ಜನೆವರಿ 2021: ರೈತ ಚಳವಳಿಯ ಮಾಸ
ಜನೆವರಿ 2: ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜನವರಿ 26 ರಂದು ದಿಲ್ಲಿಯೊಳಗೆ ಟ್ರಾಕ್ಟರ್, ಟ್ರಾಲಿ ಮತ್ತು ಕೃಷಿ ಉಪಕರಣಗಳ ಜೊತೆ 'ರೈತರ ಗಣರಾಜ್ಯದ ಪೆರೇಡ್' ಮಾಡುವುದಾಗಿ ಇಂದು ದಿಲ್ಲಿಯಲ್ಲಿ ಚಳವಳಿ ನಿರತ ರೈತರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಪ್ರಕಟಣೆಯನ್ನು ಬಲಬೀರ್ ಸಿಂಗ್ ರಾಜೇವಾಲ್, ದರ್ಶನಪಾಲ್, ಗುರ್ನಾಮ್ ಸಿಂಗ್ ಚದೂನಿ, ಅಶೋಕ್ ದವಾಲೆ ಇನ್ನಿತರರು ಹನ್ಮಾನ್ ಮೊಲ್ಲಾದಲ್ಲಿ ಮಾಡಿದ್ದಾರೆ. ಜೊತೆಗೆ ಜಗಜೀತ್ ಸಿಂಗ್ ದಲ್ಲೇವಾಲ್, ಅಭಿಮನ್ಯು ಕೋಹರ್ ಮತ್ತು ಯೋಗೇಂದ್ರ ಯಾದವ್ ಇನ್ನೊಂದು ಸ್ಥಳದಲ್ಲಿ ಇದೇ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಬೇಡಿಕೆ ಈಡೇರದಿದ್ದರೆ ಗಣರಾಜ್ಯ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ
ನಮ್ಮದು ಶಾಂತಿಯುತ ಸಂಧಾನದ ಮಾರ್ಗವೇ ಆಗಿದೆ. ಆ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಸ್ಪಷ್ಟಪಡಿಸಿದ್ದೇವೆ. ನಮ್ಮ ಮುಂದಿರುವುದು ಎರಡೇ ಮಾರ್ಗ. ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ಇಲ್ಲವೇ ನಮ್ಮನ್ನು ಇಲ್ಲಿಂದ ಎಬ್ಬಿಸಲು ಬಲಪ್ರಯೋಗ ಮಾಡಬೇಕು.
ದಿಲ್ಲಿಯ ಹವಾಮಾನ ವೈಪರೀತ್ಯ
ಈಗ ನಮ್ಮೆದುರಿಗಿರುವುದು ಒಂದು ಹೆಜ್ಜೆ ಮುಂದಿಡುವ ಮಾರ್ಗ. ಹಾಗಾಗಿ ನಾವು ಜನತಂತ್ರದ ಹಬ್ಬವಾದ ಗಣರಾಜ್ಯ ದಿನವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಳೆದೆರಡು ತಿಂಗಳಿನಿಂದ ನಾವು ದಿಲ್ಲಿಯ ಹವಾಮಾನ ವೈಪರೀತ್ಯದ ನಡುವೆಯೇ ಚಳವಳಿಯಲ್ಲಿ ನಿರತರಾಗಿದ್ದೇವೆ.
ಇಂದಿನಿಂದ ಜನವರಿ 26 ರವರೆಗೆ ದೇಶದಲ್ಲಿ ಏನೆಲ್ಲಾ ಚಳವಳಿಗಳು ನಡೆಯಬೇಕೆಂಬ ರೋಡ್ ಮ್ಯಾಪ್ ಕೂಡಾ ಮಾಡಿದ್ದೇವೆ ಎಂದು ಹೇಳಿರುವ ರೈತ ಮುಖಂಡರು, ಜನವರಿ 6 ರಿಂದ 20 ರವರೆಗೆ "ದೇಶ್ ಜಾಗೃತಿ ಅಭಿಯಾನ್" ಹೆಸರಿನಲ್ಲಿ ಜಾಥಾಗಳು, ಸಭೆಗಳು, ಪ್ರತಿಭಟನಾ ಧರಣಿಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಕಿಸಾನ್ ಸಂಕಲ್ಪ ದಿವಸ್
ಸಂಕ್ರಾಂತಿ ಹಬ್ಬದ ದಿನವನ್ನು "ಕಿಸಾನ್ ಸಂಕಲ್ಪ ದಿವಸ್" ಎಂದು ಆಚರಿಸುವುದಾಗಿಯೂ ತೀರ್ಮಾನಿಸಲಾಗಿದೆ. ಅಂದು ಈ ಮೂರೂ ಕೃಷಿ ಕಾಯಿದೆಗಳನ್ನು ಸುಡುವುದರ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಲಾಗುವುದು. ಜನವರಿ 18ನೇ ತಾರೀಖಿನಂದು ಕೃಷಿಯಲ್ಲಿ ಮಹಿಳೆಯರ ಮಹತ್ವ ಹಾಗೂ ಪಾತ್ರವನ್ನು ಬಿಂಬಿಸಲು "ಮಹಿಳಾ ಕಿಸಾನ್ ದಿವಸ್" ಎಂದು ಆಚರಿಸಲು ತೀರ್ಮಾನಿಸಲಾಗಿದೆ.
ಜನವರಿ 23 ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ. ಅಂದು ಎಲ್ಲಾ ರಾಜ್ಯಗಳ ರಾಜ್ಯಪಾಲರ ಕಚೇರಿಗಳ ಮುಂದೆ "ಆಜಾದ್ ಹಿಂದ್ ಕಿಸಾನ್ ದಿವಸ್" ಹೆಸರಿನಲ್ಲಿ ಪ್ರತಿಭಟನಾ ಧರಣಿ ಮಾಡಲು ತೀರ್ಮಾನಿಸಲಾಗಿದೆ.
ರೈತರು ದಿಲ್ಲಿ ಪ್ರವೇಶಿಸುವುದು ಖಡಾಖಂಡಿತ
ಸಿಂಗು ಬಾರ್ಡರ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಿರುವಂತೆ ಜನವರಿ 4 ರಂದು ಸರ್ಕಾರದೊಂದಿಗೆ ಮಾತುಕತೆ ವಿಫಲವಾದರೆ 6ನೇ ತಾರೀಖು ಚಳವಳಿ ನಿರತ ರೈತರು ದಿಲ್ಲಿ ಪ್ರವೇಶಿಸುವುದು ಖಡಾಖಂಡಿತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಪರ್ಯಾಯ ದಾರಿ ನಮ್ಮ ಮುಂದಿಲ್ಲ
ಮೂರೂ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂಬ ರೈತರ ಒತ್ತಾಯಕ್ಕೆ ಸರ್ಕಾರ ಅದನ್ನು ಹೊರತುಪಡಿಸಿ ಬೇರೇನಾದರೂ ಪರ್ಯಾಯ ಉಪಾಯಗಳನ್ನು ತನ್ನಿ ಎಂದು ಹೇಳಿದ್ದಕ್ಕೆ, ಪ್ರತಿಯಾಗಿ ಕಾಯಿದೆಗಳನ್ನು ಹಿಂಪಡೆಯುವುದನ್ನು ಬಿಟ್ಟು ಬೇರಾವ ಮಾರ್ಗವೂ ತಮ್ಮ ಮುಂದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಜನವರಿ 26 ರೊಳಗೆ ನಮ್ಮ ಕೋರಿಕೆಗಳನ್ನು ಈಡೇರಿಸದೆ ಇದ್ದಲ್ಲಿ, ದಿಲ್ಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಮಾಡುವುದನ್ನು ಬಿಟ್ಟು, ಪರ್ಯಾಯ ದಾರಿ ನಮ್ಮ ಮುಂದಿಲ್ಲ ಎಂದು ಚಳವಳಿ ನಿರತ ರೈತರು ಮತ್ತೊಮ್ಮೆ ಸ್ಪಷ್ಟ ನುಡಿಗಳಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ.