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಐದು ವರ್ಷ ಪೋಷಕರು, ಸೋದರರ, ನಿರ್ಲಕ್ಷಕ್ಕೆ ಒಳಗಾಗಿ ಬಾಲಣ್ಣ ಮನೆಯಲ್ಲಿಯೇ ಇದ್ದರು. ಯಾರೂ ಆಸರೆಯಾಗಿ ನಿಲ್ಲದ ಕಾರಣ ಜೀವನದಲ್ಲಿ ಸಾಧನೆ ಮಾಡಿ ತನ್ನ ಜೀವನ ಸಾಗಿಸುವ ಹಿನ್ನೆಲೆಯಲ್ಲಿ ಹಿಂದೆ ಇದ್ದ ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಸಮಿತಿಯು ಕೃಷಿ ಕಾನೂನಿನ ಪರವಾಗಿದೆ: ನಾವು ಒಪ್ಪಲ್ಲ ಎಂದ ರೈತ ಸಂಘಟನೆಗಳು
ಕೃಷಿ ಚಟುವಟಿಕೆಗೆ ಮುಂದಾದರು
ನ್ಯಾಯಾಲಯದಿಂದ ಬಂದ ಒಂದಿಷ್ಟು ಪರಿಹಾರದ ಹಣದಿಂದ ಪಿತ್ರಾರ್ಜಿತವಾಗಿ ಬಂದಿದ್ದ ಎರಡು ಎಕರೆ ಜಮೀನಿನಲ್ಲಿ ಒಂದು ಬೋರ್ ವೆಲ್ ಕೊರೆಸಿ, ಭೂಮಿಯನ್ನು ಅಚ್ಚುಕಟ್ಟು ಮಾಡಿ ಕೃಷಿ ಚಟುವಟಿಕೆಗೆ ಬಾಲಣ್ಣ ಮುಂದಾದರು. ಕಳೆದ ಹತ್ತು ವರ್ಷದಿಂದ ಪತ್ನಿಯ ನೆರವಿನೊಂದಿಗೆ ಜಮೀನಿನಲ್ಲಿ ರಾಗಿ, ಸೌತೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ.
ಹೊಲದಲ್ಲಿ ಕೆಲಸ ಮಾಡುವ ಬಾಲಣ್ಣ
ಯಾರ ಮೇಲೂ ಅವಲಂಬಿತರಾಗದ ಬಾಲಣ್ಣ ಹೊಲದಲ್ಲಿ ನೀರು ಕಟ್ಟುವುದು, ಕಳೆ ಕೀಳುವುದು, ಸೌತೆಕಾಯಿ ಬಿಡಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಾರೆ. ಜೊತೆಗೆ ಕಡಿಮೆಯೆಂದರೂ ವರ್ಷಕ್ಕೆ 1 ರಿಂದ 1.50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂಗವೈಕಲ್ಯದ ಪಿಂಚಣಿ ಬಿಟ್ಟರೆ ಸರ್ಕಾರದಿಂದ ಇವರಿಗೆ ಯಾವುದೇ ಸೌಲಭ್ಯ ದೊರೆತಿಲ್ಲ.
ಟ್ರೈಸಿಕಲ್ ಖರೀದಿಸಿದ್ದಾರೆ
ಕನಿಷ್ಠ ಒಂದು ಮನೆ ಹಾಗೂ ತ್ರಿಚಕ್ರ ವಾಹನ, ಮಗನಿಗೆ ಉಚಿತ ಶಿಕ್ಷಣ ದೊರೆತರೆ ಸಾಕು ಎಂದು ಬಾಲಣ್ಣ ಹೇಳುತ್ತಾರೆ. ಪ್ರಸ್ತುತ ಇರುವ ಟ್ರೈಸಿಕಲ್ ಬೇರೊಬ್ಬ ಅಂಗವಿಕಲಿನಿಂದ 2,500 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಹಳೆಯದಾದ ಕಾರಣ ಅದು ಪದೇ ಪದೇ ರೀಪೇರಿಗೆ ಬರುತ್ತಿದ್ದು, ಜವಗೊಂಡನಹಳ್ಳಿಗೆ ಒಯ್ದು ರಿಪೇರಿ ಮಾಡಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ.
ಬದುಕು ನಿರ್ವಹಣೆ
ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಬಾಲಣ್ಣ, "ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮನೆ ಮತ್ತು ತ್ರಿಚಕ್ರ ವಾಹನ ಸೌಲಭ್ಯ ಮಾಡಿಕೊಟ್ಟರೆ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಹಾಗೂ ತನ್ನ ಬದುಕನ್ನು ತಾನು ನಿರ್ವಹಿಸುತ್ತೇನೆ" ಎನ್ನುತ್ತಾರೆ.
ಶಾಸಕರು ಸಹಾಯ ಮಾಡಲಿದ್ದಾರೆಯೇ?
ಹಿರಿಯೂರು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಈ ಅಂಗವೈಕಲ್ಯದ ನಡುವೆಯೂ ಬದುಕು ಕಟ್ಟಿಕೊಳ್ಳುತ್ತಿರುವ ರೈತ ಬಾಲಣ್ಣನಿಗೆ ತ್ರಿಚಕ್ರ ವಾಹನ ಹಾಗೂ ಮನೆ ಸೌಲಭ್ಯ ಒದಗಿಸಿ ಕೊಡುತ್ತಾರೆಯೇ? ಕಾದು ನೋಡಬೇಕು.