ಬಾಗಲಕೋಟೆಯಲ್ಲಿ ಮಳೆಗೆ ಅಂದಾಜು 3 ಕೋಟಿ ರೂ ಈರುಳ್ಳಿ ಬೆಳೆ ನಾಶ
ಬಾಗಲಕೋಟೆ, ಅಕ್ಟೋಬರ್ 23: ಆಗಸ್ಟ್ ತಿಂಗಳಿನಿಂದಲೂ ಮಳೆ, ಪ್ರವಾಹದಿಂದ ತತ್ತರಿಸಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಇದುವರೆಗೂ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ನಾಶವಾಗಿರುವುದಾಗಿ ತಿಳಿದುಬಂದಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಪ್ರವಾಹ ಏರ್ಪಟ್ಟು, ಸಾಕಷ್ಟು ಹಾನಿ ಸಂಭವಿಸಿದೆ. ಬಾಗಲಕೋಟೆಯಲ್ಲೂ ಮಳೆಯಾಗುತ್ತಿದ್ದು, ಬೆಳೆಹಾನಿ ಸಂಭವಿಸಿದೆ. ನಿರಂತರ ಮಳೆಯಿಂದಾಗಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಸುಮಾರು 3 ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಮಳೆಯಿಂದ ಸುಮಾರು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಕೊಳೆತುಹೋಗಿದೆ. ಇದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಆಗಿದೆ. ಈ ನಡುವೆ ನಷ್ಟಕ್ಕೆ ಕಂಗಾಲಾಗಿ ಬಾಗಲಕೋಟೆ ನಗರದ ಸಮೀಪ ಯಳ್ಳಿಗುತ್ತಿ ಎಂಬಲ್ಲಿ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಹಾಯಿಸಿ, ಅಲ್ಲಿಯೇ ಗೊಬ್ಬರಕ್ಕೆ ಬಿಟ್ಟಿದ್ದಾರೆ.
ಭಾರಿ ಮಳೆಯಿಂದಾಗಿ ಬೆಳೆ ಹಾನಿ; ಈರುಳ್ಳಿ ಬೆಲೆ ಗಗನಕ್ಕೆ
ತೋಟಗಾರಿಕೆ ಇಲಾಖೆಯ ಪ್ರಕಾರ ಒಂದು ಹೆಕ್ಟೇರ್ಗೆ 80 ಸಾವಿರ ರೂ. ವೆಚ್ಚ ಮಾಡಿ ಈರುಳ್ಳಿ ಬೆಳೆಯುತ್ತಾರೆ. ಇಲ್ಲಿನ ರೈತರು ವೆಚ್ಚ ಮಾಡಿದ ಹಣವೇ ಅಂದಾಜು 3 ಕೋಟಿ ರೂ. ಆಗಲಿದೆ. ಮಳೆ ಈ ಪ್ರಮಾಣದಲ್ಲಿ ಆಗದಿದ್ದಿದ್ದರೆ ಈ ಬಾರಿ ಒಳ್ಳೆಯ ಇಳುವರಿ ದೊರಕುತ್ತಿತ್ತು. ಆದರೆ ರೈತರ ಲೆಕ್ಕಾಚಾರವೇ ತಲೆಕೆಳಗಾಗಿದೆ. ಈ ನಡುವೆ ಈರುಳ್ಳಿ ಬೆಲೆಯೂ ಗಗನಕ್ಕೇರಿದೆ.