"60 ರೈತರ ಸಾವಿನಿಂದಾಗದ ಮುಜುಗರ ಟ್ರ್ಯಾಕ್ಟರ್ ರ್ಯಾಲಿಯಿಂದಾಗುತ್ತಾ?"
ನವದೆಹಲಿ, ಜನವರಿ 13: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸದಂತೆ ತಡೆಯಲು ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಪೊಲೀಸರ ಅನುಮತಿ ತೆಗೆದುಕೊಳ್ಳದೇ ಪ್ರತಿಭಟನೆ ನಡೆಸಬಾರದು ಎಂದು ರೈತರಿಗೆ ಕೋರ್ಟ್ ನೋಟೀಸ್ ನೀಡಿದೆ.
ಈ ಕುರಿತು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಪ್ರತಿಭಟನೆಯಲ್ಲಿ ಅರವತ್ತು ರೈತರು ಸಾವನ್ನಪ್ಪಿದ್ದು ನಿಮಗೆ ಮುಜುಗರ ತರಲಿಲ್ಲ. ಆದರೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರೆ ಮುಜುಗರವಾಗುತ್ತದೆಯೇ" ಎಂದು ಪ್ರಶ್ನಿಸಿದ್ದಾರೆ.
ಜ.26ರಂದು ಟ್ರ್ಯಾಕ್ಟರ್ ರ್ಯಾಲಿ; ರೈತರಿಗೆ ಸುಪ್ರೀಂ ಕೋರ್ಟ್ ನೋಟೀಸ್
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದೂವರೆ ತಿಂಗಳಿನಿಂದ ರೈತರು ಹೋರಾಟ ಕೈಗೊಂಡಿದ್ದಾರೆ. ಕೇಂದ್ರ ಹಾಗೂ ರೈತರ ನಡುವೆ ಎಲ್ಲಾ ಮಾತುಕತೆಗಳು ವಿಫಲಗೊಂಡಿದ್ದು, ಹೋರಾಟದ ಭಾಗವಾಗಿ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ರೈತರು ತಿಳಿಸಿದ್ದರು.
ಟ್ರ್ಯಾಕ್ಟರ್ ರ್ಯಾಲಿ ಗಣರಾಜ್ಯೋತ್ಸವ ಮೆರವಣಿಗೆಗೆ ಅಡ್ಡಿಯಾಗುತ್ತದೆ. ಮೆರವಣಿಗೆಗೆ ಅಡ್ಡಿಯಾದರೆ ರಾಷ್ಟ್ರಕ್ಕೆ ಮುಜುಗರವಾದಂತೆ ಎಂದು ಅಫಿಡವಿಟ್ ನಲ್ಲಿ ಕೇಂದ್ರ ಒತ್ತಿ ಹೇಳಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "60ಕ್ಕೂ ಹೆಚ್ಚು ಅನ್ನದಾತರ ಸಾವು ನಿಮಗೆ ಮುಜುಗರ ತರಲಿಲ್ಲ, ಆದರೆ ಟ್ರ್ಯಾಕ್ಟರ್ ರ್ಯಾಲಿ ಮುಜುಗರ ತರುತ್ತದೆಯೇ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿಭಟನಾ ನಿರತ ರೈತರ ಪ್ರಕಾರ ಇದುವರೆಗೂ ಹೋರಾಟದಲ್ಲಿ ತೊಡಗಿಕೊಂಡಿದ್ದ ಸುಮಾರು 60 ಮಂದಿ ರೈತರು ಸಾವನ್ನಪ್ಪಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೆಲವರು ಚಳಿಯಲ್ಲಿ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಮೂರು ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆಯೊಡ್ಡಿರುವ ಸುಪ್ರೀಂ ಕೋರ್ಟ್, ಕೇಂದ್ರದ ಅಫಿಡವಿಟ್ ಕುರಿತೂ ವಿಚಾರಣೆ ನಡೆಸಿ, ರೈತರಿಗೆ ನೋಟೀಸ್ ನೀಡಿತ್ತು. ದೆಹಲಿ ಪೊಲೀಸರ ಅನುಮತಿ ಇದ್ದರೆ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ಎಂದು ತಿಳಿಸಿತ್ತು.