ಮೊದಲ ಬಾರಿಗೆ ಬೆಂಗಳೂರಲ್ಲಿ ಎಲ್ಲಾ ರಾಜ್ಯದ ಕೃಷಿ ಸಚಿವರ ಸಭೆ
ಬೆಂಗಳೂರು ಜೂ.29: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ದೇಶದ ಎಲ್ಲ ರಾಜ್ಯಗಳ ಕೃಷಿ ಸಚಿವರ ಸಭೆಯನ್ನು ಆಯೋಜಿಸಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ವತಿಯಿಂದ ಜುಲೈ 14 ಮತ್ತು 15ರಂದು ಬೆಂಗಳೂರಿನಲ್ಲಿ ದೇಶದ ಎಲ್ಲಾ ರಾಜ್ಯಗಳ ಕೃಷಿ ಸಚಿವರ ಸಭೆ ನಡೆಯಲಿದೆ.
ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಭೆಯ ನೇತೃತ್ವ ವಹಿಸಲಿದ್ದಾರೆ. ಈ ಕುರಿತು ಕೇಂದ್ರದಿಂದ ಈಗಾಗಲೇ ರಾಜ್ಯಕ್ಕೆ ಮಾಹಿತಿ ನೀಡಲಾಗಿದೆ.
ಈ ಸಭೆಯಲ್ಲಿ ಕೃಷಿ ಸಚಿವರು ದೇಶದ ಕೃಷಿ ಕುರಿತು ಎರಡು ದಿನ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ದೇಶದ ರೈತರ ಆದಾಯ ಹೆಚ್ಚಳ, ಕೃಷಿ ಉತ್ಪಾದನೆ ವೆಚ್ಚ ತಗ್ಗಿಸುವುದು, ಕೃಷಿ ಸಂಬಂಧಿ ಉಪಕ್ರಮಗಳ ವಿನಿಮಯ ವಿಷಯವಾಗಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಎಲ್ಲರ ಚಿತ್ತ ಈ ಕೃಷಿ ಸಭೆಯ ಮೇಲೆ ನಟ್ಟಿದೆ ಎನ್ನಲಾಗಿದೆ.
ಮೊದಲ ಬಾರಿಗೆ ಕರ್ನಾಟಕದಲ್ಲಿ ಸಭೆ
ಈ ಸಭೆ ಆಯೋಜನೆ ಕುರಿತು ರಾಜ್ಯದ ಕೃಷಿ ಸಚಿವ ಬಿ. ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದು, "ಸಭೆಯನ್ನು ಮೊದಲು ಕರ್ನಾಟಕ ಇಲ್ಲವೇ ರಾಜಸ್ಥಾನ ರಾಜ್ಯದಲ್ಲಿ ನಡೆಸುವ ಕುರಿತು ಚರ್ಚೆಗಳಾಗಿದ್ದವು. ಕೊನೆಗೆ ಕೇಂದ್ರ ಕೃಷಿ ಸಚಿವಾಲಯ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿತು. ಈ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿ ಬಗೆಗಿನ ಬೃಹತ್ ಸಭೆಗೆ ರಾಜಧಾನಿ ಸಾಕ್ಷಿಯಾಗಲಿದೆ" ಎಂದರು.
ರಾಜ್ಯ ಸರ್ಕಾರದಿಂದ ಕೃಷಿ,ಕೃಷಿಕರಿಗೆ ಆದ್ಯತೆ
"ರಾಜ್ಯ ಸರ್ಕಾರ ಈಗಾಗಲೇ ರೈತರ ಮಕ್ಕಳ ಶಿಕ್ಷಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳು ಜಾರಿಗೊಳಿಸುವ ಮೂಲಕ ಕೃಷಿಕರಿಗೂ ಆದ್ಯತೆ ನೀಡಿದೆ. ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವತ್ತಲೂ ರಾಜ್ಯ ದೃಷ್ಟಿ ಹರಿಸಿದೆ. ರಾಜ್ಯದಲ್ಲಿ ಈಗಾಗಲೇ ರೈತರ ಆದಾಯ ಹೆಚ್ಚಿಸುವ ಸಂಬಂಧ ನಿರ್ದೇಶನಾಲಯ ಸ್ಥಾಪಿಸಲಾಗಿದೆ" ಎಂದು ಸಚಿವರು ತಿಳಿಸಿದರು.
ನೆರೆ ರಾಜ್ಯಗಳ ಕೃಷಿ ಯೋಜನೆ ಬಗ್ಗೆ ಸಮಾಲೋಚನೆ
"ಇದೇ ರೀತಿ ಇತರ ರಾಜ್ಯಗಳಲ್ಲೂ ಕೃಷಿ ಆದ್ಯತೆ ನೀಡಿ ಹೊಸ ಉಪಕ್ರಮಗಳನ್ನು, ಕೃಷಿ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿರುತ್ತವೆ. ಕೃಷಿ ಸುಧಾರಣೆಗೆ ಹೊಸ ಕ್ರಮಗಳು ಕೈಗೊಂಡಿರುತ್ತಾರೆ. ನೆರೆಯ ರಾಜ್ಯಗಳ ಉತ್ತಮ ಕೃಷಿ ಕಾರ್ಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಪಾಲ್ಗೊಳ್ಳುವ ಎಲ್ಲ ರಾಜ್ಯಗಳ ಸಚಿವರು ವಿಚಾರ ವಿನಿಮಯ ಮಾಡಿಕೊಳ್ಳಲು ಇದೊಂದು ಉತ್ತಮೆ ವೇದಿಕೆ ಆಗಲಿದೆ" ಎಂದು ಬಿ. ಸಿ. ಪಾಟೀಲ್ ಹೇಳಿದರು.
ಕೃಷಿಗೆ ಅತ್ಯಧಿಕ ಬಜೆಟ್ ಘೋಷಿಸಿದ ಕೇಂದ್ರ
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಳೆದ ಎಂಟು ಹತ್ತು ವರ್ಷಗಳಲ್ಲಿ ಕೃಷಿಗೆ ನೀಡುವ ಬಜೆಟ್ ಗಾತ್ರ ಸುಮಾರು 5-6 ಪಟ್ಟು ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಕೃಷಿಗೆ ಹಂಚುವ ಅನುದಾನ ದ್ವಿಗುಣಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಮತ್ತು ರೈತರಿಗೆ ಸಂಬಂಧಿಸಿದ ವಿವಿಧ ಕೇಂದ್ರ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲಿಸಲಿದ್ದಾರೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಇದಾದ ಬಳಿಕ ಇದೀಗ ಕೇಂದ್ರ ಕೇಂದ್ರ ಕೃಷಿ ಸಚಿವರು ದೇಶದ ಎಲ್ಲ ರಾಜ್ಯ ಸಚಿವರ ಜತೆ ಸಮಾಲೋಚನೆ ನಡೆಸಲಿದ್ದಾರೆ.
Recommended Video