ಕೊಡಗಿನಲ್ಲಿ ಫಸಲು ನಾಶ ಮಾಡುವ ಪುಂಡಾನೆಗಳು
ಮಧ್ಯರಾತ್ರಿಯಲ್ಲಿ ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ಹಾರಂಗಿ ಎಡದಂತೆ ನಾಲೆಯ ಮೇಲೆ ಧಾವಿಸಿದ ಕಾಡಾನೆಗಳ ಹಿಂಡು ರೈತರು ಕಷ್ಟಪಟ್ಟು ಬೆಳೆಸಿದ ಭತ್ತ, ಬಾಳೆ, ತೆಂಗು, ಕಾಫಿ ಮತ್ತಿತರರ ಫಸಲನ್ನು ತಿಂದು ಹಾಕಿದಿರುವುದಲ್ಲದೆ, ತುಳಿದು ನಾಶ ಮಾಡಿವೆ.
ಹುದುಗೂರು ರೈತನ ಅಳಲು: ಗ್ರಾಮದ ಕರಿಯಪ್ಪ ಎಂಬುವವರ ಮಗ ಕೆ.ತಿಮ್ಮಪ್ಪ ಅವರು ಎರಡು ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆಸಿದ್ದ ಬಾಳೆ, ತೆಂಗು, ಸಿಲ್ವರ್ ಮರ ಸೇರಿದಂತೆ ಇತರೆ ಕೃಷಿ ಫಸಲು ಕಾಡಾನೆ ದಾಳಿಯಿಂದ ಸಂಪೂರ್ಣ ನೆಲಕಚ್ಚಿದೆ. ವರ್ಷ ಪೂರ್ತಿ ದುಡಿದು ಬೆಳೆದ ಬೆಳೆ ಫಸಲು ಬಿಡುವ ಸಂದರ್ಭವೇ ಕಾಡಾನೆಗಳು ದಾಳಿ ಮಾಡಿ ನಾಶ ಮಡಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅದೇ ರೀತಿ ಕೃಷ್ಣ ಎಂಬುವವರಿಗೆ ಸೇರಿದ ಕಟಾವು ಮಾಡಿದ ಜೋಳವನ್ನು ಕಾಡಾನೆಗಳು ತಿಂದು ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆದಿರುವ ಭತ್ತವನ್ನು ತುಳಿದು ಧ್ವಂಸಪಡಿಸಿವೆ. ಕಾಡಾನೆಗಳ ಹಾವಳಿಯಿಂದ ಯಡವನಾಡು, ಹುದುಗೂರು ಸುತ್ತಮುತ್ತಲ ಭಾಗದ ಜನತೆ ಭಯಭೀತರಾಗಿದ್ದು, ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಕಾಡಾನೆಗಳ ದಾಳಿಯಿಂದ ಹಾನಿಗೀಡಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳ ಹಾವಳಿಯನ್ನು ತಡೆಯಲು ಅಳವಡಿಸಿದ್ದ ಸೌರವಿದ್ಯುತ್ ತಂತಿಬೇಲಿ ಸಂಪೂರ್ಣ ಹಾಳಾಗಿರುವುದರಿಂದ ಕಾಡಾನೆಗಳು ಗ್ರಾಮದೊಳಗೆ ನುಸುಳಿ ಬರುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದರೆ ಗ್ರಾಮಸ್ಥರ ಕೂಗು ಅರಣ್ಯ ಅಧಿಕಾರಿಗಳ ಕಿವಿಗೆ ಬೀಳದಿರುವುದು ದುರಂತವೇ ಎನ್ನಬೇಕು.