ಎಎಪಿ, ಟಿಎಂಸಿ ಗೋವಾ ಚುನಾವಣೆಯಲ್ಲಿ ಬರೀ 'ಕನಿಷ್ಠ ಆಟಗಾರರು'
ಪಣಜಿ, ಅಕ್ಟೋಬರ್ 24: "ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) 2022 ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ 'ಕನಿಷ್ಠ ಆಟಗಾರರು' ಆಗಲಿದ್ದಾರೆ. ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಏರಲು ಬೇಕಾದ ಸಾಮರ್ಥ್ಯವನ್ನು ಹೊಂದಿದೆ," ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ಪಿಟಿಐ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, "ಬಿಜೆಪಿಯೇತರ ಒಕ್ಕೂಟದ ಮುಂದಾಳು ಕಾಂಗ್ರೆಸ್ ಎಂದು ಒಪ್ಪಿಕೊಂಡರೆ ಮಾತ್ರ ಇತರ ಸಣ್ಣ ಪಕ್ಷಗಳೊಂದಿಗೆ ಕಾಂಗ್ರೆಸ್ ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳಲಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
2024ರ ಲೋಕಸಭೆ ಚುನಾವಣೆ ಬಗ್ಗೆ ಪಿ ಚಿದಂಬರಂ ಭವಿಷ್ಯ
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಿ ಚಿದಂಬರಂ ಕಾಂಗ್ರೆಸ್ನ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ 2022 ರ ಗೋವಾ ವಿಧಾನಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, "ತೃಣಮೂಲ ಕಾಂಗ್ರೆಸ್ನ ಗೋವಾ ಪ್ರವೇಶವು ಪಶ್ಚಿಮ ಬಂಗಾಳದಿಂದ ಬಂದ ಹೇರಿಕೆಯ ಪ್ರತಿಫಲವಾಗಿದೆ. ಇತರೆ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡಿಕೊಂಡು ಕಾರ್ಯಕರ್ತರು, ನಾಯಕರು ಬರುವಂತೆ ಮಾಡಿಕೊಂಡು ಗೋವಾದಲ್ಲಿ ಟಿಎಂಸಿ ಘಟಕವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಉದ್ದೇಶ ಏನು ಎಂದು ಮಾತ್ರ ನನ್ನ ಅರಿವಿಗೆ ಈವರೆಗೂ ಬಂದಿಲ್ಲ," ಎಂದು ಟೀಕೆ ಮಾಡಿದ್ದಾರೆ.
''ಗೋವಾವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಅರ್ಥೈಸಿಕೊಳ್ಳುತ್ತದೆ''
"ಮುಂಬರುವ ವರ್ಷದಲ್ಲಿ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ಐದೂ ರಾಜ್ಯಗಳು ಕೂಡಾ ಸಮಾನವಾಗಿ ಮುಖ್ಯವಾದುದು. ಅದರಲ್ಲಿ ಗೋವಾವೂ ಮುಖ್ಯವಾದ ರಾಜ್ಯ. ಗೋವಾದ ಜನರಿಗೆ ಹಾಗೂ ಕಾಂಗ್ರೆಸ್ಗೆ ಬಹಳ ವರ್ಷಗಳಿಂದ ಒಂದು ಉತ್ತಮ ಬಾಂಧವ್ಯವಿದೆ. ಗೋವಾವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಅರ್ಥೈಸಿಕೊಳ್ಳುತ್ತದೆ. ಗೋವಾ ಹಾಗೂ ಗೋವಾದ ಜನರ ಜೀವನ ಶೈಲಿಯು ವಿಭಿನ್ನವಾದುದು," ಎಂದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದರು. "ನಾವು ಗೆಲುವು ಸಾಧಿಸುವ ನಿಟ್ಟಿನಲ್ಲಿ ಹಾಗೂ 2022 ರ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಅಖಾಡಕ್ಕೆ ಇಳಿಯುತ್ತೇವೆ," ಎಂದು ತಿಳಿಸಿದ್ದಾರೆ.
2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ
"ಕಾಂಗ್ರೆಸ್ ನಾಯಕತ್ವದಲ್ಲಿ ಮೈತ್ರಿಯಾದರೆ ಮಾತ್ರ ಒಪ್ಪಿಗೆ"
ಗೋವಾದಲ್ಲಿ ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖ ಎರಡು ಪಕ್ಷಗಳಾಗಿವೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ಗೆ ಪ್ರಮುಖವಾಗಿದೆ. ಈ ನಡುವೆ ಸ್ಥಳೀಯ ಸಣ್ಣ ಪಕ್ಷಗಳು, ಟಿಎಂಸಿ, ಎಎಪಿ ಗೋವಾದಲ್ಲಿ ತನ್ನ ಸಕಾರ ರಚಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿಕೊಂಡಿದೆ. ಈ ನಡುವೆ ಮೈತ್ರಿಯ ಬಗ್ಗೆ ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಬಿದಂಬರಂ, "ಸಣ್ಣ ಪಕ್ಷಗಳು ಈ ಮೈತ್ರಿ ಒಕ್ಕೂಟದ ನಾಯಕತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳುವುದಕ್ಕೆ ಒಪ್ಪಿಕೊಂಡರೆ ಮಾತ್ರ ಮೈತ್ರಿ ಮಾಡಿಕೊಳ್ಳಲು ಸಿದ್ದ," ಎಂದು ಹೇಳಿಕೊಂಡಿದ್ದಾರೆ. "ಸಣ್ಣ ಪಕ್ಷಗಳು ಮನಸು ಮಾಡಿದರೆ ಕೆಲವು ಸ್ಥಾನಗಳಲ್ಲಿ ಅವಕಾಶ ಪಡೆಯುವುದು ಸಾಧ್ಯ ಎಂದು ನಾನು ಭಾವಿಸುತ್ತೇವೆ. ನಾನು ಯಾವುದೇ ನಿರ್ದಿಷ್ಟ ಪಕ್ಷದ ಬಗ್ಗೆ ಊಹೆ ಮಾಡಲು ಸಾಧ್ಯವಿಲ್ಲ," ಎಂದಿದ್ದಾರೆ.
ಗೋವಾದಲ್ಲಿ ಎಎಪಿ, ಟಿಎಂಸಿ ಬರೀ 'ಕನಿಷ್ಠ ಆಟಗಾರರು'
ಈ ಸಂದರ್ಭದಲ್ಲಿ ಎಎಪಿ ಹಾಗೂ ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಥಾನಗಳನ್ನು ಪಡೆಯಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, "ನಮ್ಮ ಒಂದು ಮೌಲ್ಯಮಾಪನದ ಪ್ರಕಾರವಾಗಿ, ಗೋವಾದ 2022 ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಹಾಗೂ ತೃಣಮೂಲ ಕಾಂಗ್ರೆಸ್ ಕನಿಷ್ಠ ಆಟಗಾರರು ಆಗುತ್ತಾರೆ," ಎಂದು ಅಭಿಪ್ರಾಯಿಸಿದ್ದಾರೆ. "2017 ಎಎಪಿ ಇಲ್ಲಿ ಒಂದು ಪ್ರಯೋಗವನ್ನು ಮಾಡಿ ನೋಡಿದೆ. ಆದರೆ ಯಾವುದೇ ಪರಿಣಾಮ ಉಂಟಾಗಿಲ್ಲ. ತೃಣಮೂಲ ಕಾಂಗ್ರೆಸ್ 2021 ರಲ್ಲಿ ಗೋವಾಕ್ಕೆ ಪ್ರವೇಶಿಸಿದೆ. ಇಲ್ಲಿ ಸ್ಥಳೀಯವಾಗಿ ತೃಣಮೂಲ ಕಾಂಗ್ರೆಸ್ನ ಯಾವುದೇ ಕಾರ್ಯಕರ್ತರು ಇಲ್ಲ. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಬೀಜವನ್ನಷ್ಟೇ ಬಿತ್ತಿದೆ," ಎಂದು ಕಾಂಗ್ರೆಸ್ ಹಿರಿಯ ನಾಯಕರು ಹೇಳಿದ್ದಾರೆ. "ಇತರೆ ಪಕ್ಷಗಳಿಂದ ತಮ್ಮ ಟಿಎಂಸಿ ತನ್ನ ಪಕ್ಷಕ್ಕೆ ಕಾರ್ಯಕರ್ತರು, ನಾಯಕರು ಪಕ್ಷಾಂತರ ಮಾಡಿಕೊಳ್ಳುವಂತೆ ಮಾಡಿಕೊಂಡು ಗೋವಾದಲ್ಲಿ ಟಿಎಂಸಿ ಘಟಕವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಉದ್ದೇಶ ಏನು ಎಂದು ಮಾತ್ರ ನನ್ನ ಅರಿವಿಗೆ ಈವರೆಗೂ ಬಂದಿಲ್ಲ," ಎಂದು ತಿಳಿಸಿದ್ದಾರೆ.
'ಯಾವುದೇ ಭರವಸೆ ಇಲ್ಲ..': ರಾಜೀನಾಮೆ ಪತ್ರದಲ್ಲಿ ಸೋನಿಯಾಗೆ ಹೇಳಿದ ಗೋವಾ ಕಾಂಗ್ರೆಸ್ ನಾಯಕ
ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ ಲುಯಿಜಿನೊ ಫಲೆರೊ ಬಗ್ಗೆ ಹೇಳಿದ್ದೇನು?
ಇತ್ತೀಚೆಗೆ ಗೋವಾ ಕಾಂಗ್ರೆಸ್ನಲ್ಲಿ ಭಾರೀ ಸಂಚಲನ ಮೂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದ ಅನುಭವಿ ಗೋವಾ ಕಾಂಗ್ರೆಸ್ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಈಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಬಳಿಕ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. "ಕಾಂಗ್ರೆಸ್ ಪಕ್ಷ ಕುಸಿತ ಕಾಣುವುದನ್ನು ತಡೆಯುವುದರಲ್ಲಿ ಯಾವುದೇ ಭರವಸೆ ಆಗಲಿ ಅಥವಾ ಆಶಯ ಇಲ್ಲ," ಎಂದು ಕೂಡಾ ಲುಯಿಜಿನೊ ಫಲೆರೊ ಹೇಳಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, "ಪಕ್ಷಾಂತರವು ಗೋವಾ ರಾಜಕೀಯಕ್ಕೆ ತಟ್ಟಿದ ಶಾಪದಂತೆ ಆಗಿದೆ. ರಾಜ್ಯದ ಜನರು ಬೇರೆ ಎಲ್ಲಾ ವಿಷಯಕ್ಕಿಂತ ಅಧಿಕವಾಗಿ ಪಕ್ಷಾಂತರ ಮಾಡುವವರ ಮೇಲೆ ಅಸಮಾಧಾನಗೊಳ್ಳುತ್ತಾರೆ. ಪಕ್ಷಾಂತರಿಗಳ ಪಕ್ಷಕ್ಕೆ ಮಿಸ್ಟರ್ ಲುಯಿಜಿನೊ ಫಲೆರೊ ಸೇರ್ಪಡೆ ಆಗಿರುವುದು ನನಗೆ ವಿಷಾದವಾಗಿತ್ತು. ಜನರು ಅದರಲ್ಲೂ ಮುಖ್ಯವಾಗಿ ಲುಯಿಜಿನೊ ಫಲೆರೊರ ಕ್ಷೇತ್ರದ ಜನರು ಈ ಪಕ್ಷಾಂತರದಿಂದಾಗಿ ಬೇಸರಗೊಂಡಿದ್ದಾರೆ. ಆದ್ದರಿಂದ ಲುಯಿಜಿನೊ ಫಲೆರೊ ಕಾಂಗ್ರೆಸ್ ತೊರೆದ ಕಾರಣದಿಂದಾಗಿ ನಮಗೆ ಯಾವುದೇ ಸಂಘಟನಾತ್ಮಕ ತೊಂದರೆ ಉಂಟಾಗಿಲ್ಲ. ಕಾಂಗ್ರೆಸ್ ಲುಯಿಜಿನೊ ಫಲೆರೊರ ಕ್ಷೇತ್ರದಲ್ಲಿ ಕಠಿಣ ಸ್ಪರ್ಧಿಯನ್ನು ಕಣಕ್ಕೆ ಇಳಿಸಲಿದೆ," ಎಂದು ಖಡಕ್ ಆಗಿ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)