ಬೆಳಗಾವಿ ಕುಂದಾ ಕಂಡರಿಯದ ಭರ್ಜರಿ ಮಾರಾಟ
ಬೆಳಗಾವಿ, ಮಾ.14: ಮೂರು ದಿನಗಳ ಕನ್ನಡ ಸಾಂಸ್ಕೃತಿಕ ಜಾತ್ರೆಗೆ ತೆರೆಬಿದ್ದಿದೆ. ಆದರೆ ಬೆಳಗಾವಿಯಿಂದ ಹಿಂತಿರುಗಿದವರು ಬರಿಗೈಲಿ ಬರಲು ಸಾಧ್ಯವೆ? ಕುಂದಾನಗರಿಗೆ ಹೋದವರು ಕುಂದಾ ತರಲಿಲ್ಲ ಎಂದರೆ ಮನೆಮಂದಿ ಸುಮ್ಮನೆ ಬಿಡುತ್ತಾರಾ? ಬಾಯಲ್ಲಿ ನೀರೂರಿಸುವ ಕುಂದಾ ಕೇವಲ ರಾಜ್ಯದಲ್ಲಷ್ಟೇ ಅಲ್ಲ ಹೊರದೇಶಗಳಿಗೂ ರಫ್ತಾಗುತ್ತದೆ ಎಂದರೆ ಇದರ ಮಹತ್ವವನ್ನು ನೀವೇ ಅರಿಯಿರಿ.
ಬೆಳಗಾವಿಯ ವಿಶೇಷ ಸಿಹಿ ತಿನಿಸು ಕುಂದಾಗಾಗಿ ಎಲ್ಲಲ್ಲೂ ಅಹಾಕಾರ. ತಾ ಮುಂದು ನಾ ಮುಂದು ಎಂದು ಗ್ರಾಹಕರು ಕೆಜಿಗಟ್ಟಲೆ ಕುಂದಾ ಖರೀದಿಸಿ ಪಾರ್ಸಲ್ ಕಟ್ಟಿಸಿಕೊಂಡು ಹೋಗಿದ್ದಾರೆ. ಕುಂದಾನಗರಿಯಲ್ಲಿ ಹಿಂದೆದೂ ಕಂಡರಿಯದಷ್ಟು ಕುಂದಾ ಭರ್ಜರಿಯಾಗಿ ಬಿಕರಿಯಾಗಿದೆ. ಅಂಗಡಿ ಮಾಲೀಕರ ಗಲ್ಲಾಪೆಟ್ಟಿಗೆ ಭರ್ತಿಯಾಗಿದೆ.
ಅತುಲ್ ಪುರೋಹಿತ್ ಅವರ ಪ್ರಕಾರ, ಬುಧವಾರದಿಂದ ಸಮ್ಮೇಳನ ಮುಗಿಯುವ ತನಕ ತಮ್ಮ ಅಂಗಡಿಯಲ್ಲಿ ಪ್ರತಿದಿನ 250 ಕೆಜಿ ಕುಂದಾ ಮಾರಾಟವಾಗಿದೆಯಂತೆ. ಕುಂದಾಗೆ ಮುಖ್ಯವಾಗಿ ಕೋವಾ, ಗಟ್ಟಿ ಹಾಗೂ ತಾಜಾ ಹಾಲು ಬೇಕು. ಇದರ ಕೊರತೆಯಿಂದ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬುದು ಅವರ ಅಳಲು.
ಬೆಳಗಾವಿಯ 100ಕ್ಕೂ ಅಧಿಕ ಸ್ವೀಟ್ ಸ್ಟಾಲ್ಗಳಲ್ಲಿ ಸರಿಸುಮಾರು 3,000 ಕೆಜಿ ಕುಂದಾ ಮಾರಾಟವಾಗಿದೆ. ಸಮ್ಮೇಳನದ ಕೊನೆಯ ದಿನವಂತೂ ಗ್ರಾಹಕರು ನೂಕು ನುಗ್ಗ್ಗಲಿನಲ್ಲಿ ಕುಂದಾ ಖರೀದಿಸಬೇಕಾದ ಪರಿಸ್ಥಿತಿ ತಲೆದೋರಿತ್ತು. ಸಮ್ಮೇಳನ ಹಾಗೂ ಬಸ್ ನಿಲ್ದಾಣ ಸಮೀಪದ ಮಳಿಗೆಗಳಲ್ಲಂತೂ ಜನಜಂಗುಳಿಯನ್ನು ಸಂಭಾಳಿಸಲು ಹರಸಾಹಸ ಪಡಬೇಕಾಯಿತು. ಕೆಲವರಂತೂ ಕುಂದಾ ಸಿಗದೆ ಪೆಚ್ಚುಮೋರೆ ಹಾಕಿಕೊಳ್ಳಬೇಕಾಯಿತು.