ಎಸಿಬಿಗೆ ಖರ್ಚು ಮಾಡಿದ್ದು 120 ಕೋಟಿ ರೂ. ಶಿಕ್ಷೆ ಯಾಗಿದ್ದು ನಾಲ್ಕು ಮಂದಿಗೆ!
ಬೆಂಗಳೂರು, ಫೆಬ್ರವರಿ 24: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಆರಂಭವಾಗಿ ಐದು ವರ್ಷ ಕಳೆದಿದೆ. ಎಸಿಬಿ ಈವರೆಗೂ ದಾಖಲಸಿರುವ ಒಟ್ಟಾರೆ ಭ್ರಷ್ಟಾಚಾರ ಪ್ರಕರಣ 1445. ಇದಕ್ಕಾಗಿ ಸರ್ಕಾರ ವೆಚ್ಚ ಮಾಡಿರುವುದು ಬರೋಬ್ಬರಿ 119. 97 ಕೋಟಿ ರೂಪಾಯಿ! ಈ ಪರಿ ಖರ್ಚು ಮಾಡಿದ್ರೂ ಎಸಿಬಿ ದಾಖಲಿಸಿರುವ ಒಂದೂವರೆ ಸಾವಿರ ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ಕೇವಲ ನಾಲ್ಕು ಭ್ರಷ್ಟರಿಗೆ. ಸದ್ಯದ ಲೆಕ್ಕದ ಪ್ರಕಾರ ಸರಾಸರಿ ಭ್ರಷ್ಟಾಚಾರ ಆರೋಪ ಹೊತ್ತ ಸರಾಸರಿ 350 ಅಧಿಕಾರಿಗಳ ಪೈಕಿ ಒಬ್ಬರಿಗೆ ಶಿಕ್ಷೆ ! ಇದು ಭ್ರಷ್ಟರ ವಿರುದ್ಧ ಸಮರ ಸಾರಿರುವ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯ ಶೈಲಿ !
ಮುಚ್ಚಿಸುತ್ತೀನಿ ಎಂದ ಯಡಿಯೂರಪ್ಪ ಸೈಲೆಂಟ್
ಭ್ರಷ್ಟಾಚಾರ ನಿಗ್ರಹ ದಳ ಕಾರ್ಯ ವೈಖರಿಯ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವ ದಾಖಲೆಗಳಲ್ಲಿ ಬಹಿರಂಗವಾಗಿರುವ ಸಂಗತಿಯಿದು. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿತಕ್ಕಾಗಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿಯನ್ನು ರಚನೆ ಮಾಡಿದರು. ಎಸಿಬಿಯನ್ನು ಮುಚ್ಚಿ ಲೋಕಾಯುಕ್ತಕ್ಕೆ ಅಧಿಕಾರ ನೀಡುವುದಾಗಿ ಹಾಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ಎಸಿಬಿ ಬಗ್ಗೆ ಯಡಿಯೂರಪ್ಪನವರು ಪ್ರಸ್ತಾಪವೇ ಮಾಡುತ್ತಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಹೇಳಿದ್ದಾರೆ.
ಎಸಿಬಿ ಗಾಳಕ್ಕೆ ಬಿದ್ದ ಏಳು ಭ್ರಷ್ಟರ ಅಕ್ರಮ ಆಸ್ತಿ Rank ಪಟ್ಟಿ ಬಿಡುಗಡೆ !
ನಾಲ್ಕು ಮಂದಿಗೆ ಮಾತ್ರ ಶಿಕ್ಷೆ
ಹಾಲಿ ಸರ್ಕಾರದ ವಿರುದ್ಧವೇ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಆದರೆ, ಒಂದು ಪ್ರಕರಣ ಕೂಡ ದಾಖಲಿಸಿಲ್ಲ. ದೂರು ದಾಖಲಾದರೂ ತನಿಖೆಯಾಗದೇ ಮುಚ್ಚಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಎಸಿಬಿ ಕಾರ್ಯ ವೈಖರಿಯನ್ನು ಅವಲೋಕಿಸಬೇಕಿದೆ. ಪಕ್ಷ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳ ಪ್ರಕಾರ ಹೇಳುವುದಾರೆ, ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡುವಲ್ಲಿ ಎಸಿಬಿ ವಿಫಲವಾಗಿದೆ. ಇದನ್ನು ಪೋಷಣೆ ಮಾಡಲಾಗದ ಬಿಳಿಯಾನೆಯಾಗಿದೆ.
ಯಾವ ಉದ್ದೇಶಕ್ಕಾಗಿ ಎಸಿಬಿ ರಚನೆಯಾಗಿದೆಯೋ, ಅದನ್ನು ನಿರ್ವಹ ಕಣೆ ಮಾಡುವಲ್ಲಿ ವಿಫಲವಾಗಿದೆ. ತೋರಿಕೆಗೆ ಮಾತ್ರ ಎಸಿಬಿ ಇದ್ದಂತಾಗಿದೆ. ಕೆಲವು ದೂರುಗಳನ್ನು ಪ್ರಾಥಮಿಕ ತನಿಖೆಯನ್ನೂ ಮಾಡಿಲ್ಲ. ಎಸಿಬಿ ಈವರೆಗೂ ದಾಖಲಿಸಿರುವ 1445 ಪ್ರಕರಣಗಳ ಪೈಕಿ ಕೇವಲ 4 ಭ್ರಷ್ಟರಿಗೆ ಶಿಕ್ಷೆಯಾಗಿದೆ. ಇದಕ್ಕಾಗಿ ಸರ್ಕಾರ 120 ಕೋಟಿ ವೆಚ್ಚ ಮಾಡುವ ಅಗತ್ಯವೇನಿದೆ ? ಈ ಕೂಡಲೇ ಎಸಿಬಿಯನ್ನು ಮುಚ್ಚಿ ಲೋಕಾಯುಕ್ತ ಸಂಸ್ಥೆಗೆ ನೀಡಬೇಕು. ರಾಜ್ಯದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ನಿಗ್ರಹ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತವನ್ನು ಮರು ಸ್ಥಾಪಿಸಬೇಕು ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಆಗ್ರಹಿಸಿದೆ.
ಐದು ವರ್ಷದಲ್ಲಿ ಎಸಿಬಿ ದಾಖಲಿಸಿದ ಪ್ರಕರಣಗಳು
ಅಕ್ರಮ ಆಸ್ತಿ ಗಳಿಕೆ ಪ್ರಕರಣ - 186 ( ಆದಾಯಕ್ಕಿಂತೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಡಿ ಎಸಿಬಿ ಪೊಲೀಸರ ದಾಳಿಗೆ ಒಳಗಾದವರು)
ಲಂಚ ಸ್ವೀಕಾರ ಪ್ರಕರಣ - 1143 ( ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿದ ಪ್ರಕರಣಗಳು)
ಬೆಂಗಳೂರು ಠಾಣೆಯಲ್ಲಿ ದಾಖಲಾದ ಪ್ರಕರಣ - 213
ರಾಜ್ಯದಲ್ಲಿ ಒಟ್ಟಾರೆ ಎಸಿಬಿ ದಾಖಲಿಸಿರುವ ಪ್ರಕರಣ - 1445
ಎಸಿಬಿ ದಾಖಲಿಸಿದ ಪ್ರಕರಣದಲ್ಲಿ ಶಿಕ್ಷೆಯಾದ ಪ್ರಕರಣ - 04
ಎಸಿಬಿ ಪೋಷಣೆಗಾಗಿ ಸರ್ಕಾರ ವ್ಯಯಿಸಿದ್ದು 120 ಕೋಟಿ ರೂ.
ಭ್ರಷ್ಟರ ಸಂಪತ್ತು ಬಚ್ಚಿಡಲು ಎಸಿಬಿ ಬಳಿ ಲಾಕರ್ ಇಲ್ಲ !
ಎಸಿಬಿ ಎಡವುತ್ತಿರುವುದು ಎಲ್ಲಿ
ರಾಜ್ಯದಲ್ಲಿ ಸುಸಜ್ಜಿತ ಭ್ರಷ್ಟಾಚಾರ ನಿಗ್ರಹ ದಳ ರಚಿಸಲಾಗಿದೆ. ಇದು ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಎಸಿಬಿಯ ಎಲ್ಲಾ ಮಾಹಿತಿಯನ್ನು ಅಧಿಕೃತವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕು. ಏನೇ ತೀರ್ಮಾನ ತೆಗೆದುಕೊಳ್ಳುವುದಿದ್ದರೆ ಸಿಎಂ ಗಮನಕ್ಕೆ ಪರೋಕ್ಷವಾಗಿ ಹೋಗಲೇಬೇಕು. ಇನ್ನೂ ಯಾರಾದರೂ ಪೊಲೀಸ್ ಅಧಿಕಾರಿಗಳು ಸರ್ಕಾರವನ್ನು ಎದುರು ಹಾಕಿಕೊಂಡು ಕಾರ್ಯ ವಹಿಸುವ ಮನಸ್ಥಿತಿಯಿಂದ ದೂರವಾಗಿದ್ದಾರೆ. ಹೀಗಾಗಿ ಸಜಜವಾಗಿ ಎಲ್ಲಾ ಇಲಾಖೆಗಳಂತೆ ಎಸಿಬಿ ಕೂಡ ಕಾರ್ಯ ನಿರ್ವಹಿಸಿಕೊಂಡು ಹೋಗುತ್ತಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ ತಿದ್ದುಪಡಿ ಸಮಸ್ಯೆ
ಲಂಚ ಸ್ವೀಕಾರ, ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹೊರತು ಪಡಿಸಿದರೆ ಬೇರೆ ಯಾವುದೇ ದೂರು ಬಂದರೂ, ಸಂಬಂಧ ಪಟ್ಟ ಅಧಿಕಾರಿ, ಜನ ಪ್ರತಿನಿಧಿ ವಿರುದ್ಧ ತನಿಖೆ ನಡೆಸಬೇಕಾದರೆ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಇದು ಎಸಿಬಿ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಜನ ಪ್ರತಿನಿಧಿಗಳ ಅಕ್ರಮ ಆಸ್ತಿ ಗಳಿಕೆ ಬಗ್ಗೆಯಾಗಲೀ , ಭ್ರಷ್ಟಾಚಾರದ ಬಗ್ಗೆಯಾಗಲೀ ಮಾಹಿತಿ ಇರುವರು ಸಾರ್ವಜನಿಕರು. ಸಾರ್ವಜನಿಕರು ನೀಡುವ ದೂರುಗಳನ್ನು ವಿಚಾರಣೆ ನಡೆಸುವ ಮೊದಲೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಹೀಗಾಗಿ ದೂರುಗಳ ರೂಪದಲ್ಲಿ ಬರುತ್ತಿರುವ ಭ್ರಷ್ಟಾಚಾರ ಆರೋಪ ಕುರಿತ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಎಸಿಬಿ ಪೊಲೀಸರ ಕೈ ಕಟ್ಟಿ ಹಾಕಿದಂತಾಗಿದೆ. ದೂರು ಸ್ವರೂಪದಲ್ಲಿ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಎಸಿಬಿ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ನುರಿತ ಅಧಿಕಾರಿಗಳ ಕೊರತೆ : ಲೋಕಾಯುಕ್ತ ಸಂಸ್ಥೆಯ ಅಧೀನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಇದ್ದಾಗ, ಪೊಲೀಸ್ ಅಧಿಕಾರಿಗಳ ಹಿನ್ನೆಲೆ, ಅವರ ಪ್ರಾಮಾಣಿಕತೆ, ಭ್ರಷ್ಟಾಚಾರ ನಿಗ್ರಹ ಪ್ರಕರಣ ತನಿಖೆ ಮಾಡುವಲ್ಲಿ ಅವರ ಜ್ಞಾನದ ಮಾನದಂಡಗಳನ್ನು ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿತ್ತು. ಇದೀಗ ಎಸಿಬಿಗೆ ಪೋಸ್ಟಿಂಗ್ ಕೇಳಿಕೊಂಡು ರಾಜಕಾರಣಿಗಳ ಬಳಿ ಕೈಕಟ್ಟಿ ಕೊಂಡು ಹೋಗಿ ನಿಲ್ಲುವಂತಾಗಿದೆ. ಭ್ರಷ್ಟಾಚಾರ ಆರೋಪ ಹೊತ್ತ ಪೊಲೀಸ್ ಅಧಿಕಾರಿಗಳು ಎಸಿಬಿಗೆ ಎಂಟ್ರಿ ಪಡೆದು ನಾಲ್ಕು ತಿಂಗಳು ಕೆಲಸ ಮಾಡಿ ಇಲ್ಲಿನ ವ್ಯವಸ್ಥೆ ಅರ್ಥ ಮಾಡಿಕೊಂಡು ಕಾಲ್ಕಿತ್ತುವ ಹೊಸ ಸಂಪ್ರದಾಯ ಶುರುವಾಗಿದೆ. ಹೀಗಾಗಿ ನಿಷ್ಠಾವಂತ ಅಧಿಕಾರಿಗಳನ್ನು ಎಸಿಬಿಗೆ ನಿಯೋಜನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಮಾಹಿತಿ ಕಲೆ ಕೊರತೆ
ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಜತೆಗೆ, ಇಂಜಿನಿಯರಿಂಗ್ ವಿಭಾಗ, ನ್ಯಾಯಾಶರನ್ನು ಒಳಗೊಂಡ ವಿಚಾರಣಾ ವಿಭಾಗ ಇತ್ತು. ಟೆಂಡರ್ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ಬಂದರೆ, ಇಂಜಿನಿಯರಿಂಗ್ ವಿಭಾಗ ಪ್ರಾಥಮಿಕ ತನಿಖೆ ನಡೆಸಿ ಅಕ್ರಮ ಕುರಿತು ಮುಖ್ಯ ಇಂಜಿನಿಯರ್ ವರದಿ ನೀಡುತ್ತಿದ್ದರು. ವರದಿ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿತ್ತು. ಅದೇ ರೀತಿ ವಿಚಾರಣಾ ವಿಭಾಗವೂ ಕಾರ್ಯ ನಿರ್ವಹಿಸುತ್ತಿತ್ತು. ಎಸಿಬಿಯಲ್ಲಿ ಪೊಲೀಸ್ ಅಧಿಕಾರಿಗಳು ಬಿಟ್ಟರೆ ಬೇರೆ ಯಾವ ಅಧಿಕಾರಿಯೂ ಇಲ್ಲ. ಭೂ ಅಕ್ರಮ, ಡಿ ನೋಟಿಫಿಕೇಷನ್, ಟೆಂಡರ್ ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದರೂ, ಅದನ್ನು ಪೊಲೀಸರೇ ತನಿಖೆ ನಡೆಸುತ್ತಾರೆ. ಅದೇ ಇಲಾಖೆಗಳಲ್ಲಿ ಕೆಲಸ ಮಾಡಿದ ಪರಿಣಿತರು ಎಸಿಬಿಗೆ ನೋ ಎಂಟ್ರಿ. ಹೀಗಾಗಿ ಕೇವಲ ಲಂಚ ಸ್ವೀಕಾರ ಪ್ರಕರಣ ಮಾತ್ರ ದಾಖಲಾಗತ್ತಿವೆ. ಬಿಟ್ಟರೆ, ಸಾವಿರಾರು ಕೋಟಿ ಲೂಟಿ ಮಾಡುವ ಟೆಂಡರ್ ಅಕ್ರಮ, ಭೂ ಹಗರಣ, ಡಿ ನೋಟಿಫಿಕೇಷನ್ ಅಕ್ರಮಗಳಿಗೆ ಕೈ ಹಾಕಲಾರದೇ ಎಸಿಬಿ ಪೊಲೀಸ್ ಘಟಕ ಅಸಹಾಯಕವಾಗಿದೆ.