ಕೃಷಿಗೆ ಸಾಲದ ಹರಿವು ಹೆಚ್ಚಿಸಲು ಅಲ್ಪಾವಧಿ ಸಾಲದ ಮೇಲಿನ ಶೇ.1.5ರಷ್ಟು ಬಡ್ಡಿ ಮನ್ನಾ
ನವದೆಹಲಿ ಆಗಸ್ಟ್ 18: ಕೃಷಿ ವಲಯಕ್ಕೆ ಸಾಲದ ಹರಿವು ಸರಾಗವಾಗಿಸಲು 3 ಲಕ್ಷ ರೂ.ವರೆಗೆ ಅಲ್ಪಾವಧಿ ಕೃಷಿ ಸಾಲದ ಮೇಲಿನ ಶೇ. 1.5ರಷ್ಟು ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಭಾರತದ ಕೋಟ್ಯಂತರ ರೈತರಿಗೆ ಸಿಹಿ ಸಿದ್ದಿಯೊಂದನ್ನು ನೀಡಿದೆ.
ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ 33,856 ಕೋಟಿ ರೂ. ಸಬ್ಸಿಡಿ ಹಣವನ್ನು ಬ್ಯಾಂಕ್, ವಿವಿಧ ಹಣಕಾಸು ಸಂಸ್ಥೆಗಳಿಗೆ ಒದಗಿಸಲು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿಗೆ ಪೂರಕವಾದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಬೇಸಾಯದ ಕಡೆ ಯುವಕರನ್ನು ಸೆಳೆಯಲು ಅಂಕೋಲಾದಲ್ಲಿ ಕೃಷಿ ಹಬ್ಬ
ಸಂಪುಟ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಕ್ರೀಡಾ ವಿಭಾಗ ಸಚಿವ ಅನರಾಗ್ ಠಾಕೂರ್ ಅವರು, ಕೇಂದ್ರದ ಈ ನಿರ್ಧಾರದಿಂದ ಶೇ.4ರ ಬಡ್ಡಿದರಲ್ಲಿ ರೈತರಿಗೆ ಸಾಲ ನೀಡುವ ಬ್ಯಾಂಕ್ ಇನ್ನಿತರ ಹಣಕಾಸು ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದ ಹೇಳಿದರು.
ಅಲ್ಲದೇ 3 ಲಕ್ಷ ರೂ.ವರೆಗೆ ಕೃಷಿಗಾಗಿ ಅಲ್ಪಾವಧಿ ಸಾಲ ಪಡೆಯುವ ರೈತರು ಶೇ.7 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಕಾಲಮಿತಿಯಲ್ಲಿ ಹಣ ಪಾವತಿಸಿವರಿಗೆ ಶೇ.3ರಷ್ಟು ಬಡ್ಡಿಹಣದಲ್ಲಿ ರಿಯಾಯಿತಿ ಸಿಗುತ್ತದೆ. ಅಂದರೆ ಒಬ್ಬ ರೈತರಿಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಸಾಲದ ಮೇಲಿನ ಬಡ್ಡಿದರ ಹೆಚ್ಚಾದ ಕಾರಣ ಬ್ಯಾಂಕ್ಗಳಿಗೆ ಶೇ.1.5 ರಷ್ಟು ಬಡ್ಡಿದರಲ್ಲಿ ಸಬ್ಸಿಡಿ ಒದಗಿಸಲು ಕೇಂದ್ರವು ತೀರ್ಮಾನಿಸಿದೆ ಎಂದು ಅವರು ವಿವರಿಸಿದರು.
ಶೇ.1.5 ಸಬ್ಸಿಡಿ ಯೋಜನೆ 2025ರವರೆಗೆ ಅನ್ವಯ
ದೇಶಕ್ಕೆ ಪ್ರಮುಖ ಆಧಾರವಾದ ರೈತರ ಆದಾಯ ಹೆಚ್ಚಿಸುವ ಮಹತ್ತರ ಉದ್ದೇಶದಿಂದ ಕೈಗೊಂಡಿರುವ ಶೇ.1.5 ರಷ್ಟು ಬಡ್ಡಿ ಸಬ್ಸಿಡಿಯು 2022-23 ರಿಂದ 2024-2025 ರವರೆಗಿನ ಅವಧಿಗೆ ಅನ್ವಯಿಸಲಿದೆ. ಇದರಿಂದ ಈ ಯೋಜನೆ ಅಡಿಯಲ್ಲಿ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಬ್ಯಾಂಕ್ಗಳು, ಸಣ್ಣ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು, ಕಂಪ್ಯೂಟರೀಕೃತ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಮುಂದಿನ ಮೂರು ವರ್ಷ (2025)ದವರೆಗೆ ರೈತರಿಗೆ ಸಾಲ ನೀಡಲಿವೆ ಎಂದರು.
ಬಡ್ಡಿ ರಿಯಾಯಿತಿಯ ಲಾಭವೇನು?
ಕೃಷಿ ಮೇಲಿನ ಈ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ಮನ್ನಾದಿಂದ ಕೃಷಿ ಕ್ಷೇತ್ರಕ್ಕೆ ಸಾಲದ ಹರಿವು ಹೆಚ್ಚಾಗುವ ಜತೆಗೆ ಸುಸ್ಥಿರತೆ ಸಾಧ್ಯವಾಗುತ್ತದೆ. ಕೃಷಿ ಸಾಲ ನೀಡುವ ಹಣಕಾಸು ಸಂಸ್ಥೆಗಳ ಅದರಲ್ಲೂ ವಿಶೇಷವಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಹಕಾರಿ ಬ್ಯಾಂಕ್ಗಳ ಆರ್ಥಿಕ ಆರೋಗ್ಯ ಹಾಗೂ ಕಾರ್ಯಸಾಧನೆ ಖಚಿತತೆ ಪಡಿಸಿಕೊಂಡಂತಾಗುತ್ತದೆ. ಹೆಚ್ಚುವರಿ ಸಾಲ ನೀಡಲು ಅನುಕೂಲವಾಗಲಿದೆ. ಕೃಷಿಯ ಅಗತ್ಯತೆಗಳಿಗೆ ಅವಶ್ಯವಿರುವ ರೈತರಿಗೆ ಅಲ್ಪಾವಧಿ ಕೃಷಿ ಸಾಲ ಸಾಲವನ್ನು ನೀಡಲು ಕೇಂದ್ರದ ನಿರ್ಧಾರ ಪ್ರೋತ್ಸಾಹಿಸುತ್ತದೆ. ಇದರಿಂದ ಹೆಚ್ಚೆಚ್ಚು ರೈತರು ಕೃಷಿ ಸಾಲ ಪಡೆಯಲು ಮುಂದಾಗುತ್ತಾರೆ.
ತುರ್ತು ಸಾಲದ ಮೊತ್ತ ಹೆಚ್ಚಳ
ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ತುರ್ತು ಸಾಲ ಖಾತ್ರಿ ಯೋಜನೆಗೆ ನೀಡಲಾಗಿದ್ದ ಅನುದಾನ ಪ್ರಮಾಣವನ್ನು ಹೆಚ್ಚಿಸಿದೆ. ಹಾಲಿ ಅನುದಾನದ ಮೊತ್ತ 4.50 ಲಕ್ಷ ರೂ.ಅನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ಕೋವಿಡ್ ಕಾಲದಲ್ಲಿ ಆತಿಥ್ಯ ವಲಯವು ಅನುಭವಿಸಿರುವ ಸಮಸ್ಯೆ, ಸಂಕಷ್ಟಗಳ ನಿವಾರಣೆಯ ಪರಿಹಾರಗಳಿಗೆ ಪೂರಕವಾಗಿ ಹೆಚ್ಚಿನ ನೆರವು ಲಭ್ಯವಾಗಲೆಂದು ಅನುದಾನ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿವಿಧ ಬಗೆಯ ಕೃಷಿ ಸಾಲಕ್ಕೆ ರೈತರು ಅರ್ಹರು
ಕಷ್ಟ ಕಾಲದಲ್ಲೂ ಸಹ ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುವ ರೈತರು ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಹಲವು ವಿಧದ ಕೃಷಿ ಸಾಲ ಪಡೆಯಬಹುದಾಗಿದೆ. ಬೆಳೆ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಬೆಳೆ ಸಾಲ, ಕೃಷಿ ಅವಧಿಯ ಸಾಲ, ಕೃಷಿ ಕ್ಯಾಪಿಟಿಲ್ ಸಾಲ, ಯಾಂತ್ರೀಕರಣಕ್ಕಾಗಿ ಸಾಲ, ತೋಟಗಾರಿಕೆಗೆ ಸಾಲ, ಕೃಷಿ ಗೋಲ್ಡ್ ಲೋನ್, ಅರಣ್ಯೀಕರಣ ಸೇರಿದಂತೆ ಹೀಗೆ ವಿವಿಧ ವಿಧದ ಸಾಲಗಳನ್ನು ಪಡೆಯಲು ಅರ್ಹರಾಗಿದ್ದು, ಅವರಿಗೆ ಬ್ಯಾಂಕ್ಗಳು ಸಾಲ ಸೌಲಭ್ಯ ಕಲ್ಪಿಸುತ್ತಿವೆ.
ಕೃಷಿ ಚಟುವಟಿಕೆಗೆಂದು ಸಾಮಾನ್ಯವಾಗಿ ರೈತರಿಗೆ ವಾರ್ಷಿಕ ಶೇ.7ಬಡ್ಡಿ ದರದಲ್ಲಿ 3ಲಕ್ಷ ವರೆಗೆ ಹಣ ಸಾಲ ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ರೈತರು ಬಡ್ಡಿಪಾವತಿಸಿದರೆ ಶೇ. 3ರಷ್ಟು ಹಣ ಸಹಾಯರೂಪದಲ್ಲಿ ಸಿಗುತ್ತದೆ. ಸಾಲ ಪಡೆಯಲು ರೈತರು ಬ್ಯಾಂಕಿಗೆ ಸರ್ಕಾರಿ ಸೌಲಭ್ಯ ಪಡೆಯಲು ಕಡ್ಡಾಯಗೊಳಿಸಿರುವ ಆಧಾರ್ ಕಾರ್ಡ್ ಪ್ರತಿ, ಜತೆಗೆ ಕೃಷಿ ಜಮೀನಿನ ಪಹಣಿ ನೀಡಬೇಕು. ಇದರೊಂದಿಗೆ ಬ್ಯಾಂಕ್, ಇಲ್ಲವೇ ಹಣಕಾಸು ಸಂಸ್ಥೆಗಳು ಕೇಳುವ ಅಗತ್ಯ ದಾಖಲೆ ಒದಗಿಸಬೇಕಿದೆ.