10 ಎಕರೆ ಜಮೀನಿಗೆ ಸಾವಯವ ಗೊಬ್ಬರವನ್ನೇ ಬಳಸಿ ಲಾಭ ಗಳಿಸುತ್ತಿರುವ ರೈತ
ಬಾಗಲಕೋಟೆ, ಜೂ29: ಸಮಗ್ರ ಕೃಷಿ ಚಟುವಟಿಕೆ ಮಾಡುವುದರ ಮೂಲಕ ಸಾವಯವ ಗೊಬ್ಬರ ಬಳಸಿಕೊಂಡು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತುಬಚಿ ಗ್ರಾಮದ ರೈತ ಜಾಗೂ ರೈತ ಮುಖಂಡ ಬಸವರಾಜ ಸಿಂಧೂರ ಕೃಷಿಯಲ್ಲಿ ತೊಡಗಿಸಿಕೊಂಡು ರೈತರಿಗೆ ಮಾದರಿಯಾಗಿದ್ದಾರೆ.
ಅವರದ್ದು ಪಕ್ಕಾ ರೈತಾಪಿ ವರ್ಗ. ಆ ರೈತ ಓರ್ವ ಪ್ರಗತಿಪರ ರೈತ ಹಾಗೂ ರೈತ ಮುಖಂಡ. ಈ ಮೊದಲು ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದರು. ಆದರೆ ಈಗ ಸಾವಯವ ಗೊಬ್ಬರ ಬಳಸಿ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. 10 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಪೇರು, ದ್ರಾಕ್ಷಿ ಬೆಳೆದು ವರ್ಷಕ್ಕೆ 25-30 ಲಕ್ಷ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಇಷ್ಟಕ್ಕೆಲ್ಲಾ ಕಾರಣ ಸಾವಯವ ಗೊಬ್ಬರ ಅನ್ನೋದು ಆ ರೈತರ ಅಚಲ ನಂಬಿಕೆ.
ಹೆಚ್ಚಿನ ಬೆಳೆ ತೆಗೆಯುವ ಉದ್ದೇಶದಿಂದ ಭೂಮಿಗೆ ವಿಪರೀತ ರಸಾಯನಿಗಳನ್ನು ಸಿಂಪಡಿಸಿ ಭೂಮಿಯ ಫಲವತ್ತತೆ ಹಾಳು ಮಾಡುತ್ತಾರೆ. ಆದರೆ, ಇಂತಹ ರೈತರ ಮಧ್ಯೆ ಸಾವಯವ ಗೊಬ್ಬರವನ್ನೇ ನಂಬಿ ಕೃಷಿ ಮಾಡುವ ಮೂಲಕ ಆ ಮೂಲಕ ಪ್ರಗತಿಯನ್ನೂ ಕಾಣುತ್ತಿರುವ ಈ ರೈತ ಎಲ್ಲರಿಗೂ ಮಾದರಿಯಾಗಿದ್ದಾರೆ.
ದ್ರಾಕ್ಷಿ, ಪೇರು,-ಬಾಳೆಗಿಡ, ಕಬ್ಬು ಬೆಳೆಯುವತ್ತ ರೈತ
ಸಮೃದ್ಧವಾಗಿ ಬೆಳೆದ ದ್ರಾಕ್ಷಿ, ಪೇರು, ಜೊತೆಗೆ ಬಾಳೆಗಿಡ, ಕಬ್ಬು. ಸಮೃದ್ಧವಾಗಿ ಬೆಳೆದ ಬೆಳೆಗಳನ್ನು ಗಮನಿಸುತ್ತಾ ವ್ಯವಸಾಯದಲ್ಲಿ ತೊಡಗಿರುವ ರೈತ. ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತುಬಚಿ ಗ್ರಾಮದ ರೈತ ಜಾಗೂ ರೈತ ಮುಖಂಡ ಬಸವರಾಜ ಸಿಂಧೂರ ಅವರ ಹೊಲದಲ್ಲಿ ಕಂಡು ಬಂದ ದೃಶ್ಯ.
ಬಹಳಷ್ಟು ರೈತರು ಈಗಲೂ ಸಹ ಹನಿ ನೀರಾವರಿ ಪದ್ಧತಿಯನ್ನು ಬಳಸಿಕೊಂಡು ಬೆಳೆ ಬೆಳೆದಿದ್ದಾರೆ. ಹೌದು ಹೀಗೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ಬಸವರಾಜ ಸಿಂಧೂರ, ತಮ್ಮ 10 ಎಕರೆ ಜಮೀನಿನಲ್ಲಿ ನಾಲ್ಕು ಬಗೆಯ ಬೆಳೆ ಬೆಳೆದು ವಾರ್ಷಿಕ 25 ರಿಂದ30 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ. ಇದರಿಂದ ಝರ್ಜರಿತರಾಗದೇ ಮುನ್ನುಗ್ಗಿದರೆ ಭೂಮಿ ತಾಯಿ ಕೈ ಹಿಡಿಯೋದು ಗ್ಯಾರಂಟಿ ಅಂತಾರೆ.
ಜಮೀನಿನಲ್ಲೇ ಕೃಷಿಹೊಂಡ ನಿರ್ಮಾಣ
10 ಎಕರೆ ಜಮೀನಿನಲ್ಲಿ ದ್ರಾಕ್ಷಿ 4 ಎಕರೆ, 2 ಎಕರೆ ಪೇರು, 2 ಎಕರೆ ಕಬ್ಬು ಹಾಗೂ 2 ಎಕರೆ ಬಾಳೆ ಬೆಳೆ ಬೆಳೆದಿದ್ದಾರೆ. ಇದ್ಯಾವುದಕ್ಕೂ ಬಸವರಾಜ ಅವರು ರಾಸಾಯನಿಕ ಗೊಬ್ಬರವನ್ನು ಬಳಸಿಲ್ಲ. ಸ್ವತಃ ಜಮೀನಿನಲ್ಲೇ ಸಾವಯವ ಗೊಬ್ಬರವನ್ನು ರೆಡಿ ಮಾಡಿ ಎಲ್ಲ ಬೆಳೆಗಳಿಗೂ ಸಿಂಪರಣೆ ಮಾಡುತ್ತಾರೆ. ದ್ರಾಕ್ಷಿ, ಕಬ್ಬು, ಪೇರು, ಬಾಳೆ ಬೆಳೆಗಳ ಜೊತೆಗೆ ಜಮೀನಿನಲ್ಲೇ ಕೃಷಿಹೊಂಡ ನಿರ್ಮಾಣ ಮಾಡಿದ್ದು, ಅದರಿಂದಲೂ ಕೃಷಿಗೆ ನೀರಾವರಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ಒಂದು ಬೆಳೆ ಕೈ ಬಿಟ್ರು, ಮತ್ತೊಂದು ಬೆಳೆ ಕೈ ಹಿಡಿಯುತ್ತಿದ್ದು ಬಸವರಾಜ ಸಿಂಧೂರ ಅವರು ವಾರ್ಷಿಕವಾಗಿ 25- 30 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಮಾಡುವುದರ ಮೂಲಕ ಕೃಷಿ ಭೂಮಿಗೆ ಅತ್ಯಮೂಲ್ಯವಾದ ಕೊಟ್ಟಿಗೆ ಗೊಬ್ಬರವನನ್ನು ಬಳಸಿಕೊಂಡು ಬೆಳೆಗಳಿಗೆ ಫಲವತ್ತತೆ ಹೆಚ್ಚಿಸಿಕೊಂಡು, ಉತ್ತಮ ಇಳುವರಿ ಪಡೆದು ಲಾಭಗಳಿಸಿಕೊಂಡು ಬರಲಾಗುತ್ತಿದೆ ಎಂದರು.
ಅಕ್ಕಪಕ್ಕದ ಗ್ರಾಮಗಳ ರೈತರಿಗೂ ಆಕರ್ಷಣೆ
ಮೂಲ ರೈತ ಕುಟುಂಬದಿಂದ ಬಂದಿರುವ ಇವರು ಕಳೆದೆರಡು ವರ್ಷಗಳ ಹಿಂದೆ ಸಾಕಷ್ಟು ನಷ್ಟ ಅನುಭವಿಸಿದ್ದರು. ಇದಕ್ಕೆ ಕಾರಣ ರಾಸಾಯನಿಕ ರಸಗೊಬ್ಬರ, ಕ್ರಿಮಿನಾಶಕಗಳ ಸಿಂಪರಣೆ. ರಾಸಾಯನಿಕ ಗೊಬ್ಬರದಿಂದ ಆದ ಲಾಸ್ನಿಂದ ಬೇಜಾರಾಗಿದ್ದ ಸಿಂಧೂರ ಅವರು ಸಾವಯವ ಕೃಷಿ ಮಾಡುವ ಆಲೋಚನೆ ಮಾಡುತ್ತಾರೆ. ಅಲ್ಲದೇ ಸಾವಯವ ಕೃಷಿಯಿಂದ ಒಳ್ಳೆಯ ಬೆಳೆ ಬೆಳೆದಿದ್ದಾರೆ. ಎಲ್ಲ ರೈತರು ರಾಸಾಯನಿಕ ಗೊಬ್ಬರ ಬಿಡುವಂತೆ ಸಲಹೆ ಮಾಡುತ್ತಾರೆ. ಜೊತೆಗೆ ಸಾವಯವ ಕೃಷಿ ಮೊದಲಿಗೆ ಹೊಡೆತ ನೀಡುತ್ತದೆ. ಭೂಮಿಗೆ ಬೇಕಾದಂತಹ ಪೋಷಕಾಂಶವನ್ನು ಸರಿಯಾದ ಸಮಯಕ್ಕೆ ನೀಡಿದರೆ ಬೆಳೆ ಉತ್ತಮವಾಗಿ ಬರಲಿದ್ದು, ಹಾಕಿರುವ ಬಂಡವಾಳ ಸಮೇತ ಲಾಭ ಕಾಣಲು ಸಾಧ್ಯವಾಗುತ್ತದೆ ಎಂದು ರೈತರಿಗೆ ಮಾರ್ಗಸೂಚಕರಾಗಿದ್ದಾರೆ ರೈತ ಬಸವರಾಜ ಸಿಂಧೂರ ಅವರು.
ಮಾಹಿತಿ ಪಡೆಯುವ ಅಕ್ಕಪಕ್ಕದ ರೈತರು
ಜೊತೆಗೆ ಇದರಿಂದ ಭೂಮಿ ಹಾಳಾಗದೆ ಫಲವತ್ತತೆಯಿಂದ ಕೂಡಿರುತ್ತದೆ ಅಂತಾರೆ. ಇನ್ನು ಬಸವರಾಜ ಅವರ ಈ ಸಾವಯವ ಕೃಷಿ ಅಕ್ಕಪಕ್ಕದ ಗ್ರಾಮಗಳ ರೈತರಿಗೂ ಆಕರ್ಷಣೆ ಆಗಿದೆ. ಹೀಗಾಗಿ ಪ್ರತಿದಿನ ಬಸವರಾಜ ಅವರ ಜಮೀನಿಗೆ ರೈತರು ಭೇಟಿ ನೀಡಿ ಸಲಹೆ ಸೂಚನೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ರಾಸಾಯನಿಕ ಗೊಬ್ಬರ ಬಳಸಿ ಸಾಕಷ್ಟು ನಷ್ಟ ಅನುಭವಿಸಿದ್ದ ರೈತ ಬಸವರಾಜ ಅವರನ್ನು ಸಾವಯವ ಕೃಷಿ ಕೈ ಹಿಡಿದಿದೆ. ಹೀಗಾಗಿ ವಾರ್ಷಿಕವಾಗಿ ಬಸವರಾಜ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದು, ಸಮಗ್ರ ಕೃಷಿ ಚಟುವಟಿಕೆ ಮಾಡುವುದರ ಮೂಲಕ ಸಾವಯವ ಗೊಬ್ಬರ ಬಳಸಿಕೊಂಡು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ.ಇದು ಪಕ್ಕದ ರೈತರಿಗೆ ಮಾದರಿಯಾಗಿದೆ.
Recommended Video