ಅಡಿಕೆ ಬೆಳೆಯ ಕೊಳೆ ರೋಗ ಪರಿಹಾರ ಕ್ರಮಕ್ಕೆ ಪ್ರತ್ಯೇಕ ಸಭೆ
ಬೆಳಗಾವಿ, ಡಿಸೆಂಬರ್ 14: ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕೊಳೆ ರೋಗದಿಂದ ನಷ್ಟವಾಗಿರುವ ಅಡಿಕೆ ಬೆಳೆಗೆ ಪರಿಹಾರ ಕುರಿತಂತೆ ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ ಆರ್ ರಮೇಶ್ಕುಮಾರ್ ಶುಕ್ರವಾರ ಸರ್ಕಾರಕ್ಕೆ ಸಲಹೆ ನೀಡಿದರು.
ಪ್ರಶ್ನೋತ್ತರ ವೇಳೆ ಸದಸ್ಯ ಹರೀಶ್ ಪುಂಜಾ ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಂ ಸಿ ಮನಗೂಳಿ ಅವರು ಉತ್ತರಿಸುವ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ ಕುರಿತಂತೆ ವಿವಿಧ ಸದಸ್ಯರು ಸಭೆಯ ಗಮನಕ್ಕೆ ತಂದರು.
ಅಡಿಕೆ ಬೆಳೆಗೆ ಕೊಳೆರೋಗ, ಆತಂಕದಲ್ಲಿ ಬೆಳೆಗಾರರು
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕರಾದ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.
ಸದಸ್ಯರ ಮನವಿಗೆ ಸ್ಪಂದಿಸಿದ ರಮೇಶ್ ಕುಮಾರ್ ಅವರು ಅಡಿಕೆ ಬೆಳೆಗಾರರ ಸಂಕಷ್ಟ ಕುರಿತಂತೆ ಮುಂದಿನ ವಾರ ತಮ್ಮ ಕೊಠಡಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿ ಪರಿಹಾರ ಕಂಡು ಹಿಡಿಯಲು ಮುಂದಾಗೋಣ ಎಂದು ಚರ್ಚೆಗೆ ತೆರೆ ಎಳೆದರು.
252 ಕೋಟಿ ರೂ. ನಷ್ಟ
ತೋಟಗಾರಿಕಾ ಸಚಿವ ಎಂ.ಸಿ ಮನಗೋಳಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಳೆ ರೋಗದಿಂದ ಅಡಿಕೆ ಬೆಳೆ ಹಾನಿ ವಿವರ ಹಾಗೂ ಸರ್ಕಾರದ ಪರಿಹಾರ ಕ್ರಮಗಳ ಕುರಿತು ವಿವರಿಸಿದರು.
2018-19ನೇ ಸಾಲಿನಲ್ಲಿ ಅತಿವೃಷ್ಟಿಯಿಂದ 33,595 ಹೆಕ್ಟೇರ್ ಪ್ರದೇಶದ ಅಡಿಕೆ ಬೆಳೆಗೆ ಕೊಳೆ ರೋಗ ವ್ಯಾಪಿಸಿದೆ. ಇದರಿಂದ 252 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.
ಕೇಂದ್ರದಿಂದ ಹಣ ಬಿಡುಗಡೆ
ಅಡಿಕೆ ಬೆಳೆ ಒಳಗೊಂಡಂತೆ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಗೆ 60.47 ಕೋಟಿ ರೂ. ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪರಿಹಾರ ಒದಗಿಸಲು 175.27 ಕೋಟಿ ರೂ. ಅನುದಾನ ಒದಗಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಂತೆ ಹಣ ಬಿಡುಗಡೆಯಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಸಂಶೋಧನೆ: ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬುದು ಶುದ್ಧ ಸುಳ್ಳು
1200 ರೂ. ಸಹಾಯಧನ
ಕೊಳೆ ರೋಗದ ನಿಯಂತ್ರಣಕ್ಕಾಗಿ ರೈತರಿಗೆ ಪ್ರಾತ್ಯಕ್ಷಿಕೆಯ ವಿವರಗಳನ್ನು ಮಾಧ್ಯಮಗಳ ಮೂಲಕ ಪ್ರಚಾರ ಹಾಗೂ ಕರ ಪತ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ಮೈಲುತುತ್ತು (ಕಾಪರ್ ಸಲ್ಫೇಟ್) ಹಾಗೂ ಇತರ ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಭಿಯಾನದಡಿ ಪ್ರತಿ ಹೆಕ್ಟೇರ್ಗೆ 1200 ರೂ. ಸಹಾಯಧನ ನೀಡಲಾಗುತ್ತಿದೆ.
ಗರಿಷ್ಠ ನಾಲ್ಕು ಎಕರೆವರೆಗೆ ಪ್ರತಿ ರೈತರಿಗೆ ಸಹಾಯಧನ ಒದಗಿಸಲಾಗುತ್ತಿದೆ ತೋಟಗಾರಿಕೆ ಬೆಳೆಗಳ ರೋಗ ಮತ್ತು ಕೀಟ ನಿಯಂತ್ರಣ ಯೋಜನೆ ಅಡಿ ಪ್ರತಿ ಹೆಕ್ಟೇರ್ಗೆ 7500 ರೂ. ಸಾಮಾನ್ಯ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ 9000 ರೂ. ವರೆಗೆ ಸಹಾಯಧನ ಒದಗಿಸಲಾಗುತ್ತಿದೆ.
ಒಂದು ಹೆಕ್ಟೇರ್ಗೆ 2000 ರೂ
ತಾಲೂಕು ಪಂಚಾಯತ್ ಯೋಜನೆ ಅಡಿ ಒಂದು ಹೆಕ್ಟೇರ್ಗೆ 2000 ರೂ ನಂತೆ ಸಹಾಯಧನ ಹಾಗೂ ಶೇಕಡಾ 33 ಕ್ಕಿಂತಲೂ ಹೆಚ್ಚು ಫಸಲು ಹಾನಿಯಾದಲ್ಲಿ ಪ್ರಕೃತಿ ವಿಕೋಪ ಪರಿಹಾರದ ಅಡಿ ಪ್ರತಿ ಹೆಕ್ಟೇರ್ಗೆ 18,000 ರೂ. ಗಳನ್ನು ಗರಿಷ್ಠ ಎರಡು ಎಕರೆವರೆಗೆ ನೀಡಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಅಡಿಕೆ ಬೆಳೆಗಾರರಿಗೆ ಆಗುವ ನಷ್ಟವನ್ನು ಭರಿಸಲು ಬೆಳೆ ವಿಮೆ ಯೋಜನೆ ಅಳವಡಿಸಲಾಗಿದೆ ಎಂದು ತಿಳಿಸಿದರು.