ರೈತರಿಗೆ ಸಾಥ್ ನೀಡಲು 1000 ಕಿ.ಮೀ. ಸೈಕಲ್ ನಲ್ಲೇ ಬಂದ ವೃದ್ಧ
ನವದೆಹಲಿ, ಡಿಸೆಂಬರ್ 18: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ರೈತರ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲವೂ ವ್ಯಕ್ತಗೊಂಡಿದೆ. ದಿನೇ ದಿನೇ ಗಡಿಯಲ್ಲಿ ರೈತರ ಸಂಖ್ಯೆ ಏರಿಕೆಯಾಗುತ್ತಿದ್ದು, ನಲವತ್ತಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.
ಈ ಪ್ರತಿಭಟನೆಯಲ್ಲಿ ರೈತರಿಗೆ ಸಾಥ್ ನೀಡಲು 60 ವರ್ಷದ ವೃದ್ಧ ಸತ್ಯದೇವ್ ಮಿನ್ಜಿ ಬಿಹಾರದಿಂದ ದೆಹಲಿವರೆಗೂ ಸೈಕಲ್ ನಲ್ಲೇ ಬಂದಿದ್ದಾರೆ. ಬಿಹಾರದ ಸಿವಾನ್ ನಿಂದ ಗುರುವಾರ ದೆಹಲಿ-ಹರಿಯಾಣ ಗಡಿ ಪ್ರದೇಶ ಟಿಕ್ರಿಗೆ ಬಂದು ತಲುಪಿದ್ದಾರೆ.
ರೈತರನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ
ನಡುಗಿಸುವ ಚಳಿಯ ನಡುವೆ ಹನ್ನೊಂದು ದಿನಗಳ ಕಾಲ ಸೈಕಲ್ ನಲ್ಲೇ ಸುಮಾರು 1000 ಕಿಲೋ ಮೀಟರ್ ಕ್ರಮಿಸಿ ಗಡಿ ತಲುಪಿರುವ ಸತ್ಯದೇವ್, ರೈತರಿಗೆ ಮಾರಕವಾಗಿರುವ ಈ ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರ ರದ್ದುಪಡಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
"ಈ ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಲೇಬೇಕು. ಅಲ್ಲಿಯವರೆಗೂ ನಾನು ಪ್ರತಿಭಟನೆಯಲ್ಲಿರುತ್ತೇನೆ. ವಾಪಸ್ ಹೋಗುವುದಿಲ್ಲ. ರೈತರಿಗೆ ನನ್ನ ಬೆಂಬಲ ವ್ಯಕ್ತಪಡಿಸಲು ಸಾವಿರ ಕಿಲೋ ಮೀಟರ್ ಕ್ರಮಿಸಿ ಇಲ್ಲಿಗೆ ಬಂದಿದ್ದೇನೆ. ಈ ಉದ್ದೇಶವನ್ನು ಪೂರೈಸಿಯೇ ವಾಪಸ್ ಹೊರಡುವುದು" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವೆಂಬರ್ 26ರಿಂದಲೂ ರೈತರ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆ ದಿನೇ ದಿನೇ ಕಾವೇರುತ್ತಿದ್ದು, ರೈತರೊಂದಿಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಗುರುವಾರ ಸೂಚಿಸಿದೆ.