ಕೃಷಿ ಕಾಯ್ದೆ: ಅಮಿತ್ ಶಾ ಭರವಸೆಗೆ ಸೊಪ್ಪು ಹಾಕದ ರೈತರು
ನವದೆಹಲಿ, ಜನವರಿ 18: ಕೃಷಿ ಕಾಯ್ದೆಗಳ ರದ್ದತಿ ವಿಚಾರವಾಗಿ ರೈತರ ಪ್ರತಿಭಟನೆ ವಿಚಾರವು ಸುಪ್ರೀಂಕೋರ್ಟ್ನಲ್ಲಿ ಇಂದು ಮತ್ತೆ ವಿಚಾರಣೆಗೆ ಬರಲಿದೆ. ಗಣರಾಜ್ಯ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ತಮ್ಮ ದೃಢ ನಿರ್ಧಾರವನ್ನು ರೈತರು ಪುನರುಚ್ಚರಿಸಿದ್ದಾರೆ. ಮಂಗಳವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಮೂರು ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಪರ್ಯಾಯ ಆಯ್ಕೆಗಳನ್ನು ಚರ್ಚಿಸುವಂತೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.
'ನಾವು 2024ರ ಮೇ ತಿಂಗಳವರೆಗೂ (ಎನ್ಡಿಎ ಸರ್ಕಾರದ ಅಧಿಕಾರ ಮುಗಿಯುವವರೆಗೂ) ಪ್ರತಿಭಟನೆ ಮುಂದುವರಿಸಲು ಸಿದ್ಧರಿದ್ದೇವೆ. ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸರ್ಕಾರ ಕಾನೂನಾತ್ಮಕ ಭರವಸೆ ನೀಡಬೇಕು ಎನ್ನುವುದು ನಮ್ಮ ಬೇಡಿಕೆ' ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ: ಅಮಿತ್ ಶಾ
ಕೃಷಿ ಕಾಯ್ದೆಗಳು ಮತ್ತು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರವಾಗಿ ಸೋಮವಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಜತೆಗೆ ಗಣರಾಜ್ಯೋತ್ಸವ ದಿನದಂದು ರೈತರು ಉದ್ದೇಶಿಸಿರುವ ಜಾಥಾಕ್ಕೆ ತಡೆ ನೀಡಬೇಕೆಂದು ಕೋರಿ ದೆಹಲಿ ಪೊಲೀಸರ ಮೂಲಕ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನೂ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
ರೈತರ ಪ್ರತಿಭಟನೆಯು ಗಣರಾಜ್ಯೋತ್ಸವ ಪಥಸಂಚಲನಕ್ಕೆ ಅಡ್ಡಿ ಮಾಡಲಿದೆ. ಇದರಿಂದ ಅನೇಕ ತೊಂದರೆಯಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ನಾವು ದೆಹಲಿಯ ಹೊರವಲಯದ ವರ್ತುಲ ರಸ್ತೆಯಲ್ಲಿ ಟ್ರ್ಯಾಕ್ಟರ್ ಪೆರೇಡ್ ನಡೆಸುತ್ತಿದ್ದೇವೆ. ಇದರಿಂದ ಪಥಸಂಚಲನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ರೈತರು ಟ್ರ್ಯಾಕ್ಟರ್ಗಳಿಗೆ ತ್ರಿವರ್ಣ ಧ್ವಜ ಕಟ್ಟಿಕೊಂಡು ಸಾಗಲಿದ್ದಾರೆ ಎಂದು ಒಕ್ಕೂಟದ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಮೋದಿ ಸರ್ಕಾರವು ರೈತರ ಸಂಪಾದನೆಯನ್ನು ವಿವಿಧ ರೀತಿಯಲ್ಲಿ ಹೆಚ್ಚಿಸುವ ಸಲುವಾಗಿಯೇ ಮೂರು ಕಾಯ್ದೆಗಳನ್ನು ರೂಪಿಸಿದೆ. ಕೇಂದ್ರ ಸರ್ಕಾರವು ರೈತರ ಹಿತಕ್ಕಾಗಿ ಬದ್ಧವಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರ್ಕಾರ ಕೃಷಿ ವಲಯದ ಬಜೆಟ್ ಹೆಚ್ಚಿಸಿದೆ ಮತ್ತು ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಹೇಳಿಕೆ ನೀಡಿದ್ದಾರೆ.