ಗದಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 159 ಕೋಟಿ ರೂ. ನಷ್ಟ
ಗದಗ, ಅಕ್ಟೋಬರ್ 9: ಈ ವರ್ಷ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯೂ ಸಂಭವಿಸಿದೆ. ಬೆಳೆ ಕಳೆದುಕೊಂಡಿರುವ ಹಲವು ಜಿಲ್ಲೆಗಳ ರೈತರು ಪರಿಹಾರವೂ ದೊರಕದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗದಗದಲ್ಲೂ ಈ ವರ್ಷದ ಮಳೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾದ ವರದಿಯಾಗಿದೆ.
ಕಳೆದ ಏಪ್ರಿಲ್ನಿಂದ ಆಗಸ್ಟ್ವರೆಗೆ ಮಳೆ ಮತ್ತು ಪ್ರವಾಹದಿಂದಾಗಿ ಗದಗ ಜಿಲ್ಲೆಯಲ್ಲಿ ಒಟ್ಟು 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ನಾಶವಾಗಿರುವುದಾಗಿ ತಿಳಿದುಬಂದಿದೆ. ಬೆಳೆಹಾನಿಯಿಂದ 159 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಮುಂದೆ ಓದಿ...
ಚಿತ್ರದುರ್ಗದಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಸಂಪೂರ್ಣ ನಾಶ; ಶಾಸಕರಿಂದ ಪರಿಶೀಲನೆ
ಫಸಲು ಕೈಗೆ ಬರುವಷ್ಟರಲ್ಲಿ ನಷ್ಟ
ಗದಗ ಜಿಲ್ಲೆಯಲ್ಲಿ ರೈತರು ಈ ಬಾರಿ ಮುಂಗಾರಿನಲ್ಲಿ ಕಷ್ಟಗಳ ನಡುವೆಯೇ ಬಿತ್ತನೆಯ ಕಾರ್ಯ ಕೈಗೊಂಡಿದ್ದರು. ಸಕಾಲಕ್ಕೆ ಮಳೆಯೂ ಆಯಿತು. ಬೆಳೆಗಳಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಿದ್ದರು. ಆದರೆ, ಫಸಲು ಬಿಡುವಷ್ಟರಲ್ಲಿ ಬಂದ ಭಾರೀ ಮಳೆ ರೈತರಿಗೆ ಆಘಾತವನ್ನೇ ಉಂಟು ಮಾಡಿತು.
ನಾಶವಾದ ಮುಂಗಾರು ಬೆಳೆಗಳು
ಮಳೆ ಹೆಚ್ಚಾದ ಆರಂಭದಲ್ಲಿ ಜಿಲ್ಲೆಯ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ಉಕ್ಕಿ ಹರಿದು ನರಗುಂದ, ರೋಣ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾದವು. ನಂತರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಹೆಸರು, ಶೇಂಗಾ, ಉಳ್ಳಾಗಡ್ಡಿ, ಗೋವಿನ ಜೋಳ ಸೇರಿದಂತೆ ಮುಂಗಾರು ಬೆಳೆಗಳು ನಾಶವಾದವು.
ಕೊಪ್ಪಳ; ರೈತರಿಗೆ ಶೀಘ್ರ ಬೆಳೆ ಪರಿಹಾರ ನೀಡಲು ಆರ್ ಅಶೋಕ್ ಸೂಚನೆ
ಅತಿವೃಷ್ಟಿ ಪೀಡಿತ ಪ್ರದೇಶ ವ್ಯಾಪ್ತಿಗೆ ಏಳು ತಾಲೂಕುಗಳು
ಅತಿವೃಷ್ಟಿಯಿಂದ ಬೆಳೆ ಹಾನಿಯಾದ ತಾಲೂಕುಗಳ ಪಟ್ಟಿಗೆ ನರಗುಂದ, ಮುಂಡರಗಿ, ರೋಣ ಮತ್ತು ಶಿರಹಟ್ಟಿ ತಾಲೂಕುಗಳನ್ನು ಮಾತ್ರ ಸೇರಿಸಲಾಗಿತ್ತು. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ ಪಟ್ಟಿಗೆ ಸೇರಿಸಬೇಕು ಎಂದು ರೈತರು ಪ್ರತಿಭಟನೆ ನಡೆಸಿದ್ದರಿಂದ ಗದಗ, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ತಾಲೂಕುಗಳನ್ನು ಸಹ ಅತಿವೃಷ್ಟಿ ತಾಲೂಕುಗಳ ಪಟ್ಟಿಗೆ ಸೇರಿಸಲಾಯಿತು. ಇದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಅತಿವೃಷ್ಟಿ ಪೀಡಿತ ಪ್ರದೇಶ ವ್ಯಾಪ್ತಿಗೆ ಸೇರಿದವು.
159 ಕೋಟಿ ರೂ. ನಷ್ಟ
ಕಳೆದ ಮೂರ್ನಾಲ್ಕು ತಿಂಗಳಿಂದ ಸುರಿದ ಮಳೆ ಮತ್ತು ಮಲಪ್ರಭಾ ನದಿ, ಬೆಣ್ಣೆಹಳ್ಳದ ಪ್ರವಾಹದಿಂದ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಶೇಂಗಾ, 7 ಸಾವಿರ ಹೆಕ್ಟೇರ್ ಉಳ್ಳಾಗಡ್ಡಿ, 9900 ಹೆಕ್ಟೇರ್ ಹತ್ತಿ ಮತ್ತು 19 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸರ್ವೆ ಕಾರ್ಯ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿ, 159 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.