ರೈತರೊಂದಿಗೆ ಭಾವನಾತ್ಮಕ ಸಂಬಂಧದ ಜೊತೆಗೆ ರಕ್ತ ಸಂಬಂಧವಿದೆ: ದರ್ಶನ್
ಬೆಂಗಳೂರು, ಮಾರ್ಚ್ 5: ನನಗೆ ರೈತರೊಂದಿಗೆ ಭಾವನಾತ್ಮಕ ಸಂಬಂಧದ ಜೊತೆಗೆ ರಕ್ತ ಸಂಬಂಧವೂ ಇದೆ ಎಂದು ಚಿತ್ರನಟ ದರ್ಶನ್ ಹೇಳಿದರು. ಶುಕ್ರವಾರ ವಿಕಾಸಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸನ್ಮಾನ ಮಾಡುವ ಮೂಲಕ ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅವರನ್ನು ಅಧಿಕೃತವಾಗಿ ಶುಕ್ರವಾರ ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಚಿತ್ರನಟ ದರ್ಶನ್, "ರೈತರದ್ದು ನಮ್ಮದು ಭಾವನಾತ್ಮಕ ಸಂಬಂಧ ಎಂದು ಹೇಳುತ್ತಾರೆ. ಆದರೆ ಅದು ಕೇವಲ ಭಾವನಾತ್ಮಕವಲ್ಲ, ರಕ್ತ ಸಂಬಂಧ ಆಗಿದೆ. ಅವರು ಆಹಾರ ನೀಡಿದ್ದರಿಂದಲೇ ನಮ್ಮ ಮೈಯ್ಯಲ್ಲಿ ರಕ್ತ. ಇಲ್ಲವಾದರೆ ಇರುವುದಿಲ್ಲ" ಎಂದರು.
ಎಸ್.ಎಸ್ ಮಲ್ಲಿಕಾರ್ಜುನ ಅವರಿಗೆ ನಟ ದರ್ಶನ್ ನೀಡಿದ ಉಡುಗೊರೆ ಏನು?
"ರೈತರಿಗೆ ಏನೇನು ಒಳ್ಳೆಯದು ಮಾಡಬಹುದೋ ಅದೆಲ್ಲವನ್ನೂ ಮಾಡುತ್ತೇನೆ. ನಾವು ದೊಡ್ಡದೇನು ಮಾಡುತ್ತಿಲ್ಲ, ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಾಹೀರಾತಿನ ಮೂಲಕ ಹೇಳುತ್ತೇನೆ ಅಷ್ಟೇ" ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, "ನಟ ದರ್ಶನ್ ಯಾವುದೇ ಪ್ರತಿಫಲ ಇಲ್ಲದೆ ಕೃಷಿ ಇಲಾಖೆ ರಾಯಭಾರಿ ಆಗಿದ್ದಾರೆ. ಅದಕ್ಕೆ ಸಮಸ್ತ ನಾಡಿನ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ. ದರ್ಶನ್ ಕಾರ್ಯಕ್ರಮವನ್ನು ವಿಧಾನಸೌಧದ ಹೊರಭಾಗ ಮಾಡಿದ್ದರೆ 50 ಸಾವಿರಕ್ಕೂ ಅಧಿಕ ಜನ ಸೇರುತ್ತಿದ್ದರು. ಅವರ ಅಭಿಮಾನಿ ಬಳಗ ದೊಡ್ಡದಿದೆ. ಇದರಿಂದ ಕೃಷಿ ಇಲಾಖೆಗೂ ಬಲ ಬಂದಂತಾಗಿದೆ" ಎಂದು ತಿಳಿಸಿದರು.
Recommended Video
"ಮಾ.11ಕ್ಕೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆ ಆಗುತ್ತದೆ. ನೀವೂ ನೋಡಿ ನಾನು ನೋಡುತ್ತೇನೆ" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.