ಲಹರಿಯಿಂದ ಮೂರು ಸಾವಿರ ಹಾಡುಗಳ ಬೃಹತ್ ಗೀತಗುಚ್ಛ
ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಲಹರಿ ರೆಕಾರ್ಡಿಂಗ್ ಕಂಪನಿ ತನ್ನದೇ ಆದ ಅಳಿಲು ಸೇವೆ ಸಲ್ಲಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 'ಹಚ್ಚೇವು ಕನ್ನಡದ ದೀಪ' ಎಂಬ 3000 ಹಾಡುಗಳ ಬೃಹತ್ ಗೀತಗುಚ್ಛವನ್ನು ಹೊರತಂದಿದೆ. ಇದರ ಜೊತೆಗೆ ಲಹರಿ ಸಂಸ್ಥೆ ಮತ್ತೊಂದು ಹೆಜ್ಜೆಯನ್ನು ಇಟ್ಟಿದ್ದು ಆಡಿಯೋ ಪುಸ್ತಕಗಳನ್ನು ಹೊರತಂದಿದೆ.
ಕುವೆಂಪು, ದ.ರಾ.ಬೇಂದ್ರೆ, ಡಿ.ವಿ.ಜಿ, ಪುತಿನ, ಜಿ ಪಿ ರಾಜರತ್ನಂ, ಎಂ ಗೋಪಾಲಕೃಷ್ಣ ಅಡಿಗ, ಕೆ ಎಸ್ ನರಸಿಂಹಸ್ವಾಮಿ, ಕೆ ಎಸ್ ನಿಸಾರ್ ಅಹಮದ್, ಜಿ ಎಸ್ ಶಿವರುದ್ರಪ್ಪ, ಚೆನ್ನವೀರ ಕಣವಿ, ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಎಚ್ ಎಸ್ ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣರಾವ್, ಡಾ.ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ ಮುಂತಾದ ಕವಿಗಳ ಗೀತೆಗಳಿವೆ.
ಇವುಗಳ ಜತೆಗೆ ದಾಸ ಸಾಹಿತ್ಯ, ವಚನ ಸಾಹಿತ್ಯ, ಭಾವಗೀತೆಗಳು, ಕನ್ನಡ ಜನಪ್ರಿಯ ಚಿತ್ರಗೀತೆಗಳು ಮತ್ತು ಕನ್ನಡ ಸಾಹಿತ್ಯ ಚರಿತ್ರೆ ಸೇರಿದಂತೆ ಒಟ್ಟು 3000 ಹಾಡುಗಳಿವೆ. ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಡಾ.ರಾಜ್ ಕುಮಾರ್, ಪಂ.ಬಸವರಾಜ ರಾಜಗುರು, ಎಸ್ ಪಿ ಬಾಲಸುಬ್ರಹ್ಮಣ್ಯಂ, ಶಿವಮೊಗ್ಗ ಸುಬ್ಬಣ್ಣ, ಸಿ ಅಶ್ವತ್ಥ್, ವೈ ಕೆ ಮುದ್ದುಕೃಷ್ಣ ಮುಂತಾದವರು ಹಾಡಿದ್ದಾರೆ.
ಒಟ್ಟು 50 ಸಿಡಿಗಳಲ್ಲಿ 3000 ಹಾಡುಗಳನ್ನು ಅಡಕವಾಗಿವೆ. ಈ ಬೃಹತ್ ಗೀತಗುಚ್ಛದ ಬೆಲೆ ರು.2999. ಅಂದರೆ ಒಂದು ಹಾಡಿಗೆ ಒಂದು ರೂಪಾಯಿ ಕೊಟ್ಟಂತಾಗುತ್ತದೆ. ಸಂಗೀತ ಮತ್ತು ಸಾಹಿತ್ಯ ಪ್ರಿಯರಿಗೆ ನಾವು ನೀಡುತ್ತಿರುವ ಕಿರು ಕಾಣಿಕೆ ಇದು ಎನ್ನುತ್ತಾರೆ ಲಹರಿ ರೆಕಾರ್ಡಿಂಗ್ ಕಂಪನಿಯ ವೇಲು.
ಲಹರಿ ಸಂಸ್ಥೆ ಹೊರತಂದಿರುವ ಆಡಿಯೋ ಪುಸ್ತಕ ಮತ್ತೊಂದು ಪ್ರಮುಖ ಆಕರ್ಷಣೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ "ಸುಬ್ಬಣ್ಣ ಮತ್ತು ಆಯ್ದ ಕಥೆಗಳು", ಯು ಆರ್ ಅನಂತಮೂರ್ತಿ ಅವರ "ಸಂಸ್ಕಾರ", ಎಸ್ ಎಲ್ ಭೈರಪ್ಪ ಅವರ "ಧರ್ಮಶ್ರೀ", ಚಂದ್ರಶೇಖರ ಕಂಬಾರ ಅವರ "ಸಿಂಗಾರೆವ್ವ ಮತ್ತು ಅರಮನೆ", ಸುಧಾಮೂರ್ತಿ ಅವರ "ಮನದ ಮಾತು" ಆಡಿಯೋ ಪುಸ್ತಕ ರೂಪದಲ್ಲಿ ಹೊರಬಂದಿವೆ.
ನಟ, ರಂಗಕರ್ಮಿ ಸಿ ಆರ್ ಸಿಂಹ, ಋತ್ವಿಕ್ ಸಿಂಹ, ಲಕ್ಷ್ಮಿ ಚಂದ್ರಶೇಖರ್ ಹಾಗೂ ಇತರರು ತಮ್ಮ ವಿಶಿಷ್ಟ ಧ್ವನಿಯಲ್ಲಿ ವಾಚಿಸಿದ್ದಾರೆ. ಪ್ರತಿ ಆಡಿಯೋ ಪುಸ್ತಕದ ಬೆಲೆ ರು.125. ಓದಲು ಸಾಧ್ಯವಾಗದವರು, ಕೇಳಲು ಇಷ್ಟಪಡುವವರು ಈ ಆಡಿಯೋ ಪುಸ್ತಕಗಳನ್ನು ಕೊಳ್ಳಬಹುದು. ವಿವರಗಳಿಗೆ: 2224-1044, 2224-1306.