ಬಾಗಲಕೋಟೆಗೆ ಬಂತು ಏಷ್ಯಾದ ಅತೀ ದೊಡ್ಡ ಹನಿ ನೀರಾವರಿ ಯೋಜನೆ
ಬಾಗಲಕೋಟೆ, ಜನವರಿ 31: ಏಷ್ಯಾದಲ್ಲೇ ಅತೀ ದೊಡ್ಡ ಹನಿ ನೀರಾವರಿ ಯೋಜನೆ ಕರ್ನಾಟಕದ ಬಾಗಲಕೋಟೆಯಲ್ಲಿ ಜಾರಿಗೆ ಬರಲಿದೆ. ಇಸ್ರೇಲ್ ಈ ಯೋಜನೆಗೆ ತಾಂತ್ರಿಕ ನೆರವು ನೀಡುತ್ತಿದೆ. ಈ ಯೋಜನೆಗೆ ರಾಮಥಾಲ್ ಯೋಜನೆ ಎಂದು ಹೆಸರಿಡಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಈ ರಾಮಥಾಲ್ ಹನಿ ನೀರಾವರಿ ಯೋಜನೆ ಆರಂಭವಾಗಿದೆ. ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಟರ್ ಲಿ. (MEIL) ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಇಸ್ರೇಲ್ ಸಂಸ್ಥೆ ನೆಟಾಫಿಮ್ ಇದಕ್ಕೆ ತಾಂತ್ರಿಕ ನೆರವು ನೀಡುತ್ತಿದೆ.
ನೀರಾವರಿ ಯೋಜನೆಗೆ 1 ಲಕ್ಷ ಕೋಟಿ: ಬಿಎಸ್ ವೈ ಭರವಸೆ
ಕೃಷ್ಣ ಭಾಗ್ಯ ಜಲನಿಗಮ ಲಿಮಿಟೆಡ್ ಅಡಿಯಲ್ಲಿ ಈ ರಾಮಥಾಲ್ ಮರೋಳ ಯೋಜನೆ ಜಾರಿಗೆ ಬರುತ್ತಿದ್ದು ಈ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಯ ಹೊಣೆಯನ್ನು ಎಂಇಐಎಲ್ ಗೆ ನೀಡಲಾಗಿದೆ.
12,300 ಎಕರೆಗೆ ನೀರು
ಹನಿ ನೀರಾವರಿಗಾಗಿ 2,150 ಕಿಲೋಮೀಟರ್ ಉದ್ದದ ಪೈಪ್ ಲೈನ್ ಅಳವಡಿಸಲಾಗುತ್ತದೆ. ಈ ಯೋಜನೆಯಿಂದ 12,300 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದ್ದು 6,000 ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಹನಿ ನೀರಾವರಿ ವರದಾನ
ರಾಮಥಾಲ್ ಮರೋಳ ಭಾಗದಲ್ಲಿ ರೈತರು ಭಾರಿ ನೀರಾವರಿ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಅಂತ್ಯದಲ್ಲಿರುವವರಿಗೆ ಎರಡು ಬೆಳೆಯ ಬದಲು ಒಂದು ಬೆಳೆಯನ್ನೂ ತೆಗೆಯಲು ಸಾಧ್ಯವಾಗುತ್ತಿಲ್ಲ. ಇವರಿಗೆ ಈ ಹನಿ ನೀರಾವರಿ ಯೋಜನೆ ವರದಾನವಾಗಲಿದೆ.
ಬಳಕೆ ಸುಲಭ
ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಎಂಇಐಎಲ್ ಆಂಧ್ರ ಪ್ರದೇಶದಲ್ಲಿ ಆಲಮಟ್ಟಿಯ ಹಿನ್ನೀರನ್ನು ಬಲಸಿಕೊಂಡು ಯಶಸ್ವಿಯಾಗಿ ಪಾಟ್ಟಿಸಂ ಯೋಜನೆಯನ್ನು ಅನುಷ್ಠಾಗೊಳಿಸಿದೆ.
ಈ ಯೋಜನೆಯಲ್ಲಿ ಕೃಷಿಕರ ಜಮೀನಿನಲ್ಲಿ ಸಿಲಿಂಡರ್ ಇಡಲಾಗುತ್ತದೆ. ಈ ಸಿಲಿಂಡರ್ ಮೂಲಕ ಕೃಷಿಕರು ನೀರು ಪಡೆಯಲಿದ್ದಾರೆ. ಈ ಸಿಲಿಂಡರ್ ನಲ್ಲಿರುವ ನೀರಿಗೆ ರಸಗೊಬ್ಬರ, ಕೀಟನಾಶಕಗಳನ್ನು ಮಿಶ್ರಣ ಮಾಡಬಹುದಾಗಿದೆ.
ನೀರಾವರಿ ದುರುಪಯೋಗವನ್ನು ಈ ವ್ಯವಸ್ಥೆ ತಡೆಯಲಿದೆ. ಜತೆಗೆ ಕೃಷ್ಣಾ ಹಿನ್ನೀರಿಗೆ ಹರಿದು ಹೋಗುವ ಕೊಳಚೆ ನೀರನ್ನೂ ಶುದ್ಧೀಕರಣಗೊಳಿಸಲಾಗುತ್ತದೆ.
ರೈತರಿಗೆ ಲಾಭ
ಒಟ್ಟಾರೆ ಯೋಜನೆಯಿಂದ ನೀರು, ಗೊಬ್ಬರದ ಮಿತಬಳಕೆಯೊಂದಿಗೆ ರೈತರ ಖರ್ಚು ಕಡಿಮೆಯಾಗಲಿದೆ. ಅಲ್ಲದೆ ಬೆಳೆಗಳ ಪ್ರಮಾಣ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಯೋಜನೆಯನ್ನು ಅನುಷ್ಠಾನಗೊಳಿಸಿ 5 ವರ್ಷಗಳ ಕಾಲ ನಿರ್ವಹಣೆ ಮಾಡಿ ನಂತರ ಯೋಜನೆಯನ್ನು ರೈತರ ಕೈಗೆ ಎಮ್ಇಐಎಲ್ ಹಸ್ತಾಂತರಿಸಲಿದೆ. ಈ ಯೋಜನೆಯ ಪ್ರಯೋಜನ ಪಡೆಯುವ ರೈತರು ಪ್ರತೀ ವರ್ಷ ಎಕರೆಗೆ 1300 ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಒಂದೊಮ್ಮೆ 5 ವರ್ಷದ ನಂತರ ಅಗತ್ಯ ಬಿದ್ದಲ್ಲಿ ಈ ಹಣವನ್ನು ಉಪಯೋಗಿಸಲಾಗುತ್ತದೆ.