ಚಿತ್ರದುರ್ಗದಲ್ಲಿ ಬರೋಬ್ಬರಿ 7186.30 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆ ಹಾನಿ
ಚಿತ್ರದುರ್ಗ, ಸೆಪ್ಟೆಂಬರ್ 25: ಚಿತ್ರದುರ್ಗ ಜಿಲ್ಲೆಯಲ್ಲಿ ಈ ಮುನ್ನ ನೀರಿನ ಬವಣೆಯಿಂದಾಗಿ ರೈತರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ನೀರಿಲ್ಲದೇ ಬೆಳೆ ಬೆಳೆಯಲು ಆಗದೇ ಕೈಚೆಲ್ಲಿ ಕುಳಿತಿದ್ದರು. ಆದರೆ ಈಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯು ಇಲ್ಲಿನ ಈರುಳ್ಳಿ ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡಿದೆ.
ಈ ಬಾರಿ ಅತಿವೃಷ್ಟಿಯಿಂದಾಗಿ ಚಿತ್ರದುರ್ಗದಲ್ಲಿ ಮೇಲಿಂದ ಮೇಲೆ ಈರುಳ್ಳಿ ಬೆಳೆ ನಾಶವಾಗಿದೆ. ಸುಮಾರು 7186.30 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾನಿಯಾಗಿದೆ. ಇಷ್ಟು ವರ್ಷ ಮಳೆಯಿಲ್ಲದೆ ಬರಪೀಡಿತವಾಗಿದ್ದ ಜಿಲ್ಲೆಗೆ ಈ ಬಾರಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಒಳ್ಳೆಯ ಬೆಳೆ ತೆಗೆಯುವ ನಿರೀಕ್ಷೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ನಿರೀಕ್ಷೆಯಂತೆ ಪೈರುಗಳು ಕೂಡ ಚೆನ್ನಾಗಿ ಬಂತು. ಆದರೆ ಆನಂತರ ಆಗಿದ್ದೇ ಬೇರೆ. ಮುಂದೆ ಓದಿ...
ನಷ್ಟಕ್ಕೆ ಬೇಸತ್ತು ಈರುಳ್ಳಿ ಬೆಳೆ ನಾಶಪಡಿಸುತ್ತಿರುವ ಚಿತ್ರದುರ್ಗದ ರೈತರು
ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ ಮಳೆ
ಕಳೆದ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಧಾರಾಕಾರವಾಗಿ ಸುರಿದ ಹುಬ್ಬೆ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ಕೊಳೆಯುವಂತೆ ಆಯಿತು. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಕಂಗಾಲು ಮಾಡಿತು. ಚಳ್ಳಕೆರೆ ತಾಲೂಕಿನ ಹಿರೆಮಧುರೆ ಗ್ರಾಮದ ರೈತ ಬಸವರಾಜ್ ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ನಾಶವಾದ ಹಿನ್ನೆಲೆಯಲ್ಲಿ ಬೇಸತ್ತು ಟ್ರ್ಯಾಕ್ಟರ್ ಮೂಲಕ ಈರುಳ್ಳಿ ನಾಶ ಮಾಡಿದ್ದರು.
ಚಿತ್ರದುರ್ಗದ ಎಲ್ಲೆಲ್ಲಿ ಈರುಳ್ಳಿ ನಾಶವಾಗಿತ್ತು?
ಅತಿವೃಷ್ಟಿಯಿಂದಾಗಿ, ಈ ತಿಂಗಳ ಆರಂಭದಲ್ಲಿ ಕೆಲ ಜಮೀನುಗಳಲ್ಲಿ ಈರುಳ್ಳಿ ನಾಶವಾಗಿತ್ತು. ಆ ನಂತರ ಕೆಲ ದಿನಗಳು ಬಿಸಿಲು ಕಾಣಿಸಿಕೊಂಡಿತ್ತು. ಹೀಗಾಗಿ ರೈತರು ನಿಶ್ಚಿಂತರಾದರು. ಆದರೆ ಮತ್ತೆ ಮಳೆ ಆರಂಭವಾಗಿ ಇನ್ನಷ್ಟು ಈರುಳ್ಳಿ ಬೆಳೆಗಳು ನಾಶವಾದವು. ಚಿತ್ರದುರ್ಗದ ದಂಡಿನಕುರುಬರಹಟ್ಟಿ, ಕಲ್ಲಹಳ್ಳಿ, ತೋಪುರ ಮಾಳಿಗೆ ಗ್ರಾಮ, ಹಿರಿಯೂರು ತಾಲ್ಲೂಕಿನ ಪುಟ್ಟಯ್ಯನಕಟ್ಟೆ, ಕೆ.ಆರ್. ಹಳ್ಳಿ, ಯಳಗೊಂಡನಹಳ್ಳಿ, ಕಾಟಪ್ಪನಹಟ್ಟಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಈರುಳ್ಳಿ ನಾಶವಾಗಿದೆ.
ಚಿತ್ರದುರ್ಗದಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಸಂಪೂರ್ಣ ನಾಶ; ಶಾಸಕರಿಂದ ಪರಿಶೀಲನೆ
7186.30 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾನಿ
ಚಿತ್ರದುರ್ಗ 6050 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, ಅದರಲ್ಲಿ 3280 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 10272 ಹೆಕ್ಟೇರ್ ಬಿತ್ತನೆ ಆಗಿದ್ದು, 2640 ಹೆಕ್ಟೇರ್ ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 1542 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, 1055 ಪ್ರದೇಶದಲ್ಲಿ ನಾಶವಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 1620 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಇದರಲ್ಲಿ 201 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 1306 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಂಡಿದ್ದು ಈ ತಾಲೂಕಿನಲ್ಲಿ ಯಾವುದೇ ಹಾನಿಯಾಗಿರುವ ವರದಿ ಆಗಿಲ್ಲ. ಮೊಳಕಾಲ್ಮೂರು ತಾಲೂಕಿನಲ್ಲಿ 191 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು 10.3ರಷ್ಟು ನಾಶವಾಗಿದೆ.
ಜಿಲ್ಲೆಯಲ್ಲಿ 20981 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ
ಚಿತ್ರದುರ್ಗ ಜಿಲ್ಲೆಯಲ್ಲಿ 20981 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. 7186.30ರಷ್ಟು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಮಳೆಗೆ ಮತ್ತು ರೋಗಕ್ಕೆ ತುತ್ತಾಗಿದೆ ಎಂದು ತಿಳಿದು ಬಂದಿದೆ.NDRF/SDRF ಮಾರ್ಗಸೂಚಿ ಪ್ರಕಾರ ಪರಿಹಾರಧನ ಮೊತ್ತವಾಗಿ ಚಿತ್ರದುರ್ಗಕ್ಕೆ 97015050 ರೂ ನಷ್ಟು ಬೇಕಾಗಿದೆ ಎಂದು ಚಿತ್ರದುರ್ಗ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯ ರೈತರಿಗೆ ಹುಬ್ಬೆ ಮಳೆ ಶಾಪವಾಗಿ ಪರಿಣಮಿಸುವ ಮೂಲಕ ಮತ್ತೆ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರನ್ನು ಸಾಲದ ಕೂಪಕ್ಕೆ ತಳ್ಳಿದ್ದು, ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಜಿಲ್ಲೆಯ ರೈತರು ಮನವಿ ಮಾಡಿದ್ದಾರೆ.