ರೈತರ ಪ್ರತಿಭಟನೆಗೆ 100 ದಿನ: ಶನಿವಾರ ಟೋಲ್ ಪ್ಲಾಜಾಗಳು ಸುಂಕ ಮುಕ್ತ
ನವದೆಹಲಿ, ಮಾರ್ಚ್ 5: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗಳು ಶನಿವಾರ ನೂರನೇ ದಿನಕ್ಕೆ ಕಾಲಿಡುತ್ತಿದೆ. ಈ ಸಂದರ್ಭಕ್ಕಾಗಿ ರೈತ ಸಂಘಟನೆಗಳು ದೇಶದ ಅನೇಕ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಮುಕ್ತಗೊಳಿಸಲು ನಿರ್ಧರಿಸಿವೆ. ಸತತ ನೂರು ದಿನಗಳಿಂದ ಸಾವಿರಾರು ರೈತರ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮೂರು ವಿವಾದಾತ್ಮಕ ಕೃಷಿ ಸುಧಾರಣಾ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ದಾಸ್ನಾ, ದುಹಾಯ್, ಬಾಘಪಟ್, ದಾದ್ರಿ ಮತ್ತು ಗ್ರೇಟರ್ ನೋಯ್ಡಾಗಳಲ್ಲಿನ ಟೋಲ್ ಪ್ಲಾಜಾಗಳನ್ನು ಟೋಲ್ ಮುಕ್ತಗೊಳಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ವಕ್ತಾರ ಜಗ್ತಾರ್ ಸಿಂಗ್ ಬಾಜ್ವಾ ತಿಳಿಸಿದ್ದಾರೆ.
ಕೃಷಿ ಕಾಯ್ದೆ ಪ್ರತಿಭಟನೆ: ಆಸ್ಟ್ರೇಲಿಯಾದಲ್ಲಿಯೂ ಸಂಘರ್ಷ
ಘಾಜಿಪುರ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೂ ನಡೆದಿರುವ ಚಳವಳಿ ಸರಿಯಾಗಿ ಸಾಗುತ್ತಿದೆ. ತಾವು ಮತ್ತಷ್ಟು ಪ್ರಬಲರಾಗುತ್ತಿದ್ದೇವೆ ಎಂದು ತಿಳಿಸಿದರು. ಮಾರ್ಚ್ 6ಅನ್ನು ಕರಾಳ ದಿನವಾಗಿ ಆಚರಿಸಲು ಪ್ರತಿಭಟನಾನಿರತ ರೈತರು ನಿರ್ಧರಿಸಿದ್ದಾರೆ.
ಪ್ರತಿಭಟನೆಯ ನೂರನೇ ದಿನದ ಆಚರಣೆ ಅಂಗವಾಗಿ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ವೇ ಅನ್ನು ಐದು ಗಂಟೆ ಬ್ಲಾಕ್ ಮಾಡಲಾಗುವುದು ಎಂದು ಬಾಜ್ವಾ ತಿಳಿಸಿದ್ದಾರೆ.
ಸಚಿವರ ಮಾತು: ಹೊಸ ಕೃಷಿ ಕಾಯ್ದೆಗಳಿಂದ ದೇಶದ ರೈತರೆಲ್ಲ ಶ್ರೀಮಂತ!
'ನಾವು ಸಂಪೂರ್ಣವಾಗಿ ತಯಾರಾಗಿದ್ದೇವೆ. ಸರ್ಕಾರ ನಮ್ಮ ಮಾತುಗಳನ್ನು ಆಲಿಸುವ ಹಾಗೂ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಇಲ್ಲಿಂದ ಹೋಗುವುದಿಲ್ಲ' ಎಂದು ರಾಕೇಶ್ ಟಿಕಾಯತ್ ಪುನರುಚ್ಚರಿಸಿದ್ದಾರೆ.