ಬಾಗಲಕೋಟೆ: ಓದಿದ್ದು ಇಂಜಿನಿಯರಿಂಗ್, ಕೃಷಿಯಲ್ಲಿ ಅದ್ಭುತ ಸಾಧನೆ
ಬಾಗಲಕೋಟೆ, ಆಗಸ್ಟ್, 16: ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದ ಓಂಕಾರ ಕುಲಕರ್ಣಿ ಎಂಬುವವರು ಓದಿದ್ದು ಇಂಜಿನಿಯರಿಂಗ್. ಆದರೆ ಇವರು ಕೃಷಿ ವೃತ್ತಿಯನ್ನೇ ಮೈಗೂಡಿಸಿಕೊಂಡು ಯಶಸ್ಸು ಗಳಿಸಿದ್ದಾರೆ.
ಇವರು ಕೃಷಿಯಲ್ಲಿ ಮಾಡಿದ ಸಾಧನೆ ಸಾಮಾನ್ಯವಾಗಿಲ್ಲ. ಇಂಜಿನಿಯರ್ ಪದವಿಧರ ಕೃಷಿಯಲ್ಲಿ ಮಾಡಿದ ಸಾಧನೆಯನ್ನು ಕೇಳಿದರೆ ಎಂಥವರೂ ಹೆಮ್ಮೆಪಡುವಂತಾಗುತ್ತದೆ. ಇಂಜಿನಿಯರಿಂಗ್ ಕೋರ್ಸ್ ಮುಗಿದ ಅವಧಿಯಲ್ಲೇ ಮಹಾಮಾರಿ ಕೊರೊನಾ ವಕ್ಕರಿಸಿ ಲಾಕ್ಡೌನ್ ಕೂಡ ಆಗಿತ್ತು. ಆ ಸಮಯದಲ್ಲಿ ಕೆಲಸ ಸಿಗುವುದು ತುಂಬಾ ಕಷ್ಟಕರವಾಗಿತ್ತು. ಆಗ ಈತ ಇಂಜಿನಿಯರಿಂಗ್ ಫೀಲ್ಡ್ ಬಿಟ್ಟು ಕೃಷಿ ಕಡೆಗೆ ಗಮನಹರಿಸತೊಡಗಿದ. ಕೊನೆಗೂ ತನ್ನನ್ನು ತಾನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಬಾಳೆ ಕೃಷಿಯಲ್ಲಿ ಸಾಧನೆ ಮಾಡಿದ್ದಾನೆ. ಆತನ ಬಾಳೆ ಬೆಳೆ ಈಗ ಅರಬ್ ದೇಶದವರೆಗೂ ಪ್ರಾಮುಖ್ಯತೆ ಪಡೆದಿದೆ.
ಬಾಗಲಕೋಟೆ: ಕೃಷಿಯಲ್ಲಿ ಕುಬೇರನಾದ ರೈತ ಮಲ್ಲಪ್ಪ ಮೇಟಿ!
ಇಂಜಿನಿಯಂರಿಂಗ್ ಪದವಿಧರ ಓಂಕಾರ ಕುಲಕರ್ಣಿ ಹೊಲದಲ್ಲಿ ಸಮೃದ್ಧವಾಗಿ ಬಾಳೆಯನ್ನು ಬೆಳೆಯುತ್ತಿದ್ದಾರೆ. ಇವರು ಸದಾ ತೋಟದ ಕೆಲಸದಲ್ಲಿ ನಿರತರಾಗಿರುತ್ತಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದ ಹೊಲದಲ್ಲಿ ಸಮೃದ್ಧವಾಗಿ ಬಾಳೆ ಬೆಳೆದು ದೇಶ, ವಿದೇಶಗಳಿಗೂ ಹೆಸರುವಾಸಿ ಆಗಿದ್ದಾರೆ.
ಕೊರೊನಾ ಸೋಂಕು ಹೆಚ್ಚಾದ ಸಂದರ್ಭದಲ್ಲಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು. ಆಗ ಮಹಾಮಾರಿ ಎಲ್ಲರಿಗೂ ಒಂದಿಲ್ಲ ಒಂದು ಪಾಠವನ್ನು ಕಲಿಸಿದೆ. ಬೀದಿಬದಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ಕಂಗಾಲಾಗಿ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಎಷ್ಟೋ ಉದ್ಯಮಿಗಳು ಆರ್ಥಿಕ ಸಂಕಷ್ಟದ ಹೊಡೆತದಿಂದ ಅಕ್ಷರಶಃ ತತ್ತರಿಸಿ ಹೋಗಿದ್ದರು.
ಓಂಕಾರ ಕುಲಕರ್ಣಿಗೆ ಕೊರೊನಾ ಕಲಿಸಿದ ಪಾಠ!
ಹಾಗೆಯೇ ಇಂಜಿನಿಯರಿಂಗ್ ಪದವೀಧರ ಓಂಕಾರ ಕುಲಕರ್ಣಿ ಕೂಡ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದು, ಕೊನೆಗೆ ಕೃಷಿ ಕಡೆಗೆ ಕಾಲಿಟ್ಟಿದ್ದಾನೆ. ಓಂಕಾರ ಕುಲಕರ್ಣಿ ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಓಂಕಾರ ಬಿ ಇ ಓದುತ್ತಿದ್ದರೂ ಇವರ ಗಮನ ಮಾತ್ರ ಕೃಷಿ ಕಡೆಗೆ ಇತ್ತು. 2020ರಲ್ಲಿ ಇಂಜಿನಿಯರ್ ಮುಗಿಸಿದಾಗ ಕೊರೊನಾ ವಕ್ಕರಿಸಿ ಲಾಕ್ಡೌನ್ ಆಗಿತ್ತು. ಈ ವೇಳೆ ಕೆಲಸ ಸಿಗುವುದಿರಲಿ, ಎಷ್ಟೋ ಸಿವಿಲ್ ಕನ್ಸ್ಟ್ರಕ್ಷನ್ ಕಂಪನಿಗಳು ಮುಚ್ಚಿ ಹೋದವು. ಆಗಿನಿಂದ ಕೃಷಿಯಲ್ಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು, ಏಳು ಎಕರೆ ಜಮೀನಿನಲ್ಲಿ ಜಿ-9 ತಳಿಯ ಬಾಳೆ ಬೆಳೆದಿದ್ದೇನೆ. ಸದ್ಯ ಬಾಳೆ ತುಂಬಾ ಸಮೃದ್ದವಾಗಿ ಗೊನೆ ಹಿಡಿದಿದ್ದು, ಇರಾನ್ ಹಾಗೂ ಇರಾಕ್ಗೆ ರಪ್ತು ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ಓಂಕಾರ ಬಾಳೆ ಬೆಳೆದಿದ್ದು ಎಷ್ಟು ಎಕರೆಯಲ್ಲಿ?
ಓಂಕಾರ ಕುಲಕರ್ಣಿ ಇಷ್ಟೊಂದು ಸಮೃದ್ದವಾಗಿ ಬಾಳೆ ಬೆಳೆಯಲು ಮಹಾಮಾರಿ ಕೊರೊನಾವೇ ಕಾರಣ ಅಂತಲೂ ಹೇಳಬಹುದು. ಕೋವಿಡ್ ಸಂಕಷ್ಟದಿಂದ ಸಿವಿಲ್ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಕೂಡ ತುಂಬಾ ಕಡಿಮೆ ಆಗಿತ್ತು. ಜೊತೆಗೆ ಮನೆಯವರು ಇಂತಹ ಪರಿಸ್ಥಿತಿಯಲ್ಲಿ ಮನೆ ಬಿಟ್ಟು ಬೇರೆ ಕಡೆ ಕೆಲಸಕ್ಕೆ ಕಳಿಸುವುದಕ್ಕೂ ಒಪ್ಪಿರಲಿಲ್ಲ. ಇದೆ ಸಮಯದಲ್ಲಿ ಕೃಷಿ ಕಡೆಗೆ ಕಾಲಿಟ್ಟ ಓಂಕಾರ ಬಾಳೆ ಬೆಳೆಯುವ ಪ್ಲಾನ್ ಮಾಡಿದರು. ಯಾರೆ ಆಗಲಿ ಮೊದಲ ವರ್ಷ ಕೇವಲ ಒಂದು ಎಕರೆ ಅಥವಾ ಎರಡು ಎಕರೆ ಬಾಳೆ ಬೆಳೆಯುತ್ತಾರೆ. ತಜ್ಞರು ಕೂಡ ಮೊದಲ ಬಾರಿಗೆ ಮೂರು ಎಕರೆಗಿಂತ ಹೆಚ್ಚು ಬೆಳೆಯುವುದಕ್ಕೆ ಸಲಹೆ ನೀಡುವುದಿಲ್ಲ. ಆದರೆ ಓಂಕಾರ ಏಳು ಎಕರೆ ಬಾಳೆ ಗಿಡ ನೆಟ್ಟು ಯಶಸ್ಸು ಕಂಡಿದ್ದು, ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.
ಕೆ.ಜಿ. ಬಾಳೆಕಾಯಿ ಬೆಲೆ ಎಷ್ಟು?
ಒಂದೊಂದು ಗೊನೆ 35 ಕೆಜಿ ತೂಗುತ್ತಿದ್ದು, ಇಡೀ ತೋಟದ ತುಂಬೆಲ್ಲಾ ಬಾಳೆ ಗೊನೆಗಳ ಸಾಲು ನೋಡುಗರ ಗಮನ ಸೆಳೆಯುತ್ತವೆ. ಎಕರೆಗೆ ಒಂದು ಲಕ್ಷ ಖರ್ಚು ಮಾಡಿದ್ದು, ನಾಲ್ಕುವರೆ ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ. ಇವರ ಬೆಳೆದ ಬಾಳೆ ಈಗ ಇರಾನ್, ಇರಾಕ್ ಕಡೆ ರಪ್ತಾಗುತ್ತಿದೆ. ಒಂದು ಕೆ.ಜಿ. ಬಾಳೆಕಾಯಿಗೆ 11 ರೂಪಾಯಿ ಸಿಗಲಿದೆ. ಈ ಮೂಲಕ ಏಳು ಎಕರೆಯ ಬಾಳೆಯಿಂದ ಕನಿಷ್ಠ ಅಂದರೂ ಇವರ ಕೈಗೆ 30 ಲಕ್ಷ ಆದಾಯ ಸಿಗುತ್ತಿದೆ. ಹೊಲದಲ್ಲಿ ಹನಿ ನೀರಾವರಿ ಮೂಲಕ ನೀರಾವರಿ ಕಲ್ಪಿಸಲಾಗಿದೆ. ಇವರು ಕಾರ್ಮಿಕರ ಜೊತೆ ಕೈಜೋಡಿಸಿ ಅವರಿಗೆ ಸಲಹೆ ನೀಡುತ್ತಾ ಚಿಕ್ಕ ವಯಸ್ಸಲ್ಲೇ ಓರ್ವ ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದಾರೆ.
ವಿದೇಶದವರೆಗೂ ಬಾಳೆ ವ್ಯಾಪಾರ
ಕೃಷಿಯಲ್ಲಿ ಒಂಕಾರ ಅವರ ಯಶಸ್ಸಿಗೆ ಖಾಸಗಿ ಆಗ್ರೊ ಕಂಪನಿಯೊಂದರ ಫೀಲ್ಡ್ ಡೆವೆಲಪ್ಮೆಂಟ್ ಆಫೀಸರ್ ರವಿ ಕಾರಾಜನಗಿ ಅವರ ಸಲಹೆ ತುಂಬಾ ಮುಖ್ಯವಾಗಿದೆ. ಇವರು ಕೊಟ್ಟ ಸಲಹೆಯಿಂದ ಓಂಕಾರ್ ಇವತ್ತಿನ ದಿನಗಳಲ್ಲಿ ಬಾಳೆ ವ್ಯಾಪಾರದಲ್ಲಿ ವಿದೇಶದವರೆಗೂ ಗುರುತಿಸಿಕೊಂಡಿದ್ದಾರೆ. ಓಂಕಾರ ಅವರ ಕೃಷಿ ಇದೀಗ ಇತರೆ ರೈತರಿಗೂ ಅಚ್ಚರಿ ಮೂಡಿಸಿದೆ. ಓಂಕಾರ ಅವರ ಸಾಧನೆಗೆ ಸ್ಥಳೀಯ ಪ್ರಗತಿಪರ ರೈತರಾದ ರಮೇಶ್ ಜೀರಗಾಳ, ಮಾರ್ಗದರ್ಶಕರಾದ ವಿ ಕಾರಾಜನಗಿ ಪ್ರಶಂಸೆ ವ್ಯಕ್ತಪಡಿಸಿದರು. ಇಂಜಿನಿಯರಿಂಗ್ ಮುಗಿಸಿ ಯಾವುದಾದರೂ ಒಂದು ಕಂಪನಿಯಲ್ಲಿ ಈ ಯುವಕ ನೆಲೆಯೂರಬಹುದಿತ್ತು. ಕೃಷಿಯಲ್ಲಿ ಆಸಕ್ತಿ ಇದ್ದುದರಿಂದ ಇವರು ಇದೀಗ ಪ್ರಗತಿಪರ ರೈತನನ್ನಾಗಿ ಹೊರಹೊಮ್ಮಿದ್ದಾರೆ. ಇವರ ಕೃಷಿ ಕಾರ್ಯ ಎಷ್ಟೋ ಪದವಿಧರರಿಗೆ ಸ್ಫೂರ್ತಿ ಆಗಿದೆ.