ರೈತ ಹುತಾತ್ಮ ದಿನಾಚರಣೆ; ರೈತ ಸಂಘದ ಚಳವಳಿ ಏನು? ಎತ್ತ?
ಜುಲೈ 21 ರಂದು ನರಗುಂದದಲ್ಲಿ ರೈತ ಬಂಡಾಯ ನಡೆದು 41 ವರ್ಷಗಳಾಗಲಿವೆ. ಬಂಡಾಯದಲ್ಲಿ ಮಡಿದ ರೈತ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.
ರಾಜ್ಯದ ಬಯಲುಸೀಮೆ ಪ್ರದೇಶಗಳ ತಾಲ್ಲೂಕು ಕೇಂದ್ರಗಳಲ್ಲಿ ಅದೇ ದಿನದಂದು ವಿದ್ಯುಚ್ಛಕ್ತಿ ಖಾಸಗೀಕರಣ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಜಾರಿಯಾದಲ್ಲಿ ಕೃಷಿ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವವರೆಗೂ ಬಿಲ್ ಪಾವತಿಸುವುದಿಲ್ಲ ಎಂಬ ವಿಚಾರಗಳನ್ನೊಳಗೊಂಡಿರುವ ಭಿತ್ತಿಪತ್ರವನ್ನು ರೈತರ ಮನೆ ಬಾಗಿಲಿಗೆ, ಮೀಟರ್ ಬೋರ್ಡ್ಗಳಿಗೆ, ವಿದ್ಯುಚ್ಛಕ್ತಿ ಕಂಬಗಳಿಗೆ ಹಚ್ಚುವ ಅಭಿಯಾನಕ್ಕೆ ಚಾಲನೆ ಕೊಡುವ ಮೂಲಕ ರೈತ ಹುತಾತ್ಮ ದಿನವನ್ನು ನೆನೆಯಲಾಗುವುದು.
ಅದೇ ದಿನ ದೆಹಲಿಯ ಗಾಜಿಪುರ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾದ ರಾಕೇಶ್ ಟಿಕಾಯತ್ ಮತ್ತು ಯುದ್ದ್ವೀರ್ ಸಿಂಗ್ ನೇತೃತ್ವದಲ್ಲಿ ಕರ್ನಾಟಕದಿಂದ ತೆರಳಲಿರುವ ರೈತ ಮುಖಂಡರೊಡನೆ, ಕರ್ನಾಟಕದ ರೈತ ಚಳವಳಿಗಾರರು ನಿರಂತರವಾಗಿ ದೆಹಲಿಯ ಹೋರಾಟದಲ್ಲಿ ಭಾಗವಹಿಸಲು ಒಂದು ಪ್ರತ್ಯೇಕ ಸತ್ಯಾಗ್ರಹ ಸ್ಥಳ (ಟೆಂಟನ್ನು) ಉದ್ಘಾಟಿಸುವ ಮೂಲಕ ರೈತ ಹುತಾತ್ಮ ದಿನವನ್ನು ಆಚರಿಸಲಾಗುವುದು.
ಎಂಟು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಭಾಗಿಯಾಗಲು ಮತ್ತು ಅನುಭವ ಪಡೆದು ಬರಲು ಜುಲೈ 28 ರಿಂದ ಕರ್ನಾಟಕದಿಂದ ಜಿಲ್ಲಾವಾರು ಸರದಿಯಲ್ಲಿ ರೈತ ಹೋರಾಟಗಾರರು ದೆಹಲಿಗೆ ತೆರಳಲಿದ್ದಾರೆ.
ಗಾಜಿಪುರ ಗಡಿಯಲ್ಲಿ ಉದ್ಘಾಟನೆಗೊಳ್ಳಲಿರುವ ಕರ್ನಾಟಕಕ್ಕೆ ಮೀಸಲಿಡಲಿರುವ ಸತ್ಯಾಗ್ರಹ ಸ್ಥಳದಲ್ಲಿ(ಟೆಂಟ್)ನಲ್ಲಿ ಕರ್ನಾಟಕದ ರೈತರು ನಿರಂತರ ಧರಣಿ ಹೂಡಲಿದ್ದಾರೆ. ಈ ಸ್ಥಳವನ್ನು ಮುಂದಿನ ಒಂದು ತಿಂಗಳಿನಲ್ಲಿ ಕರ್ನಾಟಕದ ರೈತ ಚಳವಳಿಯ ಇತಿಹಾಸ ಸಾರಲಿರುವ ಸ್ಥಳವನ್ನಾಗಿ ಪರಿವರ್ತಿಸಲಾಗುವುದು. ಇಂಥದೊಂದು ರಚನಾತ್ಮಕ ಕ್ರಿಯೆಯಿಂದ ಉತ್ತರ ದಕ್ಷಿಣದ ಬಂಧ ಹೆಚ್ಚು ಗಟ್ಟಿಗೊಳ್ಳಲಿದೆ ಎಂಬುದು ರೈತ ಮುಖಂಡರ ಅಭಿಪ್ರಾಯವಾಗಿದೆ.
ಇನ್ನು ಜುಲೈ 22 ರಂದು ಸಂಸತ್ನ ಮುಂದೆ ನಡೆಯಲಿರುವ ರೈತರ ಪ್ರತಿಭಟನೆಯಲ್ಲಿ ಕರ್ನಾಟಕದ ರೈತ ಚಳವಳಿಯ ಪ್ರತಿನಿಧಿಗಳು ಭಾಗವಹಿಸಿವುದರ ಮೂಲಕ ತಮ್ಮ ಸಾಲಿಡಾರಿಟಿಯನ್ನು ಪ್ರದರ್ಶಿಸಲಿದ್ದಾರೆ.