ಗಣಿ ಜಿಲ್ಲೆಯಲ್ಲಿ ಸತತ ಮಳೆಗೆ 210.76 ಹೆಕ್ಟೇರ್ ಪ್ರದೇಶದ ಬೆಳೆ ನಷ್ಟ
ಬಳ್ಳಾರಿ, ಅಕ್ಟೋಬರ್ 16: ಕಳೆದ ಮೂರು ದಿನಗಳಿಂದ ಗಣಿಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಗೆ ಸರಿಸುಮಾರು 210.76 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿನ ಬೆಳೆನಷ್ಟ ಉಂಟಾಗಿದ್ದು, ಅಂದಾಜು 140ಕ್ಕೂ ಅಧಿಕ ಕಚ್ಚಾ ಮನೆಗಳಿಗೆ ಹಾನಿಯಾಗಿದೆ.
ಅಕ್ಟೋಬರ್ 10 ರಿಂದ 13ರವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ 11 ತಾಲೂಕಿನಲ್ಲೂ ಬೆಳೆನಷ್ಟ ಉಂಟಾಗಿದೆ. ಅಂದಾಜು 198.5 ಹೆಕ್ಟೇರ್ ನಷ್ಟು ಕೃಷಿಕ ಬೆಳೆ ಹಾಗೂ 12.26 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ನಷ್ಟ ಸಂಭವಿಸಿದೆ. ಅದರಲ್ಲೂ ಸಿರುಗುಪ್ಪ ತಾಲೂಕಿನಾದ್ಯಂತ ಅಂದಾಜು 140 ಹೆಕ್ಟೇರ್ ನಷ್ಟು ಬೆಳೆನಷ್ಟ ಉಂಟಾಗಿದೆ.
ದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ
ಉಳಿದಂತೆ ಹೊಸಪೇಟೆ, ಹರಪನಹಳ್ಳಿ ತಾಲೂಕಿನಾದ್ಯಂತ ಸರಾಸರಿ 25-20 ಹೆಕ್ಟೇರ್ ನಷ್ಟು ಬೆಳೆನಷ್ಟ ಉಂಟಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 12.26 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ನಾನಾ ತೋಟಗಾರಿಕೆ ಬೆಳೆನಷ್ಟ ಉಂಟಾಗಿದೆ. ಬಳ್ಳಾರಿ ಮತ್ತು ಕುರು ಗೋಡು, ಕಂಪ್ಲಿ, ಕೊಟ್ಟೂರು ಹಾಗೂ ಹೂವಿನ ಹಡಗಲಿ ತಾಲೂಕಿನಾದ್ಯಂತ ಬೆಳೆನಷ್ಟ ಉಂಟಾಗಿರುವ ಕುರಿತ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಮನೆಗಳಿಗೆ ಹಾನಿ: ಜಿಲ್ಲೆಯ 11 ತಾಲೂಕಿನ ಗ್ರಾಮೀಣ ಭಾಗದಲ್ಲಿನ 140 ಕಚ್ಚಾ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಬಳ್ಳಾರಿ ತಾಲೂಕು- 7, ಸಿರುಗುಪ್ಪ- 2, ಸಂಡೂರು- 22, ಕುರುಗೋಡು-1, ಹೊಸಪೇಟೆ- 16, ಕಂಪ್ಲಿ- 3, ಹಗರಿಬೊಮ್ಮನಹಳ್ಳಿ- 26, ಕೂಡ್ಲಿಗಿ- 9, ಕೊಟ್ಟೂರು - 16, ಹಡಗಲಿ- 18, ಹರಪನಹಳ್ಳಿ -20 ಕಚ್ಚಾ ಮನೆಗಳು ಕುಸಿದು ಬಿದ್ದಿವೆ. ಈ ಎಲ್ಲ ಮನೆಗಳಿಗೆ ನಿಯಮಾನುಸಾರ ಸೂಕ್ತ ಪರಿಹಾರವನ್ನು ಜಿಲ್ಲಾಡಳಿತ ಒದಗಿಸಿಕೊಡುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.