ದೆಹಲಿ ಹಿಂಸಾಚಾರ: ಸ್ಥಳದಲ್ಲಿ ಇದ್ದಿದ್ದನ್ನು ಒಪ್ಪಿಕೊಂಡ ದೀಪ್ ಸಿಧು, ಪರಾರಿಯಾದ ವಿಡಿಯೋ ವೈರಲ್
ನವದೆಹಲಿ, ಜನವರಿ 27: ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಕೆಂಪುಕೋಟೆಯಲ್ಲಿ ಸಿಖ್ಖರ ಧಾರ್ಮಿಕ ಧ್ವಜ ಹಾರಿಸಿದ ಘಟನೆಯ ಸಂದರ್ಭದಲ್ಲಿ ತಾವು ಸ್ಥಳದಲ್ಲಿಯೇ ಇದ್ದಿದ್ದಾಗಿ ನಟ ದೀಪ್ ಸಿಧು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೆರವಣಿಗೆ ನಡೆಸುತ್ತಿದ್ದ ರೈತರು ಕೆಂಪುಕೋಟೆಯ ಕಡೆಗೆ ನುಗ್ಗುವಂತೆ ಪ್ರಚೋದಿಸಿದ್ದೇ ದೀಪ್ ಸಿಧು ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಮತ್ತು ತಮ್ಮ ಬೆಂಬಲಿಗರು ರಾಷ್ಟ್ರ ಧ್ವಜವನ್ನು ತೆರವುಗೊಳಿಸಿರಲಿಲ್ಲ. ಕೆಂಪುಕೋಟೆಯಲ್ಲಿ ಸಾಂಕೇತಿಕ ಪ್ರತಿಭಟನೆಯಾಗಿ ನಿಶಾನ್ ಸಾಹಿಬ್ಅನ್ನು ಹಾರಿಸಿದ್ದಾಗಿ ಅವರು ಹೇಳಿದ್ದಾರೆ.
ಯಾರಿದು ದೀಪ್ ಸಿಧು? ರೈತ ಹೋರಾಟದಲ್ಲಿ ಹೇಗೆ, ಏಕೆ ಭಾಗಿ?
ಮಂಗಳವಾರ ಸಂಜೆ ಫೇಸ್ಬುಕ್ ಪುಟದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಸಿಧು, ಇದು ಪೂರ್ವನಿಯೋಜಿತ ಕೃತ್ಯವಾಗಿರಲಿಲ್ಲ. ಇದಕ್ಕೆ ಯಾವುದೇ ಕೋಮು ಬಣ್ಣ ಅಥವಾ ಮೂಲಭೂತವಾದಿಗಳ ಕೃತ್ಯ ಎಂಬ ಹಣೆಪಟ್ಟಿ ನೀಡಬಾರದು ಎಂದಿದ್ದಾರೆ. ಮುಂದೆ ಓದಿ.
ಸಾಂಕೇತಿಕವಾಗಿ ಧ್ವಜ ಹಾರಾಟ
'ನೂತನ ಕೃಷಿ ಕಾಯ್ದೆಗಳ ವಿರುದ್ಧದ ನಮ್ಮ ಪ್ರತಿಭಟನೆಯನ್ನು ದಾಖಲಿಸಲು ಸಾಂಕೇತಿಕವಾಗಿ ನಾವು ನಿಶಾನ್ ಸಾಹಿಬ್ ಮತ್ತು ರೈತ ಧ್ವಜವನ್ನು ಹಾರಿಸಿದ್ದೆವು. ಅಲ್ಲದೆ ಕಿಸಾನ್ ಮಜ್ದೂರ್ ಏಕ್ತಾ ಎಂಬ ಘೋಷಣೆಗಳನ್ನು ಸಹ ಕೂಗಿದ್ದೆವು' ಎಂದು ತಿಳಿಸಿದ್ದಾರೆ.
|
ರಾಷ್ಟ್ರಧ್ವಜ ತೆರವುಗೊಳಿಸಿಲ್ಲ
ಈ ಧ್ವಜವು ದೇಶದ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ವರದಿಯಾಗಿರುವಂತೆ ಕೆಂಪುಕೋಟೆಯಿಂದ ರಾಷ್ಟ್ರಧ್ವಜವನ್ನು ತೆರುವುಗೊಳಿಸಿರಲಿಲ್ಲ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದಿದ್ದಾರೆ. ಈ ಮೂಲಕ ತಾವು ರೈತರ ಪ್ರತಿಭಟನೆಯ ಪರವಾಗಿ ಇರುವುದಾಗಿ ಸಿಧು ಹೇಳಿಕೊಂಡಿದ್ದಾರೆ.
ರೈತರ ಪ್ರತಿಭಟನೆ ವೇಳೆ ಹಿಂಸಾಚಾರ: ಪೊಲೀಸರು ನೀಡಿದ ಹೇಳಿಕೆಯಲ್ಲೇನಿದೆ?
|
ಬೈಕ್ನಲ್ಲಿ ಪರಾರಿಯಾದ ಸಿಧು
ಪ್ರತಿಭಟನಾ ಸ್ಥಳದಲ್ಲಿದ್ದ ಸಿಧುವನ್ನು ಗುರುತಿಸಿದ್ದ ರೈತರು ಅವರನ್ನು ಪ್ರಶ್ನಿಸಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ಸಿಧು, ತಮಗಾಗಿ ನಿಂತಿದ್ದ ಬೈಕ್ ಒಂದನ್ನು ಕಸಿದುಕೊಂಡು ಅದರಲ್ಲಿ ಪರಾರಿಯಾಗಿದ್ದರು. ರೈತರು ಅವರನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಅದಕ್ಕೆ ಪೂರಕವಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಿಜೆಪಿ ಜತೆಗೆ ಒಡನಾಟ
ದೀಪ್ ಸಿಧು ಅವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಆಪ್ತರಾಗಿದ್ದು, ಬಿಜೆಪಿ ಪರ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಪ್ರಧಾನಿ ಮೋದಿ, ಅಮಿತ್ ಶಾ ಅವರೊಂದಿಗೂ ದೀಪ್ ಸಿಧು ಇರುವ ಫೋಟೊಗಳು ವೈರಲ್ ಆಗಿವೆ. ಬಿಜೆಪಿಯ ಕುಮ್ಮಕ್ಕಿನಿಂದಲೇ ದೀಪ್ ಸಿಧು ಉದ್ದೇಶಪೂರ್ವಕವಾಗಿ ಕಿಚ್ಚು ಹೊತ್ತಿಸಿ ಗಲಭೆ ಜೋರಾಗುವಂತೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.