ರೈತರೊಂದಿಗೆ ಡಿ.3 ರಂದು ಮತ್ತೊಂದು ಸುತ್ತಿನ ಮಾತುಕತೆ: ಕೇಂದ್ರ ಕೃಷಿ ಸಚಿವ
ನವದೆಹಲಿ, ಡಿಸೆಂಬರ್ 1: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರ ಪ್ರತಿನಿಧಿಗಳೊಂದಿಗೆ ಇಂದು ನಡೆದ ಸಭೆ ಉತ್ತಮವಾಗಿದ್ದು, ಮತ್ತೊಂದು ಸುತ್ತಿನ ಮಾತುಕತೆ ಡಿಸೆಂಬರ್ 3 ರಂದು ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗಾಗಿ ರೈತರ ಚಿಕ್ಕ ಗುಂಪನ್ನು ರಚಿಸಬೇಕೆಂದು ನಾವು ಬಯಸಿದ್ದೆವು. ಆದರೆ ರೈತ ಮುಖಂಡರು ಎಲ್ಲರೂ ಕೂಡ ಪಾಲ್ಗೊಳ್ಳಬೇಕೆಂದು ಹೇಳುತ್ತಿದ್ದು, ಅವರ ನಿರ್ಧಾರ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದರು.
ರೈತರ ಜತೆ ಕೇಂದ್ರ ಸರ್ಕಾರದ ಸಭೆ ವಿಫಲ: ಗುರುವಾರ ಮತ್ತೆ ಮಾತುಕತೆ
ಕೇಂದ್ರ ಸರ್ಕಾರವು ಈ ಮೊದಲು ರೈತ ಸಂಘಟನೆಗಳಿಂದ ನಾಲ್ಕರಿಂದ ಐದು ಜನರ ಹೆಸರನ್ನು ನೀಡುವಂತೆ ಮತ್ತು ಸಮಿತಿ ರಚಿಸುವಂತೆ ಕೇಳಿಕೊಂಡಿತ್ತು. ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಕೃಷಿ ತಜ್ಞರಲ್ಲದೇ, ಸರ್ಕಾರದ ಪ್ರತಿನಿಧಿಗಳೂ ಇರುತ್ತಾರೆ ಎಂದು ಹೇಳಿದೆ.
ಮಂಗಳವಾರ ನಡೆದ ಸಭೆಯಲ್ಲಿ ರೈತ ಮುಖಂಡರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಯ ಬಗ್ಗೆ ಸರ್ಕಾರ ಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರ ಹಾಗೂ ಕೃಷಿ ಇಲಾಖೆ ನೀಡಿದ್ದು, ಪ್ರತಿಭಟನೆ ನಿಲ್ಲಿಸುವಂತೆ ಕೇಂದ್ರ ಕೃಷಿ ಸಚಿವರು ರೈತರಲ್ಲಿ ಮನವಿ ಮಾಡಿದರು.
ರೈತರ ಪ್ರತಿಭಟನೆಯನ್ನು ನಿಲ್ಲಿಸಿ, ಮಾತುಕತೆಗೆ ಬರಬೇಕೆಂದು ನಾವು ರೈತರಿಗೆ ಮನವಿ ಮಾಡುತ್ತೇವೆ. ಆದರೂ ಪ್ರತಿಭಟನೆಯನ್ನು ನಿಲ್ಲಿಸುವ ನಿರ್ಧಾರ ರೈತ ಸಂಘಟನೆಗಳು ಮತ್ತು ರೈತರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಕೇಂದ್ರ ಕೃಷಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ, ಪಂಜಾಬ್ ಮತ್ತು ಹರಿಯಾಣ ಗಡಿ ಪ್ರದೇಶಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.