ಐಶ್ ಗೆ ಮಾಫಿ, ಕರ್ನಾಟಕ ಸರ್ಕಾರಕ್ಕೆ ಠಾಕ್ರೆ ಛೀಮಾರಿ
ಮಾರ್ಚ್ 11 ರ "ಸಾಮ್ನಾ" ಮರಾಠಿ ಆವೃತ್ತಿ ಮುಖಪುಟದಲ್ಲಿ, "ಬೆಳಗಾವಾತ್ ಮರಾಠಿ ಭಾಷಕಾಂವರ ಕಾನಡಿ ಅತ್ಯಾಚಾರಾಚಾ ವರವಂಟಾ' (ಬೆಳಗಾವಿ ಮರಾಠಿ ಭಾಷಿಗರ ಮೇಲೆ ಕನ್ನಡಿಗರಿಂದ ಅತ್ಯಾಚಾರ, ದೌರ್ಜನ್ಯ) ಎಂಬ ಶೀರ್ಷಿಕೆಯಡಿಯಲ್ಲಿ ಈ ಸುದ್ದಿ ಪ್ರಕಟವಾಗಿದೆ. ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಮರಾಠಿ ಭಾಷಿಗರ ಅಂಗಡಿ ಮತ್ತು ಮನೆಗಳನ್ನು ಬುಲ್ಡೋಜರ್ ಬಳಸಿ ಎತ್ತಂಗಡಿ ಮಾಡಲಾಗಿದೆ. ಧ್ವಂಸಗೊಂಡ ಜಾಗದ ಮೇಲೆ ಕನ್ನಡಿಗರು ಹಬ್ಬ ಮಾಡುತ್ತಿದ್ದಾರೆ. ಕನ್ನಡಿಗರು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ ಎಂದು ಬಾಳಾ ಠಾಕ್ರೆ ಪಕ್ಷದ ಮುಖವಾಣಿ ಪತ್ರಿಕೆಯಲ್ಲಿ ಆರೋಪಿಸಿದ್ದಾರೆ.
ಬೆಳಗಾವಿ ಸಮ್ಮೇಳನದ ಶನಿವಾರದ ಚಿತ್ರಗಳು | ಬೆಳಗಾವಿಯಲ್ಲಿ ಝಗಮಗಿಸಿದ ಸಿನೆಮಾ ತಾರೆಯರು
ಕರ್ನಾಟಕ ಸರ್ಕಾರ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದೆ. ಬಿಎಸ್ ಯಡಿಯೂರಪ್ಪ ಗಡಾಫಿಯಂತೆ ವರ್ತಿಸುತ್ತಿದ್ದಾರೆ. ಈ ರೀತಿ ಹತ್ತು ಸಮ್ಮೇಳನ ಮಾಡಿದರೂ ಅಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಮರಾಠಿಗರ ಕುರಿತು ಬೆಳಗಾವಿಯಲ್ಲಿ ಹಾಕಲಾಗಿದ್ದ ಬ್ಯಾನರುಗಳನ್ನು ಕಿತ್ತು ಹಾಕಿ, ಆ ಜಾಗದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕನ್ನಡ ಸಾಹಿತಿಗಳ ಭಿತ್ತಿ ಪತ್ರಗಳನ್ನು ಹಾಕಲಾಗಿದೆ. ಸಮ್ಮೇಳನವನ್ನು ವಿರೋಧಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ ಮರಾಠಿಗರನ್ನು ನಿಯಂತ್ರಿಸಲೆಂದೇ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪತಿಕೆ ವರದಿಯಲ್ಲಿ ಹೇಳಲಾಗಿದೆ.
ಐಶ್ವರ್ಯಾಗೆ ಮಾಫಿ: ಕನ್ನಡ ಹಾಗೂ ಮರಾಠಿ ಅವಳಿ ಸೋದರಿಯರಿದ್ದಂತೆ. ಐಶ್ವರ್ಯಾ ರೈ ಸಮ್ಮೇಳನದಲ್ಲಿ ಭಾಗವಹಿಸುವುದರಲ್ಲಿ ತಪ್ಪೇನಿಲ್ಲ. ಕನ್ನಡ ಭಾಷೆ ಮೇಲೆ ನಮಗೇನೂ ದ್ವೇಷವಿಲ್ಲ. ಆದರೆ, ಬೆಳಗಾಂನ ಮರಾಠಿಗರ ಮೇಲೆ ಸರ್ಕಾರ ನಡೆಸಿರುವ ದೌರ್ಜನ್ಯದ ಬಗ್ಗೆ ನಮ್ಮ ವಿರೋಧವಿದೆ. ಸಮ್ಮೇಳನದಲ್ಲಿ ಮರಾಠಿಗಳ ಪ್ರತಿನಿಧಿಯಾಗಿ ಐಶ್ವರ್ಯಾ ರೈ ಕಾಣಿಸಿಕೊಂಡು, ಮರಾಠಿಗರಿಗೆ ಸಾಂತ್ವನ ಹೇಳಬೇಕಿತ್ತು. ಆದರೆ, ಸಿನಿನಟ, ನಟಿಯರು ಗೊತ್ತಲ್ಲ. ಸಾಂಸ್ಕೃತಿಕ ರಾಯಭಾರಿಗಳಾಗಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಠಾಕ್ರೆ ಬರೆದಿದ್ದಾರೆ.