ತನ್ನ ಸಾಧಕ ಪುತ್ರನನ್ನು ನೋಡಲು ಆ ತಂದೆ ಬದುಕಿರಲಿಲ್ಲ!
ತಂದೆಯ ಆಸೆ ಈಡೇರಿಸುವುದಕ್ಕಾಗಿ 11 ಚಿನ್ನದ ಪದಕ ಗೆದ್ದ ಮಗ. ಅದನ್ನು ಕಣ್ತುಂಬಿಸಿಕೊಳ್ಳುವ ಮೊದಲೇ ಮರಣ ಹೊಂದಿದ ತಂದೆ! ತಂದೆ-ಮಗನ ಅವಿನಾಭಾವ ಬಾಂಧವ್ಯದ ಈ ಕತೆ ಮನಸ್ಸಿನ ಕದತಟ್ಟುವುದಂತೂ ಸುಳ್ಳಲ್ಲ.
ಬೆಂಗಳೂರು, ಏಪ್ರಿಲ್ 25: ಮಗ ಕೃಷಿ ಪದವಿ ಪಡೆಯಬೇಕು ಅನ್ನೋದು ಅಪ್ಪನ ಕನಸು. ಅಷ್ಟೇ ಅಲ್ಲ, ತನ್ನ ಅಪೂರ್ಣ ಕನಸು, ಮಗನ ಮೂಲಕ ಸಾಕಾರವಾಗಬೇಕು ಅನ್ನೋ ಇಂಗಿತ ಅಪ್ಪನದು. ಅಪ್ಪನ ಆಸೆಯನ್ನು ಈಡೇರಿಸೋದೇ ಬದುಕಿನ ಗುರಿ ಎಂಬ ಭಾವನೆ ಮಗನದು.
ಅಪ್ಪನ ಆಸೆಯಂತೆ ಕೃಷಿ ಪದವಿಯನ್ನು 11 ಬಂಗಾರದ ಪದಕದೊಂದಿಗೆ ಪಡೆದ ಮಗನ ಮುಖದಲ್ಲಿ ಕನಸು ಈಡೇರಿದ ತೃಪ್ತಿಗಿಂತ, ಅಪ್ಪನ ಗೈರಿನ ವಿಷಾದವೇ ಢಾಳಾಗಿತ್ತು! ಯಾಕಂದ್ರೆ 11 ಚಿನ್ನದ ಪದಕದ ಸರದಾರ, ತನ್ನ ಸಾಧಕ ಸುಪುತ್ರನನ್ನು ನೋಡುವುದಕ್ಕೆ ಆ ಮುಗ್ಧ ತಂದೆ ಬದುಕಿಯೇ ಇರಲಿಲ್ಲ![ಮಾಲಕಿಯ ರಕ್ಷಿಸಲು ಹೋಗಿ ಪ್ರಾಣ ನೀಗಿಕೊಂಡ ನಾಯಿ]
ಆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ 51 ನೇ ಘಟಿಕೋತ್ಸವ. ಮಂಡ್ಯದ ವಿಸಿ ಫಾರ್ಮ್ ನ ಕೃಷಿ ಕಾಲೇಜು ವಿದ್ಯಾರ್ಥಿ ರಘುವೀರ್ 11 ಚಿನ್ನದ ಪದಕದೊಂದಿಗೆ ಕೃಷಿ ಪದವಿ ಪಡೆದು ತಮ್ಮ ತಂದೆ-ತಾಯಿ, ಕುಟುಂಬ ವರ್ಗಕ್ಕೆ ಕೀರ್ತಿ ತಂದಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರಾದ ರಘುವೀರ್ ತಂದೆ ಮಾದಪ್ಪ ಅವರಿಗೆ ಮಗನನ್ನು ಕೃಷಿ ಪದವಿಧರನನ್ನಾಗಿ ಮಾಡಬೇಕೆಂಬ ಹೆಬ್ಬಯಕೆ. ಅದಕ್ಕಾಗಿ ತಂದೆ ಸಾಕಷ್ಟು ಕಷ್ಟಪಟ್ಟಿದ್ದರು. ಅಪ್ಪನ ಆಸೆ ಈಡೇರಿಸುವುದಕ್ಕಾಗಿ ರಘುವೀರ ಸಹ ನಿದ್ದೆ-ಊಟ ಕಟ್ಟಿಕೊಂಡು ಓದಿದ್ದರು. ಅವರ ಅವಿಶ್ರಾಂತ ಶ್ರಮದ ಫಲ ಎಂಬಂತೆ ಅವರೀಗ ಮೊದಲ ರ್ಯಾಂಕ್ ಪಡೆದು, ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಕೈಯಿಂದ ಬಂಗಾರದ ಪದಕವನ್ನೂ ಪಡೆದುಕೊಂಡಿದ್ದಾರೆ.[ಇದು ಫೇಸ್ ಬುಕ್ ಮಾಹಿತಿ, ತಾಯಿ-ಮಗುವಿನ ಜೀವವನ್ನು ವಾಟ್ಸ್ ಆಪ್ ಉಳಿಸಿತಾ?]
ಅಪ್ಪನ ಸಾವಿನ ದುಃಖದ ನಡುವೆಯೂ ಓದಿ, ಸಾಧನೆ ಮಾಡಿದ ರಘುವೀರ್ ಗೆ, ತಂದೆ ನನ್ನ ಹೃದಯದಲ್ಲೇ ಕುಳಿತು ನನ್ನ ಸಾಧನೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಸಮಾಧಾನವೂ ಇದೆ. ಒಟ್ಟಿನಲ್ಲಿ ತಂದೆ-ಮಗನ ಅವಿನಾಭಾವ ಬಾಂಧವ್ಯದ ಈ ಕತೆ ಮನಸ್ಸಿನ ಕದತಟ್ಟುವುದಂತೂ ಸುಳ್ಳಲ್ಲ.
ಘಟಿಕೋತ್ಸವದಲ್ಲಿ ರಘುವೀರ್ ರಂತೆಯೇ ಸಾಧನೆ ಮಾಡಿದ ಇನ್ನಷ್ಟು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 953 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.