ಸಿದ್ಧಿವಿನಾಯಕನ ಲಡ್ಡುಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ವಿಶಾಖಪಟ್ಟಣ, ಸೆ. 9: ಜನರ ನಂಬಿಕೆಯೋ, ಹೊಸ ಟ್ರೆಂಡೋ, ಒಟ್ಟಿನಲ್ಲಿ ಗಣೇಶನಿಗೆ ಅರ್ಪಿಸಿದ ವಸ್ತುಗಳು ಬಾರಿ ಬೆಲೆಗೆ ಹರಾಜಾಗುತ್ತಿವೆ. ಗಣೇಶನಿಗೆ ಅರ್ಪಿಸಿದ್ದ ಲಡ್ಡು, ಮೋದಕ, ಹೂವಿನ ಹಾರ ಎಲ್ಲದಕ್ಕೂ ಆಂಧ್ರ ಪ್ರದೇಶದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು.
ಇದಕ್ಕೆ ಸಾಕ್ಷಿ ಎಂಬಂತೆ ವಿಶಾಖಪಟ್ಟಣ ಸಮೀಪದ ಮಾಧವಧಾರಾದ ವಿನಾಯಕನಿಗೆ ಅರ್ಪಿಸಿದ್ದ ಲಡ್ಡು ಬರೋಬ್ಬರಿ 12.75 ಲಕ್ಷ ರೂ.ಗೆ ಹರಾಜಾಗಿದೆ!
ರಿಯಲ್ ಎಸ್ಟೇಟ್ ಉದ್ಯಮಿಗಳಾದ ಎ.ರಾಮಾದೇವಿ, ಡಿ.ಭಾಸ್ಕರ್ ರೆಡ್ಡಿ ಮತ್ತು ಕೃಷ್ಣ ಭಾರ್ಗವ್ 27 ಕೆಜಿ ತೂಕದ ಲಡ್ಡನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.(ಗಣೇಶನ ಬಗ್ಗೆ ವರ್ಮಾ ಅಣುಕು ಟ್ವೀಟ್ ರಾದ್ಧಾಂತ)
ಇದು ಒಲ್ಲಿಯವರೆಗಿನ ಹರಾಜಿನಲ್ಲಿ ದಾಖಲೆಯಾಗಿದೆ ಎಂದೇ ಹೇಳಲಾಗಿದೆ. ಆಂಧ್ರ ಪ್ರದೇಶದ ಮಟ್ಟಿಗೆ ಇದೊಂದು ಸಾಧನೆಯೆ ಸರಿ ಎಂದು ಹರಾಜಿನಲ್ಲಿ ಲಡ್ಡು ಪಡೆದ ಭಕ್ತರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
9.5 ಲಕ್ಷ ರೂ. ನೀಡಿದ್ದ ರೈತ
ಇನ್ನೊಂದೆಡೆ ಹರಾಜಿನಲ್ಲಿ ಬಿಡ್ಡರ್ಗಳನ್ನು ಹಿಂದಿಕ್ಕಿದ ಆಂಧ್ರದ ಬಲಾಪುರ್ದ ರೈತ ಎಸ್.ಜೈಹಿಂದ್ ರೆಡ್ಡಿ 9.5 ಲಕ್ಷ ನೀಡಿ ಲಡ್ಡು ಪಡೆದುಕೊಂಡಿದ್ದಾರೆ.
ಹಂಚಿ ತಿನ್ನುತ್ತೇನೆ
ಅನೇಕ ದಿನಗಳ ಕನಸು ಇಂದು ನನಸಾಗಿದೆ. ಹರಾಜಿನಲ್ಲಿ ಪಡೆದ 21 ಕೆಜಿ ಗಾತ್ರದ ಲಡ್ಡನ್ನು ಅಕ್ಕ ಪಕ್ಕದ ಮನೆಯವರೊಂದಿಗೆ ಹಂಚಿ ಸಂಭ್ರಮಿಸುತ್ತೇನೆ. ಉಳಿದಿದ್ದನ್ನು ನನ್ನ ಜಮೀನಿಗೆ ಹಾಕುತ್ತೇನೆ ಎಂದು ಜೈಹಿಂದ್ ಹೇಳಿದ್ದಾರೆ.
23 ಜನ ಭಾಗವಹಿಸಿದ್ದರು
ಲಡ್ಡು ಹರಾಜಲ್ಲಿ ಒಟ್ಟು 23 ಜನ ಭಾಗವಹಿಸಿದ್ದರು. ಪ್ರತಿ ವರ್ಷ ಬಿಡ್ಡರ್ವೊಬ್ಬರು ಹರಾಜು ಗೆಲ್ಲುತ್ತಿದ್ದರು. ಆದರೆ ಈ ಬಾರಿ ರೈತ ಎಲ್ಲರಿಗಿಂತ ಹೆಚ್ಚಿನ ಮೌಲ್ಯ ಕೂಗಿದ್ದಾನೆ.
ಕುಟುಂಬದೊಂದಿಗೆ ಸಂಭ್ರಮ
ಹರಾಜಿನಲ್ಲಿ ಲಡ್ಡು ಪಡೆದ ರೈತ ಜೈಹಿಂದ್ ರೆಡ್ಡಿ ಸ್ವಗ್ರಾಮಕ್ಕೆ ಮರಳಿ ಕುಟುಂಬದವರೊಂದಿಗೆ ಸಂಭ್ರಮಿಸಿದರು.
ಜೈ ಗಣೇಶ
ಬಲಾಪುರ್ದ ಗಣೇಶ ವಿಸರ್ಜನೆ ವೇಳೆ ಪಾಲ್ಗೊಂಡಿದ್ದ ಭಕ್ತ ಸಮೂಹ. ರಾಷ್ಟ್ರ ಧ್ವಜ ಹಾರಾಟದ ಮೂಲಕ ಮೆರವಣಿಗೆಯಲ್ಲಿ ದೇಶ ಭಕ್ತಿ ಪ್ರದರ್ಶನ.
ಹಳ್ಳಿ ಅಭಿವೃದ್ಧಿಗೆ ಸಲಹೆ
ಗಣೇಶ ಉತ್ಸವ ಸಮಿತಿ ಈ ಹಣವನ್ನು ರೈತರ ಮತ್ತು ಹಳ್ಳಿಯ ಅಭಿವೃದ್ಧಿಗೆ ಬಳಸಬೇಕು ಎಂದು ಎಸ್.ಜೈಹಿಂದ್ ರೆಡ್ಡಿ ಸಲಹೆ ನೀಡಿದ್ದಾನೆ.