ಬೆಳಗಾವಿ ಕ್ರೀಡಾಂಗಣದಲ್ಲಿ ಕನ್ನಡಿಗರ ಸುನಾಮಿ
ಶುಕ್ರವಾರ ಸಂಜೆ ಆರು ಗಂಟೆಗೆ ಉದ್ಘಾಟನಾ ಸಮಾರಂಭ ವಿಧ್ಯುಕ್ತವಾಗಿ ಆರಂಭವಾಗಲಿದೆ. ವ್ಯವಸ್ಥಾಪಕರು ಸಂಜೆ 4 ಗಂಟೆಗೆ ಮುಖ್ಯ ಬಾಗಿಲುಗಳನ್ನು ಸಾರ್ವಜನಿಕರಿಗೆ ತೆರೆದ ಕೂಡಲೆ ನೂಕು ನುಗ್ಗಲು ಉಂಟಾಯಿತು. ಜಿಲ್ಲೆ ಜಿಲ್ಲೆಗಳಿಂದ ಬಂದ ಅಪಾರ ಜನಸ್ತೋಮ ಉರಿಬಿಸಿಲು ಲೆಕ್ಕಿಸದೆ ಕ್ರೀಡಾಂಗಣದಲ್ಲಿ ಕುಳಿತುಕೊಳ್ಳಲು ಜಾಗ ಹಿಡಿಯುವ ಸಾಹಸಕ್ಕೆ ಮುಗಿಬಿದ್ದರು. ಇದು ವಿಶ್ವ ಕನ್ನಡಿಗರ ಸುನಾಮಿ.
ಈ ಕ್ರೀಡಾಂಗಣದಲ್ಲಿ 50 ಸಾವಿರ ಜನ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಸುಮಾರು 30 ಸಾವಿರ ಕುರ್ಚಿಗಳನ್ನು ಮೈದಾನದಲ್ಲಿ ಹಾಕಲಾಗಿದೆ. ಆದರೆ, ಕುರ್ಚಿಗಳು ಆಹ್ವಾನಿತರಿಗೆ, ಗಣ್ಯರಿಗೆ, ಪತ್ರಿಕಾ ವರದಿಗಾರರಿಗೆ, ಅಧಿಕಾರಿಗಳಿಗೆ, ಕಲಾವಿದರಿಗೆ, ಹಾಡುವವರಿಗೆ, ಕುಣಿಯುವವರಿಗೆ ಮೀಸಲಾಗಿದೆ. ಕ್ರೀಡಾಂಗಣದ ಗ್ಯಾಲರಿ ಪ್ರದೇಶದಲ್ಲಿ ಕಟ್ಟೆಗಳ ಮೇಲೆ ಸಾರ್ವಜನಿಕರು ಕುಳಿತು ನೋಡುವ ಅವಕಾಶವಿದೆ.
ಬಿಸಿಲು ಇಳಿದು ಕತ್ತಲು ಆವರಿಸುವ ಹೊತ್ತಿಗೆ ಮತ್ತು ರಾತ್ರಿ 9 ಗಂಟೆಗೆ ಆರಂಭವಾಗಲಿರುವ ಕನ್ನಡ ಚಲನಚಿತ್ರ ಕಲಾವಿದರ ರಸಮಂಜರಿ ಕಾರ್ಯಕ್ರಮ ಸಮಯಕ್ಕೆ ಪ್ರೇಕ್ಷಕರ ಸಂಖ್ಯ 1 ಲಕ್ಷ ದಾಟುವ ನಿರೀಕ್ಷೆಯಿದೆ. ಕ್ರೀಡಾಂಗಣದಲ್ಲಿ ನುಗ್ಗಲು ಹರಸಾಹಸ ಪಡುತ್ತಿರುವ ಕನ್ನಡಾಭಿಮಾನಿಗಳನ್ನು ನಿಯಂತ್ರಿಸಲು ಬೆಳಗಾವಿ ಪೊಲೀಸರು ಹರಸಾಹಸಪಡುತ್ತಿದ್ದಾರೆ.