ಗೊಣ್ಣೆ ಹುಳುಗಳ ನಿರ್ವಹಣೆಗೆ ಕೃಷಿ ಇಲಾಖೆಯ ಸಲಹೆಗಳು...
ರೈತರಿಗೆ ಕಾಲಕಾಲಕ್ಕೆ ಅಗತ್ಯವಾಗಿ ಬೇಕಾದ ಬೆಳೆ ನಿರ್ವಹಣಾ ಮಾಹಿತಿಗಳನ್ನು ರಾಜ್ಯ ಕೃಷಿ ಇಲಾಖೆ ನೀಡುತ್ತಾ ಬರುತ್ತಿರುವುದು ವಾಡಿಕೆ. ಅಂತೆಯೇ ಇದೀಗ ಕರ್ನಾಟಕ ರಾಜ್ಯ ಕೃಷಿ ಇಲಾಖೆ ಗೊಣ್ಣೆ ಹುಳುವಿನ ನಿರ್ವಹಣೆ ಕುರಿತಾಗಿ ಮಾಹಿತಿ ನೀಡಿದೆ. ಇಲ್ಲಿ ರಾಸಾಯನಿಕ ಕೀಟನಾಶಗಳ ಉಲ್ಲೇಖವಷ್ಟೇ ಇಲಾಖೆ ನೀಡಿದೆ.
Recommended Video
ಹಾಗೆಂದ ಮಾತ್ರಕ್ಕೆ ಜೈವಿಕ ನಿಯಂತ್ರಣ ಕ್ರಮಗಳು ಇಲ್ಲವೆಂದಲ್ಲ. ಇವುಗಳ ನಿರ್ವಹಣೆಗೆ ಎಂಟಮೋ ಪ್ಯಾಥೋಜೆನಿಕ್ ನೆಮಟೋಡ್ಸ್ (ಇ.ಪಿ.ಎನ್) ಉಳ್ಳ ಜೈವಿಕ ಉತ್ಪನ್ನವನ್ನು ಬಳಸಬಹುದಾಗಿದೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೀಟಶಾಸ್ತ್ರಜ್ಞರನ್ನು ಸಂಪರ್ಕಿಸಬಹುದು). ಗೊಣ್ಣೆ ಹುಳುವಿನ ನಿರ್ವಹಣೆ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗೊಣ್ಣೆ ಹುಳುಗಳ ಕುರಿತು...
ಮೊದಲನೇ ಹಂತದ ಮರಿ ಹುಳುಗಳು ಸಾವಯವ ವಸ್ತುವನ್ನು ತಿಂದು ಬದುಕುತ್ತವೆ. ಎರಡು ಹಾಗೂ ಮೂರನೆಯ ಹಂತದ ಮರಿ ಹುಳುಗಳು ಸುಮಾರು 3-4 ತಿಂಗಳುಗಳ ಕಾಲ ವಿವಿಧ ಬೆಳೆಗಳ ಬೇರುಗಳನ್ನು ತಿನ್ನುತ್ತವೆ. ಇದರಿಂದ ಬೆಳೆ ಹಾನಿಯಾಗುತ್ತದೆ. ಸಾಮಾನ್ಯವಾಗಿ ಜುಲೈ ನಿಂದ ಅಕ್ಟೋಬರ್ ತಿಂಗಳವರೆಗೂ ಗೊಣ್ಣೆ ಹುಳುವಿನ ಬಾಧೆ ಹೆಚ್ಚು. ಕೆಲವೊಮ್ಮೆ ಜನವರಿ ತಿಂಗಳಿನವರೆಗೂ ಇರುತ್ತದೆ. ನಂತರ ಕೋಶಾವಸ್ಥೆ ತಲುಪುತ್ತದೆ. ಕೋಶಾವಸ್ಥೆಯಲ್ಲಿ 10-12 ದಿನಗಳಿದ್ದು, ನಂತರ ದುಂಬಿಯಾಗುತ್ತದೆ. ಮುಂಗಾರು ಹಂಗಾಮಿನ ಮೊದಲ ಮಳೆ ಬೀಳುವವರೆಗೂ ದುಂಬಿ ಹೊರಗೆ ಬರದೆ ಮಣ್ಣಿನಲ್ಲೇ ಇರುತ್ತದೆ.
ರೈತರಿಗೆ ಬೆರಳ ತುದಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಮಾಹಿತಿ...
ಹುಳುಗಳ ನಿರ್ವಹಣೆ ಹೇಗೆ?
ಮುಂಗಾರು ಹಂಗಾಮಿನ ಮೊದಲು ಮಳೆ ಬಿದ್ದ ಕೂಡಲೇ ಆ ದಿನ ರಾತ್ರಿ ದುಂಬಿಗಳು ಹೊರ ಬರುತ್ತವೆ. ಆ ವೇಳೆಯಲ್ಲಿ ದುಂಬಿಗಳು ಬೇವು, ಸೀಬೆ, ಕಕ್ಕೆ ಮುಂತಾದ ಮರಗಳ ಮೇಲೆ ಕಾಣಬಹುದು. ದುಂಬಿಗಳನ್ನು ದೀಪಾಕರ್ಷಣೆ ಮೂಲಕ ನಾಶಪಡಿಸಬೇಕು. ಮುಂಗಾರು ಹಂಗಾಮಿನ ಮೊದಲ ಮಳೆ ಬಂದ ದಿನವೇ ಸಾಯಂಕಾಲ ಬೇವು, ಸೀಬೆ ಮುಂತಾದ ಗಿಡಗಳ ಟೊಂಗೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ ಬದುಗಳ ಮೇಲೆ ನೆಡುವುದರಿಂದ ದುಂಬಿಗಳು ಆಕರ್ಷಿಸಲ್ಪಟ್ಟು ಸಾಯುತ್ತವೆ.
ಹುಳು ಬಾಧಿತ ಹೊಲಗಳಲ್ಲಿ ಕೀಟನಾಶಕ ಸಿಂಪಡಣೆ
ಗೊಣ್ಣೆಹುಳು ಬಾಧಿತ ಹೊಲಗಳಲ್ಲಿ ಜೂನ್ ಜುಲೈ ತಿಂಗಳುಗಳಲ್ಲಿ ಮೆಟಾರೈಜಿಯಂ ಅನಿಸೊಪಿಯೆ ಎಂಬ ಕೀಟನಾಶಕ ಶಿಲೀಂಧ್ರವನ್ನು 4-8 ಕಿ.ಗ್ರಾಂ ಅನ್ನು ಕಳಿತ ಕೊಟ್ಟಿಗೆ ಗೊಬ್ಬರದೊಡನೆ ಸೇರಿಸಿ ಮಣ್ಣಿನಲ್ಲಿ ಬೆರೆಸಬೇಕು. ಈ ಕೆಳಗೆ ಸೂಚಿಸಿರುವ ಯಾವುದಾದರೊಂದು ರಾಸಾಯನಿಕಗಳನ್ನು ಮೊದಲ ಮಳೆಯಾದ ಕೂಡಲೇ ಕಾರ್ಬೋಫ್ಯೂರಾನ್ ಅಥವಾ ಶೇ.5ರ ಕ್ವಿನಾಲ್ ಫಾಸ್ ಹರಳು ಅಥವಾ 25 ಕಿ.ಗ್ರಾಂ ಶೇ. 10ರ ಫೋರೇಟ್ ಅಥವಾ ಶೇ.3ರ ಕಾರ್ಬೋಫ್ಯೂರಾನ್ ಅಥವಾ ಶೇ.5ರ ಕ್ವಿನಾಲ್ ಫಾಸ್ ಹರಳು ಅಥವಾ 25 ಕಿ.ಗ್ರಾಂ ಶೇ.4 ಕಾರ್ಬಾರಿಲ್ ಪುಡಿಯನ್ನು ಮಣ್ಣಿನಲ್ಲಿ ಸೇರಿಸಬೇಕು. ಬೆಳೆ ಇರುವ ಪ್ರದೇಶದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ ಕ್ಲೋರ್ ಪೈರಿಪಾಸ್ 20 ಇಸಿಯನ್ನು ಸೇರಿಸಿ, ಹೆಕ್ಟೇರಿಗೆ 500 ಲೀಟರ್ ನಂತೆ ಮಣ್ಣಿನಲ್ಲಿ ಇಂಗಿಸಬೇಕು.
ಕೀಟನಾಶಕಗಳ ನಿಷೇಧ: ಪರ-ವಿರೋಧಗಳ ಧ್ವನಿ
ಈ ಸೂಚನೆಯನ್ನು ಮುಖ್ಯವಾಗಿ ಗಮನಿಸಬೇಕು
ಪೂರ್ಣ ಬೆಳೆದ ಗೊಣ್ಣೆ ಹುಳುಗಳ ಹತೋಟಿಗೆ ಯಾವ ರಾಸಾಯನಿಕಗಳನ್ನು ಮಣ್ಣಿನಲ್ಲಿ ಸೇರಿಸಿದರೂ ಪರಿಣಾಮಕಾರಿಯಾಗುವುದಿಲ್ಲ. ಕೀಟನಾಶಕಗಳು ವಿಷಕಾರಿ ರಾಸಾಯನಿಕಗಳಾಗಿದ್ದು, ಅವು ಕೀಟ ಪೀಡೆಗಳಿಗಷ್ಟೇ ಅಲ್ಲದೇ ಇತರ ಉಪಯುಕ್ತ ಕೀಟಗಳಿಗೂ ಪಕ್ಷಿಪ್ರಾಣಿಗಳಿಗೂ, ಜಾನುವಾರುಗಳಿಗೂ ಹಾಗೂ ಮನುಷ್ಯರಿಗೂ ವಿಷಕಾರಿ. ಆದ್ದರಿಂದ ಇವುಗಳನ್ನು ಮನೆಯಲ್ಲಿ ಹಾಗೂ ಬೆಳೆಗಳ ಮೇಲೆ ಪ್ರಯೋಗಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಬೇಕು.
ಕೀಟನಾಶಕಗಳ ಸೂಕ್ತ ಸಂಗ್ರಹಣೆ
ಕೀಟನಾಶಕಗಳನ್ನು ಬೆಳಕು ಬೀಳದಿರುವ ಕಪಾಟುಗಳಲ್ಲಿ ಬೀಗ ಹಾಕಿ ಇಡಬೇಕು. ಆಹಾರ ವಸ್ತು, ಮೇವು ಮತ್ತು ಹಿಂಡಿ ಮುಂತಾದ ವಸ್ತುಗಳನ್ನು ಶೇಖರಿಸುವ ಜಾಗದಲ್ಲಿ ಮಕ್ಕಳು, ಬುದ್ಧಿಹೀನರು, ಸಾಕು ಪ್ರಾಣಿಗಳಿಗೆ ಸಿಗುವಂತಹ ಜಾಗದಲ್ಲಿ ಇಡಬಾರದು. ಕೀಟನಾಶಕಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಕೀಟನಾಶಕದ ಡಬ್ಬಿಯ ಮೇಲೆ ಕೀಟನಾಶಕದ ಹೆಸರು ಮತ್ತು ಉಪಯೋಗಿಸುವ ವಿಧಾನ ವಿವರಣೆ ಪಟ್ಟಿ ಅಂಟಿಸಿರಬೇಕು. ಔಷಧದ ಡಬ್ಬಿಗೆ ಅಂಟಿಸಿದ ಅಚ್ಚು ಮಾಡಿರುವ ನಿಯಮವನ್ನು ಚಾಚೂ ತಪ್ಪದೇ ಪಾಲಿಸಬೇಕು. ಅಪ್ಪಟ ಕೀಟನಾಶಕಗಳನ್ನು ಬೇರೆ ಪಾತ್ರೆಗೆ ವರ್ಗಾಯಿಸಬಾರದು.
ರೈತರಿಗೆ ವಿಶೇಷ ಸಲಹೆಗಳು
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಿವಿಧ ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ಈ ಯೋಜನೆಯಡಿ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕಗಳು 4 ಹಂತಗಳಲ್ಲಿವೆ. ಜಿಲ್ಲಾವಾರು, ಬೆಳೆವಾರು ಕೊನೆಯ ದಿನಾಂಕದ ವಿವರಗಳನ್ನು ತಮ್ಮ ಜಿಲ್ಲೆಗಳಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನಾಗಲೀ ಅಥವಾ ರೈತ ಸಹಾಯವಾಣಿ ಕೇಂದ್ರ 1800 425 3553 ಇಲ್ಲವೇ ಕಿಸಾನ್ ಕರೆ ಕೇಂದ್ರ 1800 180 1551ಗೆ ಉಚಿತ ಕರೆ ಮಾಡಬಹುದು.