ನೂರು ದಿನ ಮುಟ್ಟಿದ ಪ್ರತಿಭಟನೆ; ಕೇಂದ್ರದ ವಿರುದ್ಧ ಕರಾಳ ದಿನಾಚರಣೆ
ನವದೆಹಲಿ, ಮಾರ್ಚ್ 6: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತರು ಕೇಂದ್ರಕ್ಕೆ ತಿಳಿಸಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ.
ಶನಿವಾರಕ್ಕೆ ರೈತರ ಪ್ರತಿಭಟನೆ ನೂರನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ.
"ಅರಾಜಕತೆಯಲ್ಲದೇ ಮತ್ತೇನು?" ಬೋರ್ವೆಲ್ ಕೊರೆಸಿದ ರೈತರ ಮೇಲೆ ಬಿಜೆಪಿ ಆಕ್ರೋಶ
ನವೆಂಬರ್ 26ರಿಂದ ರೈತರು ದೆಹಲಿಯ ಟಿಕ್ರಿ, ಘಾಜಿಪುರ ಗಡಿಗಳಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿಗೆ ಪ್ರತಿಭಟನೆ ನೂರನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ರೈತರು ಕಪ್ಪು ದಿನವನ್ನಾಗಿ ಆಚರಿಸಲಿದ್ದಾರೆ.
ಐದು ಗಂಟೆಗಳ ಕಾಲ ಕುಂಡ್ಲಿ ಮನೇಸರ್ ಪಲ್ವಾಲ್ ಎಕ್ಸ್ಪ್ರೆಸ್ ವೇ ತಡೆಯಲಿದ್ದಾರೆ. ದಾಸ್ನಾ, ದುಹಾಯ್, ಬಾಘಪಟ್, ದಾದ್ರಿ ಮತ್ತು ಗ್ರೇಟರ್ ನೋಯ್ಡಾಗಳಲ್ಲಿನ ಟೋಲ್ ಪ್ಲಾಜಾಗಳನ್ನು ಟೋಲ್ ಮುಕ್ತಗೊಳಿಸುವುದಾಗಿ ರೈತ ಸಂಘಗಳು ತಿಳಿಸಿವೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ 26 ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.